ರಾಂಪುರ: ‘ದೇಶದ ಸಮಗ್ರ ಅಭಿವೃದ್ಧಿಗೆ ಆರ್ಥಿಕ ಸಂಪನ್ಮೂಲ ಒದಗಿಸಿ, ಜನರಿಗೆ ಆರ್ಥಿಕ ಭದ್ರತೆಯ ಜೊತೆ ಜೀವವಿಮೆ ನೀಡುವ ಮಹತ್ತರ ಕಾರ್ಯವನ್ನು ಭಾರತೀಯ ಜೀವ ವಿಮಾ ನಿಗಮ ಮಾಡುತ್ತಿದೆ’ ಎಂದು ಎಲ್ಐಸಿ ಬಾಗಲಕೋಟೆ ಶಾಖೆಯ ವ್ಯವಸ್ಥಾಪಕ ಎಂ.ಡಿ. ರಕ್ಷಿತ ಹೇಳಿದರು.
ಎಲ್ಐಸಿ ಬಾಗಲಕೋಟೆ ಶಾಖೆ ವತಿಯಿಂದ ಬುಧವಾರ ಶಿರೂರ, ಭಗವತಿ, ಬೇವೂರು, ಸುತಗುಂಡಾರ, ರಾಂಪುರಗಳಲ್ಲಿ ಎಲ್ಐಸಿ ಗಿನ್ನಿಸ್ ರೆಕಾರ್ಡ್ ಸಾಧನೆಯ ನಿಮಿತ್ತ ಪ್ರತಿನಿಧಿಗಳು ಮತ್ತು ಗ್ರಾಹಕರನ್ನು ಅಭಿನಂದಿಸಲು ಹಮ್ಮಿಕೊಳ್ಳಲಾಗಿದ್ದ ಕ್ಲಸ್ಟರ್ ಮಟ್ಟದ ಸಭೆಗಳಲ್ಲಿ ಅವರು ಮಾತನಾಡಿದರು.
‘ಎಲ್ಐಸಿ 68 ವರ್ಷಗಳ ಸುದೀರ್ಘ ಅವಧಿಯಲ್ಲಿ ಹಲವು ಸಾಧನೆಗಳನ್ನು ಮಾಡಿದೆ. ವಿಮಾ ಕಂಪನಿಗಳಲ್ಲಿ ಬಹುದೊಡ್ಡ ಸಂಸ್ಥೆಯಾಗಿ ಬೆಳೆದಿದೆ. ವಿಮಾ ಗ್ರಾಹಕರಿಗೆ ಪಾರದರ್ಶಕ ಸೇವೆ ನೀಡುವ ಮೂಲಕ ಹೆಸರು ಮಾಡಿದ್ದು, ಇದೀಗ ಗಿನ್ನಿಸ್ ದಾಖಲೆಯನ್ನು ಪೂರೈಸಿದೆ. ಎಲ್ಐಸಿ ಸಾಮಾಜಿಕವಾಗಿಯೂ ಕಳಕಳಿಯುಳ್ಳ ಸಂಸ್ಥೆಯಾಗಿದೆ’ ಎಂದು ಹೇಳಿದರು.
ಅಭಿವೃದ್ಧಿ ಅಧಿಕಾರಿ ಎ.ಆರ್.ಜಂಬಗಿ ಮಾತನಾಡಿ, ‘ಎಲ್ಐಸಿಯಲ್ಲಿ ವಿಮಾ ಗ್ರಾಮ, ವಿಮಾ ಸ್ಕೂಲ್ ಯೋಜನೆಗಳಿದ್ದು, ಈ ಯೋಜನೆಯಡಿ ಗ್ರಾಮದ ಸಾಮಾಜಿಕ ಕಾರ್ಯಗಳಿಗೆ ಸಹಾಯಧನ ನೀಡಲಾಗುತ್ತಿದೆ. ಇದರ ಪ್ರಯೋಜನ ಪಡೆಯಲು ಸಾರ್ವಜನಿಕರು ಪ್ರತಿನಿಧಿಗಳಿಂದ ಮಾಹಿತಿ ಪಡೆಯಬೇಕು’ ಎಂದರು.
ಭಗವತಿ ಗ್ರಾಮ ಪಂಚಾಯತಿ ಪಿಡಿಒ ಶಶಿಕಲಾ ಕೊಡತೆ, ಕಾರ್ಯದರ್ಶಿ ಪುಟ್ಟು ಲಮಾಣಿ, ಎಲ್ಐಸಿ ಅಭಿವೃದ್ಧಿ ಅಧಿಕಾರಿಗಳಾದ ಎ.ಎಸ್.ತೊಗರಿ, ಚರಣ ಲಗಳಿ, ಭಗವತಿ ಗ್ರಾಮದ ಹಿರಿಯರಾದ ರಾಜು ಮುದೇನೂರ, ಮುದ್ದಣ್ಣ ಹಳ್ಳೂರ, ಮಲ್ಲಣ್ಣ ರಕರಡ್ಡಿ, ಬಸವರಾಜ ರಕರಡ್ಡಿ, ವಿಮಾ ಪ್ರತಿನಿಧಿಗಳಾದ ಎಫ್.ಎನ್. ಮುರನಾಳ, ಸಂಗಣ್ಣ ಕಲ್ಲೋಲ, ಸೊಲಬಣ್ಣ ತಿಮ್ಮಾಪೂರ, ಸುರೇಶ ಕಲಗುಡಿ, ಭೀಮಸಿ ಮಾದರ, ಸಂಜೀವ ಹೊಸಮನಿ, ನಾಗರಾಜ ಹೊಸಮನಿ, ಜಗದೀಶ ಜೈನಾಪೂರ, ಮಹಾಂತೇಶ ಗಟ್ಟಿಗನೂರ, ಪ್ರಕಾಶ ಮಂಕಣಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.