ADVERTISEMENT

ತೇರದಾಳ: ಕಬ್ಬು ಹೇರುವ ಯಂತ್ರ ತಯಾರಿಸಿದ ರೈತ ಬಸಲಿಂಗಪ್ಪ ಬಸಪ್ಪ ಪಟ್ಟಣಶೆಟ್ಟಿ

ಕೂಲಿಕಾರರ ಸಮಸ್ಯೆ ನೀಗಿಸುವ ಉದ್ದೇಶ; ಹಣ, ಸಮಯ ಉಳಿತಾಯ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2020, 13:54 IST
Last Updated 26 ಅಕ್ಟೋಬರ್ 2020, 13:54 IST
ತೇರದಾಳ ತಾಲ್ಲೂಕಿನ ಸಸಾಲಟ್ಟಿ ಗ್ರಾಮದ ರೈತ ಬಸಲಿಂಗಪ್ಪ ಪಟ್ಟಣಶೆಟ್ಟಿ ಸಿದ್ಧಪಡಿಸಿರುವ ಕಬ್ಬು ಹೇರುವ ಯಂತ್ರ
ತೇರದಾಳ ತಾಲ್ಲೂಕಿನ ಸಸಾಲಟ್ಟಿ ಗ್ರಾಮದ ರೈತ ಬಸಲಿಂಗಪ್ಪ ಪಟ್ಟಣಶೆಟ್ಟಿ ಸಿದ್ಧಪಡಿಸಿರುವ ಕಬ್ಬು ಹೇರುವ ಯಂತ್ರ   

ತೇರದಾಳ: ಕೃಷಿ ಚಟುವಟಿಕೆಯಲ್ಲಿ ಕೂಲಿಯಾಳು ಸಮಸ್ಯೆಗೆ ಹಲವಾರು ಯಂತ್ರಗಳು ಬಂದಿವೆ. ಅಂತಹವುಗಳ ನಡುವೆಸಸಾಲಟ್ಟಿ ಗ್ರಾಮದ ಬಸಲಿಂಗಪ್ಪ ಬಸಪ್ಪ ಪಟ್ಟಣಶೆಟ್ಟಿ ಟ್ರಾಕ್ಟರ್, ಬಂಡಿಗಳಿಗೆ ಕಬ್ಬು ಹೇರಲು ಯಂತ್ರ ತಯಾರಿಸಿ ಜನರ ಮೆಚ್ಚುಗೆ ಪಾತ್ರವಾಗಿದ್ದಾರೆ.

ಈ ಯಂತ್ರದಿಂದ ಕೂಲಿಕಾರರ ಕೊರತೆ ನೀಗಿರುವುದು ಮಾತ್ರವಲ್ಲದೇ ರೈತರ ಸಮಯ ಕೂಡ ಉಳಿತಾಯವಾಗಿದೆ. ಹೀಗಾಗಿ ಯಂತ್ರವನ್ನು ನೋಡಲು ತಾಲ್ಲೂಕಿನ ವಿವಿಧೆಡೆಯಿಂದ ಜನರು ಬರುತ್ತಿದ್ದಾರೆ.

ಬಸಲಿಂಗಪ್ಪ ಸುತ್ತಲಿನ ಕಾರ್ಖಾನೆಗಳಿಗೆ 30 ವರ್ಷದಿಂದ ಕಬ್ಬು ಸಾಗಿಸುತ್ತಿದ್ದಾರೆ. ಈಗೀಗ ಕೂಲಿಕಾರರ ಸಮಸ್ಯೆ ಎದುರಾಗತೊಡಗಿತು. ಟ್ರಾಕ್ಟರ್‌ಗಳಿಗೆ ಕಬ್ಬು ಹೇರಲು 20 ಜನರ ಒಂದು ತಂಡಕ್ಕೆ ಕನಿಷ್ಠವೆಂದರೂ ₹50 ಸಾವಿರ ಮುಂಗಡ ಹಣ ನೀಡಬೇಕಿತ್ತು. ಹಣ ಹೊಂದಿಸುವುದು ಕಷ್ಟವಾಗಿ ಕಬ್ಬು ಸಾಗಣೆ ಕಷ್ಟವಾಗಿತ್ತು. ಆಗ ಅವರ ಮಕ್ಕಳಾದ ಹೊಳೆಬಸಪ್ಪ ಹಾಗೂ ರಮೇಶ ಏನಾದರು ದಾರಿ ಮಾಡಿ ಎಂದು ಹೇಳಿದ್ದರು. ಆಗವರ ಸಲಹೆಯಂತೆ ಯಂತ್ರದ ಆವಿಷ್ಕಾರ ಮಾಡಿದ್ದಾರೆ. ಪುತ್ರರ ಬೆಂಬಲದಿಂದ ಮೂರೂವರೆ ತಿಂಗಳು ನಿರಂತರ ಪ್ರಯೋಗ ಮಾಡಿ, ಯಂತ್ರ ಸಿದ್ಧಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ADVERTISEMENT

‘ಸುತ್ತಲಿನ ಹಾರೂಗೇರಿ, ರಾಯಬಾಗ, ಅಥಣಿ ಹಾಗೂ ಮಹಾಲಿಂಗಪುರದ ಗುಜರಿ (ಸ್ಕ್ರ್ಯಾಪ್) ಅಂಗಡಿಗಳನ್ನು ಸುತ್ತಾಡಿ ಹಳೆಯ ವಸ್ತುಗಳನ್ನು ಖರೀದಿಸಿ ಯಂತ್ರ ತಯಾರಿಸುವಲ್ಲಿ ಎರಡು ಬಾರಿ ವಿಫಲರಾಗಿ, ಮೂರನೇ ಬಾರಿ ಯಶಸ್ಸು ಕಂಡೆ’ ಎನ್ನುತ್ತಾರೆ ಬಸಲಿಂಗಪ್ಪ.

‘ಕೊಲ್ಲಾಪುರದಿಂದ ಗೇರ್ ಬಾಕ್ಸ್ ಹಾಗೂ ಡೀಸೆಲ್ ಎಂಜಿನ್ ತಂದು ಅಳವಡಿಸಲಾಗಿದ್ದು, ನೆಲದಿಂದ 20 ಅಡಿಗೂ ಎತ್ತರದ ಟ್ರಾಕ್ಟರ್ ಟ್ರೇಲರ್‌ಗೆ ಈ ಯಂತ್ರ ಕಬ್ಬು ಎತ್ತಿ ಕೊಡುತ್ತದೆ. ಇದಕ್ಕಾಗಿ ₹1.5 ಲಕ್ಷ ಖರ್ಚಾಗಿದೆ. ಒಂದೂವರೆ ಗಂಟೆಯಲ್ಲಿ 20 ಟನ್ ಕಬ್ಬು ಹೇರುತ್ತದೆ. ಕೇವಲ ಒಂದೂವರೆ ಲೀಟರ್ ಡೀಸೆಲ್ ಹಾಕಿದರೆ ಸಾಕು’ ಎಂದರು.

‘ರೈತರು ತಮ್ಮ ಪರಿಸರದಲ್ಲೇ ಸಿಗುವ ವಸ್ತುಗಳ ಬಳಸಿ ಇಂತಹ ಯಂತ್ರಗಳನ್ನು ತಯಾರಿಸಿದರೆ ಹಣ, ಸಮಯ ಉಳಿತಾಯವಾಗಲಿದೆ’ ಎಂದು ಬಸಲಿಂಗಪ್ಪ ಪಟ್ಟಣಶೆಟ್ಟಿ ಹೇಳುತ್ತಾರೆ. ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ: 944881839 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.