ಬಾಗಲಕೋಟೆ: ಜೀವ ಸಂಕುಲದ ಉಳಿವು ಸಸ್ಯಗಳಿಂದಲೇ ಆದಕಾರಣ ಸಸ್ಯ ಸಂಕುಲದ ಉಳಿವಿಗೆ ನಿರಂತರ ಸಂಶೋಧನೆ ಅಗತ್ಯವಾಗಿದೆ ಎಂದು ಬಾಗಲಕೋಟೆ ತೋಟಗಾರಿಕಾ ವಿಶ್ವವಿದ್ಯಾಲಯದ ಅನ್ವಿಕ ಜೀವಶಾಸ್ತ್ರ ಜೈವಿಕ ತಂತ್ರಜ್ಞಾನ ಸಂಶೋಧನಾ ಕೇಂದ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಮಹಾಂತೇಶ ನಾಯಕ ಬಿ.ಎನ್ ಹೇಳಿದರು.
ಬಿ.ವಿ.ವಿ.ಸಂಘದ ಅಕ್ಕಮಹಾದೇವಿ ಮಹಿಳಾ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಕಾಲೇಜಿನ ಸಸ್ಯಶಾಸ್ತ್ರ ಸ್ನಾತಕೋತ್ತರ ವಿಭಾಗ ಹಾಗೂ ಸಂಶೋಧನಾ ಮತ್ತು ಅಭಿವೃದ್ಧಿ ಕೋಶ ಸಹಯೋಗದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಮಂಗಳವಾರ ಆರಂಭಗೊಂಡ 'ಸಂಶೋಧನಾ ವಿಧಾನ ಹಾಗೂ ಬೌದ್ಧಿಕ ಆಸ್ತಿಯ ಹಕ್ಕು' ಕುರಿತು ಎರಡು ದಿನಗಳ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಸಸ್ಯಶಾಸ್ತ್ರ ವಿಸ್ತಾರವಾದ ಕ್ಷೇತ್ರ. ಇಲ್ಲಿ ಸಂಶೋಧನೆಗೆ ಹಲವು ಅವಕಾಶಗಳಿವೆ. ಈ ನಿಟ್ಟಿನಲ್ಲಿ ಹಲವಾರು ಸಂಶೋಧನೆಗಳು ನಿರಂತರವಾಗಿ ನಡೆದಿವೆ. ಸಂಶೋಧನೆ ಸಮಾಜಕ್ಕೆ ಉಪಯೋಗವಾಗಬೇಕು ಎಂದರು.
ತೋಟಗಾರಿಕೆ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾಧ್ಯಾಪಕ ನಾಗರಾಜ ಹೊಳೆಯನ್ನನರ ‘ಸಂಶೋಧನಾ ಲೇಖನ, ಪ್ರಾಜೆಕ್ಟ್ ಹಾಗೂ ಪ್ರಬಂಧಗಳ ರಚನೆಗಳಲ್ಲಿ ಭಾಷೆ ಬಳಕೆ’, ಭಾರತಿ ಮೇಟಿ ‘ಸಂಶೋಧನೆಯಲ್ಲಿ ಭೌದ್ಧಿಕ ಆಸ್ತಿ ಹಕ್ಕು ವ್ಯಾಪ್ತಿ’, ಸಹಾಯಕ ಪ್ರಾಧ್ಯಾಪಕ ರಮೇಶ ‘ಸಂಶೋಧನಾ ವಿಶ್ಲೇಷಣೆಯಲ್ಲಿ ಆರ್ ತಂತ್ರಾಂಶದ ಅನ್ವಯ’ ಕುರಿತು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎಸ್.ಜೆ. ಒಡೆಯರ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಜ್ಞಾನ ಪಡೆಯುವುದು ಬಹುಮುಖ್ಯ. ಪ್ರತಿಯೊಂದರಲ್ಲಿ ಕ್ರಿಯಾತ್ಮಕವಾಗಿ ಪಾಲ್ಗೊಂಡಾಗ ಹೆಚ್ಚು ಅರ್ಥವಾಗುವುದಲ್ಲದೇ ಜೀವನದಲ್ಲಿ ಸಫಲತೆ ಹೊಂದಲು ಸಾಧ್ಯವಾಗಲಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.