ರಬಕವಿ–ಬನಹಟ್ಟಿ: ‘ಕಂದಾಯ ಇಲಾಖೆ ಪ್ರತಿಯೊಂದು ಇಲಾಖೆಯ ಮಾತೃ ಇಲಾಖೆಯಾಗಿದೆ. ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಪ್ರತಿಯೊಬ್ಬರ ಜವಾಬ್ದಾರಿಗಳು ಬಹಳಷ್ಟು ಮಹತ್ವವಾಗಿವೆ. ಸಾರ್ವಜನಿಕರಿಗೆ ಅತ್ಯಂತ ಸಮೀಪದಲ್ಲಿ ಮತ್ತು ನೇರವಾಗಿ ಕಂದಾಯ ಇಲಾಖೆ ಸೇವೆ ಸಲ್ಲಿಸುತ್ತದೆ’ ಎಂದು ರಬಕವಿ ಬನಹಟ್ಟಿ ತಹಶೀಲ್ದಾರ್ ಗಿರೀಶ ಸ್ವಾದಿ ತಿಳಿಸಿದರು.
ಅವರು ಮಂಗಳವಾರ ಇಲ್ಲಿನ ತಹಶೀಲ್ದಾರ್ ಕಾರ್ಯಾಲಯದಲ್ಲಿ ಕಂದಾಯ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾರ್ವಜನಿಕರೂ ಕೂಡಾ ಕಂದಾಯ ಇಲಾಖೆಯ ಅಧಿಕಾರಿಗಳ ಜೊತೆಗೆ ಸಹಕಾರರಿಂದ ವರ್ತಿಸಬೇಕು. ಕಂದಾಯ ಇಲಾಖೆಯ ಅಧಿಕಾರಿಗಳಿಂದ ಸರ್ಕಾರದ ಸೌಲಭ್ಯಗಳ ಮಾಹಿತಿಗಳನ್ನು ಪಡೆದುಕೊಂಡು ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಕೋವಿಡ್ ಸಂದರ್ಭದಲ್ಲಿ ಕಂದಾಯ ಇಲಾಖೆಯ ನೌಕರರು ಸಲ್ಲಿಸಿದ ಸೇವೆ ಶ್ರೇಷ್ಠವಾದುದು. ತಮ್ಮ ಪ್ರಾಣವನ್ನು ಲೆಕ್ಕಿಸದೆ ಅವರು ಸೇವೆಯನ್ನು ಸಲ್ಲಿಸಿದ್ದಾರೆ. ಪ್ರವಾಹ, ಬರಗಾಲ, ಮಳೆ, ಬಿಸಿಲು ಎನ್ನದೆ ಸೇವೆ ಸಲ್ಲಿಸುತ್ತಾರೆ. ಕಂದಾಯ ಇಲಾಖೆಯ ಸೇವೆಯು ಅತ್ಯಂತ ಅಮೂಲ್ಯವಾಗಿದೆ ಎಂದು ತಹಶೀಲ್ದಾರ್ ಸ್ವಾದಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಗ್ರಾಮ ಆಡಳಿತಾಧಿಕಾರಿಗಳಿಗೆ ಲ್ಯಾಪಟಾಪ್ಗಳನ್ನು ವಿತರಣೆ ಮಾಡಿದರು.
ತೇರದಾಳ ತಹಶೀಲ್ದಾರ್ ವಿಜಯಕುಮಾರ ಕಡಕೋಳ, ಗ್ರೇಡ್–2 ತಹಶೀಲ್ದಾರ್ ಸತೀಶಕುಮಾರ ಗೌಡ, ಶಿರಸ್ತೇದಾರ ರಾಜಶೇಖರ ಸಾತಿಹಾಳ, ಎಸ್.ಎಂ.ಕೂಗಾಟೆ, ಕಂದಾಯ ನಿರೀಕ್ಷಕ ಪ್ರಕಾಶ ಮಠಪತಿ, ಮಲ್ಲಿಕಾರ್ಜುನ ಖವಟಕೊಪ್ಪ, ಸದಾಶಿವ ಕುಂಬಾರ ಸೇರಿದಂತೆ ಗ್ರಾಮ ಆಡಳಿತಾಧಿಕಾರಿಗಳು ಮತ್ತು ಕಾರ್ಯಾಲಯದ ಸಿಬ್ಬಂದಿ ವರ್ಗದವರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.