ADVERTISEMENT

ಅಕ್ರಮ ಮರಳು, ಜೆಲ್ಲಿ ಕಲ್ಲು ವಶ

ಉಪವಿಭಾಗಾಧಿಕಾರಿ ಗಾರ್ಗಿ ಜೈನ್‌ ನೇತೃತ್ವದ ತಂಡ ದಾಳಿ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2018, 7:28 IST
Last Updated 10 ಮಾರ್ಚ್ 2018, 7:28 IST
ಅಕ್ರಮ ಮರಳು, ಜೆಲ್ಲಿ ಕಲ್ಲು ವಶ
ಅಕ್ರಮ ಮರಳು, ಜೆಲ್ಲಿ ಕಲ್ಲು ವಶ   

ಕಂಪ್ಲಿ: ಪಟ್ಟಣದ ವಿವಿಧ ಕಡೆ ಅಕ್ರಮವಾಗಿ ಸಂಗ್ರಹಿಸಿದ್ದ ಮರಳು, ಜೆಲ್ಲಿಕಲ್ಲು ಅಡ್ಡೆಗಳ ಮೇಲೆ ಉಪವಿಭಾಗಾಧಿಕಾರಿ ಗಾರ್ಗಿ ಜೈನ್‌ ಬುಧವಾರ ರಾತ್ರಿ ದಾಳಿ ನಡೆಸಿ ಅವುಗಳನ್ನು ವಶಕ್ಕೆ ಪಡೆದಿದ್ದಾರೆ.

‘ಸ್ಥಳೀಯ ಶಾಂತಿನಿಕೇತನ ಶಾಲೆ ಬಳಿ ಸಂಗ್ರಹಿಸಿದ್ದ 182 ಕ್ಯುಬೆಕ್‌ ಮೀಟರ್‌ ಮರಳು, 73 ಕ್ಯುಬೆಕ್ ಮೀಟರ್‌ ಜೆಲ್ಲಿಕಲ್ಲು, ಸೋಮೇಶ್ವರ ದೇವಸ್ಥಾನ ಬಳಿ ಇದ್ದ 90 ಕ್ಯುಬೆಕ್‌ ಮೀಟರ್‌ ಮರಳು, 110 ಕೆ.ವಿ. ವಿದ್ಯುತ್‌ ಸರಬರಾಜು ಕೇಂದ್ರದ ಹಿಂಭಾಗದಲ್ಲಿದ್ದ 213 ಕ್ಯುಬೆಕ್‌ ಮೀಟರ್‌ ಮರಳು ಮತ್ತು ಸಣಾಪುರ ಕಾಲುವೆ ಅಯ್ಯಪ್ಪ ಸ್ವಾಮಿ ದೇವಸ್ಥಾನ ಬಳಿ ಸಂಗ್ರಹಿಸಿದ್ದ 95 ಕ್ಯುಬೆಕ್‌ ಮೀಟರ್‌ ಜೆಲ್ಲಿಕಲ್ಲು, 12 ಕ್ಯುಬೆಕ್‌ ಮೀಟರ್‌ ಮರಳು ಹಾಗೂ ಜೆ.ಸಿ.ಬಿ. ಯಂತ್ರವನ್ನು ದಾಳಿ ವೇಳೆ ವಶಕ್ಕೆ ಪಡೆಯಲಾಗಿದೆ’ ಎಂದು ತಹಶೀಲ್ದಾರ್‌ ಬಿ. ರವೀಂದ್ರಕುಮಾರ್‌ ತಿಳಿಸಿದರು.

‘ಅಕ್ರಮ ಮರಳು, ಜೆಲ್ಲಿಕಲ್ಲು ಸಂಗ್ರಹಿಸಿದ್ದ ಚಾಂದ್‌ಬಾಷಾ, ಹನುಮಂತಪ್ಪ, ರಾಜೇಶ್‌ ಎಂಬುವವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ಮರಳು, ಜೆಲ್ಲಿಕಲ್ಲು ಒಟ್ಟು ಮೌಲ್ಯವನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ನೋಡಿ ಲೆಕ್ಕ ಮಾಡಿದ ನಂತರ ಅದರ ಮೌಲ್ಯ ಎಷ್ಟೆಂಬುದು ಗೊತ್ತಾಗಲಿದೆ’ ಎಂದು ತಿಳಿಸಿದರು.

ADVERTISEMENT

ಕಂದಾಯ ನಿರೀಕ್ಷಕ ಎಸ್.ಎಸ್. ತಂಗಡಗಿ, ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ ಪ್ರಾಣೇಶ್, ಎ.ಎಸ್‌.ಐ. ಚನ್ನವೀರಣ್ಣ ಎ.ಜೆ., ಗ್ರಾಮ ಲೆಕ್ಕಾಧಿಕಾರಿಗಳು, ಪೊಲೀಸರು ದಾಳಿಯಲ್ಲಿ ಭಾಗವಹಿಸಿದ್ದರು.

ಮದ್ಯದ ಅಂಗಡಿ ಮೇಲೆ ದಾಳಿ: ಉಪವಿಭಾಗಾಧಿಕಾರಿ ಗಾರ್ಗಿ ಜೈನ್‌ ಅವರು ಬುಧವಾರ ರಾತ್ರಿ ಪಟ್ಟಣದ ಹಳೆ ಬಸ್ ನಿಲ್ದಾಣ, ಉದ್ಭವ ಮಹಾಗಣಪತಿ ದೇವಸ್ಥಾನದ ಬಳಿಯ ಮದ್ಯ ಅಂಗಡಿ ಹಾಗೂ ಮಾರುತಿನಗರ ರಸ್ತೆಯ ಮದ್ಯದ ಅಂಗಡಿ ಮೇಲೆ ದಾಳಿ ನಡೆಸಿ ದಾಖಲೆ ಪರಿಶೀಲಿಸಿದ್ದಾರೆ. ಮಾರಾಟ ನಿಯಮ ಉಲ್ಲಂಘಿಸಿದ ಒಂದು ಅಂಗಡಿಗೆ ನೋಟಿಸ್ ನೀಡಿದ್ದು, ಎರಡು ಅಂಗಡಿಗಳಿಗೆ ಬೀಗ ಹಾಕಿ ಕ್ರಮ ಜರುಗಿಸಿದ್ದಾರೆ.

ಮರಿಯಮ್ಮನಹಳ್ಳಿ ವರದಿ: ಉಪವಿಭಾಗಾಧಿಕಾರಿ ಜೈನ್‌ ನೇತೃತ್ವದ ತಂಡ ಬುಧವಾರ ರಾತ್ರಿ ಪಟ್ಟಣದಲ್ಲಿ ದಾಳಿ ನಡೆಸಿ ಎರಡು ಮದ್ಯದ ಅಂಗಡಿಗಳಿಗೆ ಬೀಗ ಹಾಕಿದೆ.

ಸ್ಥಳಿಯ ಲಕ್ಷ್ಮಿ ವೈನ್ಸ್, ನವರಂಗ್‌ ವೈನ್ಸ್‌ ಶಾಪ್‌ ಮೇಲೆ ದಾಳಿ ನಡೆಸಿದರು. ನಿಯಮಗಳನ್ನು ಪಾಲಿಸದೇ ಅಂಗಡಿಗಳನ್ನು ನಡೆಸುತ್ತಿರುವುದನ್ನು ಕಂಡು ಮಾಲೀಕರನ್ನು ತರಾಟೆಗೆ ತೆಗೆದುಕೊಂಡರು. ನಂತರ ಬೀಗ ಹಾಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.