ADVERTISEMENT

ಅಮರದೇವರಗುಡ್ಡ: ಬಾಲಕಿ ಸಾವು; ಡೆಂಗೆ ಶಂಕೆ

ತಾಂಡಾಕ್ಕೆ ಆರೋಗ್ಯ ಇಲಾಖೆ ಸಿಬ್ಬಂದಿ ಭೇಟಿ

​ಪ್ರಜಾವಾಣಿ ವಾರ್ತೆ
Published 1 ಜೂನ್ 2013, 10:15 IST
Last Updated 1 ಜೂನ್ 2013, 10:15 IST
ಕೂಡ್ಲಿಗಿ ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಅಮರದೇವರಗುಡ್ಡ ಹಾಗೂ ತಾಂಡಾ ಸುತ್ತಲಿನ ಗ್ರಾಮಗಳ್ಲ್ಲಲಿ ಶಂಕಿತ ಡೆಂಗೆ ಪ್ರಕರಣಗಳು ಕಾಣಿಸಿಕೊಂಡಿರುವುದರಿಂದ ಶುಕ್ರವಾರ ಆರೋಗ್ಯ ಇಲಾಖೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿತು.
ಕೂಡ್ಲಿಗಿ ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಅಮರದೇವರಗುಡ್ಡ ಹಾಗೂ ತಾಂಡಾ ಸುತ್ತಲಿನ ಗ್ರಾಮಗಳ್ಲ್ಲಲಿ ಶಂಕಿತ ಡೆಂಗೆ ಪ್ರಕರಣಗಳು ಕಾಣಿಸಿಕೊಂಡಿರುವುದರಿಂದ ಶುಕ್ರವಾರ ಆರೋಗ್ಯ ಇಲಾಖೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿತು.   

ಕೂಡ್ಲಿಗಿ: ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಅಮರದೇವರಗುಡ್ಡ ಗ್ರಾಮ ಮತ್ತು ತಾಂಡಾದಲ್ಲಿ ಕಳೆದ 15 ದಿನಗಳಿಂದ 100ಕ್ಕೂ ಹೆಚ್ಚು ಜನರು ಜ್ವರದಿಂದ ಬಳಲುತ್ತಿರುವುದು ಬೆಳಕಿಗೆ ಬಂದಿದೆ. ರಾಧಿಕಾ (7) ಎಂಬ ಬಾಲಕಿಯು ಜ್ವರದಿಂದ ಹೊಸಪೇಟೆಯ ಖಾಸಗಿ ಆಸ್ಪತ್ರೆಯೊಂದರ್ಲ್ಲಲಿ ಮೃತಪಟ್ಟಿರುವ ವಿಷಯ ತಡವಾಗಿ ಬೆಳಕಿಗೆ ಬಂದಿದೆ.

ಅಲ್ಲದೆ ರೇಖಾ (14) ಎಂಬ ಬಾಲಕಿಯೂ ಸಹ ಜ್ವರದಿಂದ ಬಳಲುತ್ತಿದ್ದು, ಹೊಸಪೇಟೆಯ ಖಾಸಗಿ ಆಸ್ಪತ್ರೆಯ ವಿವರಗಳ ಪ್ರಕಾರ ಶಂಕಿತ ಡೆಂಗೆ ಜ್ವರವಿದೆ. ಈ ರೀತಿಯ್ಲ್ಲಲಿ ಗ್ರಾಮದಲ್ಲಿ 100ಕ್ಕೂ ಹೆಚ್ಚು ಜನರು ಜ್ವರದಿಂದ ಬಳಲುತ್ತಿದ್ದು, 8 ಜನರಿಗೆ ಶಂಕಿತ ಡೆಂಗೆ ಜ್ವರ ಇದೆ ಎಂದು ಗ್ರಾಮಸ್ಥರು ಹೇಳುತ್ತಾರೆ. ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಆರೋಗ್ಯ ಇಲಾಖೆಯ ಸಿಬ್ಬಂದಿ, ಜ್ವರದಲ್ಲಿಯೇ ವಿವಿಧ ಪ್ರಕಾರಗಳಿದ್ದು, ಎಲ್ಲವನ್ನೂ ಡೆಂಗೆ ಎಂದು ಹೇಳಲಾಗುವುದಿಲ್ಲ ಎಂದು ಹೇಳಿದರು. ಗ್ರಾಮದಲ್ಲಿ ಜ್ವರದಿಂದ ಬಳಲುತ್ತಿರುವ ಅನೇಕ ಜನ ಬಳ್ಳಾರಿ, ಹೊಸಪೇಟೆ, ದಾವಣಗೆರೆಯ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರಾದರೂ ಇದುವರೆಗೆ ನಿಖರ ಮಾಹಿತಿ ದೊರೆಯುತ್ತಿಲ್ಲ.

ಇದೆಲ್ಲದಕ್ಕೂ ಕಲುಷಿತ ನೀರೆ ಕಾರಣ ಗ್ರಾಮಸ್ಥರು ಹೇಳುತ್ತಾರೆ. ಗ್ರಾಮದಲ್ಲಿ ಸ್ವಚ್ಛತೆಯಿಲ್ಲ, ಕುಡಿಯುವ ನೀರಿನ ಟ್ಯಾಂಕ್‌ನ್ನು ಸ್ವಚ್ಛಗೊಳಿಸದೇ ಇರುವುದರಿಂದಾಗಿ ನೀರಿನಲ್ಲಿ ಸೊಳ್ಳೆಗಳ ಲಾರ್ವಾಗಳು ಸ್ಪಷ್ಟವಾಗಿಯೇ ಕಾಣುತ್ತವೆ ಎಂದು ಗ್ರಾಮದ ಕೆ.ಎಸ್. ಬಸವರಾಜ್ ಹೇಳುತ್ತಾರೆ.
ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿದ ಆರೋಗ್ಯ ಇಲಾಖೆಯ ಸಿಬ್ಬಂದಿಯನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡ ಪ್ರಸಂಗವೂ ನಡೆಯಿತು. ಇಷ್ಟ್ಲ್ಲೆಲ ಜನತೆ ವಿಪರೀತ ಜ್ವರದಿಂದ ಬಳಲುತ್ತಿದ್ದರೂ ಇದುವರೆಗೂ ಗ್ರಾಮಕ್ಕೆ ಯಾವುದೇ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಭೇಟಿ ನೀಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಪ್ರತಿ ಮನೆಗಳಿಗೂ ಭೇಟಿ ನೀಡಿದ ಕಿರಿಯ ಆರೋಗ್ಯ ಸಹಾಯಕಿ ಜಿ.ಸರೋಜಾ ಹಾಗೂ ಆಶಾ ಕಾರ್ಯಕರ್ತೆಯರು ಜ್ವರದಿಂದ ಬಳಲುವವರ ಸಮೀಕ್ಷೆ ನಡೆಸಿ, ರಕ್ತ ಪರೀಕ್ಷೆಗಾಗಿ ರಕ್ತದ ಮಾದರಿ ಪಡೆದರು. ಈ ಎಲ್ಲ ಕಾರಣಗಳಿಂದ ಅಮರದೇವರಗುಡ್ಡ ಹಾಗೂ ಪಕ್ಕದ ಗ್ರಾಮಗಳ ಜನತೆ ಭೀತರಾಗಿದ್ದು, ತಕ್ಷಣವೇ ಆರೋಗ್ಯ ಇಲಾಖೆ ಭೇಟಿ ನೀಡಿ ಜನತೆಗೆ ತಿಳಿ ಹೇಳಬೇಕಾಗಿದೆ, ಸಂಬಂಧಿಸಿದ ಇಲಾಖೆ ಸ್ವಚ್ಛತಾ ಕಾರ್ಯ ಕೈಗೊಳ್ಳಬೇಕಾಗಿದೆ. ಸ್ಥಳೀಯ ಪ.ಪಂ ಅಧಿಕಾರಿಗಳು ಈಗಾಗಲೇ ಗ್ರಾಮದ ಎಲ್ಲ ಚರಂಡಿ ಸ್ವಚ್ಛಗೊಳಿಸಿದ್ದು, ಸೊಳ್ಳೆ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನೂ ಕೈಗೊಳ್ಳಬೇಕಾಗಿದೆ ಎಂದು ಗ್ರಾಮದ ಕೆ.ವೀರಣ್ಣ, ಕೆ.ವೀರಭದ್ರಪ್ಪ, ಪಿ.ಕುಬೇರಪ್ಪ, ಟಿ.ಬಸಪ್ಪ, ಟಿ.ದುರುಗಪ್ಪ, ಎಲ್.ವೆಂಕಟೇಶ್ ಹೇಳುತ್ತಾರೆ.

ಡೆಂಗೆ ಉಲ್ಬಣ: 6 ಪ್ರಕರಣ ಪತ್ತೆ
ಹೂವಿನಹಡಗಲಿ: ತಾಲ್ಲೂಕಿನಲ್ಲಿ ಡೆಂಗೆ ಜ್ವರ ಬಾಧೆ ಕಾಣಿಸಿಕೊಂಡಿದ್ದು, ಶಂಕಿತ 6 ಪ್ರಕರಣಗಳು ಪತ್ತೆಯಾಗಿವೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ಪಟ್ಟಣದಲ್ಲಿ 2, ಹೊಳಗುಂದಿ, ಬಾವಿಹಳ್ಳಿ, ಸೋಗಿ, ಕತ್ತೆಬೆನ್ನೂರು ಗ್ರಾಮಗಳಲ್ಲಿ ತಲಾ ಒಂದೊಂದು ಡೆಂಗೆ ಪ್ರಕರಣ ಪತ್ತೆಯಾಗಿದೆ. ಶಂಕಿತ ರೋಗಿಗಳು ದಾವಣಗೆರೆ, ಹೊಸಪೇಟೆ, ಮಣಿಪಾಲ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರೆಲ್ಲರೂ ಈಗ ಚೇತರಿಕೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಡೆಂಗೆ ಪತ್ತೆಯಾಗಿದ್ದು, ಸಾರ್ವಜನಿಕರು ಆತಂಕದಲ್ಲಿದ್ದಾರೆ. ಪ್ರತಿವರ್ಷ ಇಲ್ಲಿ ಡೆಂಗೆ ಮಹಾಮಾರಿಯ ರುದ್ರನರ್ತನ ನಡೆಯುತ್ತಿದ್ದರೂ ತಾಲ್ಲೂಕು ಆಡಳಿತ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಜನರು ಆರೋಪಿಸಿದ್ದಾರೆ.

ರೋಗಕ್ಕೆ ಕಾರಣವಾಗಿರುವ ಸೊಳ್ಳೆಗಳ ನಿಯಂತ್ರಣಕ್ಕೆ ನಿರಂತರ ಫಾಗಿಂಗ್ ಮಾಡುವ ವ್ಯವಸ್ಥೆ ಇಲ್ಲ. ಹೂವಿನಹಡಗಲಿ ಮತ್ತು ಸುತ್ತಲಿನ ಪ್ರದೇಶದಲ್ಲಿ ನೈರ್ಮಲ್ಯ ವ್ಯವಸ್ಥೆ ಸಂಪೂರ್ಣ ಹದಗೆಟ್ಟು ಹೋಗಿದೆ. ಹೀಗಾಗಿ ಡೆಂಗೆ, ಚಳಿಜ್ವರ, ಮಲೇರಿಯ, ಕಾಲರಾದಂತಹ ಸಾಂಕ್ರಾಮಿಕ ರೋಗಗಳು ಹೆಚ್ಚಾಗಿವೆ. ಜನಾರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದ್ದರೂ ನೈರ್ಮಲ್ಯಕ್ಕೆ ಪಟ್ಟಣ ಪಂಚಾಯ್ತಿ ಮತ್ತು ಗ್ರಾಮ ಪಂಚಾಯ್ತಿಗಳು ಒತ್ತು ನೀಡುತ್ತಿಲ್ಲ ಎಂಬುದು ಸಾರ್ವಜನಿಕರ ದೂರು.

ಟಿಎಚ್‌ಓ ಪ್ರತಿಕ್ರಿಯೆ
ತಾಲ್ಲೂಕಿನಲ್ಲಿ 6 ಶಂಕಿತ ಡೆಂಗೆ ಪ್ರಕರಣ ಪತ್ತೆಯಾಗಿದ್ದರಿಂದ ಆರೋಗ್ಯ ಇಲಾಖೆ ತೀವ್ರ ನಿಗಾ ವಹಿಸಿದೆ. ಡೆಂಗೆ ಪತ್ತೆಯಾಗಿರುವ ಪ್ರದೇಶದಲ್ಲಿ ಲಾರ್ವಾ ಸಮೀಕ್ಷೆ ನಡೆಸಲಾಗಿದೆ. ಎಲ್ಲ ಗ್ರಾಮ ಪಂಚಾಯ್ತಿ ಮತ್ತು ಪುರಸಭೆಗೆ ಸೂಚನೆ ನೀಡಿ ನೈರ್ಮಲ್ಯಕ್ಕೆ ಒತ್ತು ನೀಡುವಂತೆ ತಿಳಿಸಲಾಗಿದೆ. 10-12 ದಿನಕ್ಕೊಮ್ಮೆ ನೀರು ಪೂರೈಕೆ ಆಗುತ್ತಿರುವುದರಿಂದ ಸಂಗ್ರಹಿಸಿದ ನೀರನ್ನು ಖಾಲಿ ಮಾಡಿಸಲು ಸಾಧ್ಯವಾಗುತ್ತಿಲ್ಲ. ರೋಗ ನಿಯಂತ್ರಣದಲ್ಲಿಡಲು ಆರೋಗ್ಯ ಇಲಾಖೆ ಎಲ್ಲಾ ಕ್ರಮ ಕೈಗೊಂಡಿದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಬಸವರಾಜ `ಪ್ರಜಾವಾಣಿ'ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.