ADVERTISEMENT

ಕೇಂದ್ರ ಕಾರಾಗೃಹದಲ್ಲಿ ಸಿನಿಮಾ ಚಿತ್ರೀಕರಣ

​ಪ್ರಜಾವಾಣಿ ವಾರ್ತೆ
Published 4 ಜನವರಿ 2013, 8:30 IST
Last Updated 4 ಜನವರಿ 2013, 8:30 IST
ಚಿತ್ರೀಕರಣದಲ್ಲಿ ಪಾಲ್ಗೊಂಡ ನಟಿ ರಾಧಾ.
ಚಿತ್ರೀಕರಣದಲ್ಲಿ ಪಾಲ್ಗೊಂಡ ನಟಿ ರಾಧಾ.   

ಬಳ್ಳಾರಿ: ವಿವಿಧ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳು, ಅವರನ್ನು ನೋಡಿಕೊಳ್ಳುವ ಸಿಬ್ಬಂದಿ ಮಾತ್ರವಿರುವ ಸ್ಥಳೀಯ ಕೇಂದ್ರ ಕಾರಾಗೃಹದಲ್ಲಿ ಕಳೆದ ಎರಡು ದಿನಗಳಿಂದ `ಆ್ಯಕ್ಷನ್', `ಕಟ್' ಸದ್ದು ಶುರುವಾಗಿದೆ.

ಕಾರಾಗೃಹದ ಆವರಣದಲ್ಲಿನ ಬಂದೀಖಾನೆಗಳ ಸುತ್ತಮುತ್ತ, ಇನ್ನೂ ಹೆಸರಿಡದ ಕನ್ನಡ ಚಲನಚಿತ್ರ ಒಂದರ ಚಿತ್ರೀಕರಣ ಬುಧವಾರ ಆರಂಭವಾಗಿದ್ದು, ಇದೇ ಮೊದಲ ಬಾರಿ ನಿರ್ದೇಶನದ ಜವಾಬ್ದಾರಿ ಹೊತ್ತಿರುವ ಗಡ್ಡ ವಿಜಿ ಅವರೊಂದಿಗೆ 140 ಕಲಾವಿದರು ಹಾಗೂ 80 ಜನ ತಂತ್ರಜ್ಞರು ಆಗಮಿಸಿದ್ದಾರೆ.

ಏಳು ದಿನಗಳ ಕಾಲ ಕಾರಾಗೃಹದಲ್ಲಿ ಈ ಚಿತ್ರದ ಹಾಡು ಸೇರಿದಂತೆ ವಿವಿಧ ಸನ್ನಿವೇಶಗಳ ಚಿತ್ರೀಕರಣ ನಡೆಯಲಿದ್ದು, 4 ದಿನಗಳ ಕಾಲ ಜಿಲ್ಲೆಯ ಸಂಡೂರಿನ  ಬೆಟ್ಟಗುಡ್ಡಗಳು, ಗಣಿ ಪ್ರದೇಶಗಳು ಹಾಗೂ ರೈಲು ಹಳಿಗಳ ಮೇಲೆ ಈ ತಂಡ ಚಿತ್ರೀಕರಣ ನಡೆಸಲಿದೆ.

ಗುರುವಾರ ಹಾಡೊಂದರ ಚಿತ್ರೀಕ ರಣ ನಡೆದಿದ್ದು, ಪ್ರಮುಖ ಪಾತ್ರದಲ್ಲಿ ನೀನಾಸಂ ಸತೀಶ್, ರಾಜೀವ್ ನಟರಂಗ್, ಗಂಧರ್ವ, ಅರಸ್, ಕೃಷ್ಣ ಅಡಿಗ, ನಾಯಕಿಯ ರಾಧಾ ಸೋನುಗೌಡ, ಕಲ್ಪನಾ ಪಂಡಿತ್, ಶ್ರುತಿ ಹರಿಹರನ್  ಕಾಣಿಸಿಕೊಂಡರು.

ಕೈದಿಗಳ ಜೀವನ ಕುರಿತು, ಅವರ ಮನಃ ಪರಿವರ್ತನೆ, ಕಾರಾಗೃಹದೊಳಗಿನ ಸ್ಥಿತಿಗತಿ ಕುರಿತ ಕಥೆಯನ್ನು, ಚಿತ್ರಕತೆಯನ್ನೂ ಗಡ್ಡ ವಿಜಿ ಅವರೇ ಸಿದ್ಧಪಡಿಸಿದ್ದು, ಜೈಲರ್ ಪಾತ್ರದಲ್ಲಿ ನಿರ್ದೇಶಕ ಯೋಗ್‌ರಾಜ್ ಭಟ್ ಕಾಣಿಸಿಕೊಳ್ಳಲಿದ್ದಾರೆ.ಶುಕ್ರವಾರ ಬಳ್ಳಾರಿಗೆ ಆಗಮಿಸಲಿರುವ ಅವರು ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ. ಏಪ್ರಿಲ್ ವೇಳೆಗೆ ಚಿತ್ರ ಬಿಡುಗಡೆ ಮಾಡುವ ಕುರಿತು ಆಲೋಚಿಸಲಾಗು ತ್ತಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.

ಇದೀಗ ದ್ವಿತೀಯ ಹಂತದ ಚಿತ್ರೀಕರಣ ನಡೆಸಲಾಗುತ್ತಿದೆ. ನಂತರ ಬೆಂಗಳೂರು, ವಿಜಾಪುರ, ಗುಲ್ಬರ್ಗಾ, ಕೆಜಿಎಫ್, ಮೈಸೂರುಗಳಲ್ಲಿ ಚಿತ್ರೀಕರಣ ನಡೆಯಲಿದೆ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.