ADVERTISEMENT

ನಗೆಪಾಟಲಿಗೆ ಈಡಾದ ಸದಸ್ಯರು

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2012, 4:30 IST
Last Updated 16 ಫೆಬ್ರುವರಿ 2012, 4:30 IST

ಬಳ್ಳಾರಿ: `ಇತ್ತೀಚೆಗೆ ಹಗರಿ ಬೊಮ್ಮನ ಹಳ್ಳಿಯಲ್ಲಿ ನಡೆದ ಸಾರಿಗೆ ಸಂಸ್ಥೆಯ ಬಸ್ ಘಟಕದ ಉದ್ಘಾಟನಾ ಸಮಾರಂಭಕ್ಕೆ ನಮ್ಮನ್ನು ಆಹ್ವಾನಿಸದೆ ಶಿಷ್ಟಾಚಾರ ಉಲ್ಲಂಘಿಸಲಾಗಿದೆ. ಕಡೆಗಣಿಸಿ  ಅವಮಾನಿಸಿದ್ದನ್ನು ವಿರೋಧಿಸಿ ಘಟಕದ ಎದುರು ಪ್ರತಿಭಟನೆ ಮಾಡಲು ನಿರ್ಧರಿಸಿದ್ದೇವೆ~

ಜಿಲ್ಲಾ ಪಂಚಾಯಿತಿಯಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಈ ರೀತಿ ಎಚ್ಚರಿಕೆ ನೀಡಿದ ಜಿಲ್ಲೆಯ ಹಗರಿ ಬೊಮ್ಮನಹಳ್ಳಿ ತಾಲ್ಲೂಕಿನ ನಾಲ್ವರು ಜಿ.ಪಂ. ಸದಸ್ಯರು ನಗೆಪಾಟಲಿಗೆ ಈಡಾದರು.

ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿಲ್ಲ. ಜಿಲ್ಲಾ ಪಂಚಾಯಿತಿ ಸದಸ್ಯರು ಸಂಸ್ಥೆಯ ಶಿಷ್ಟಾಚಾರಕ್ಕೆ ಒಳಪಡುವುದಿಲ್ಲ. ಅದೊಂದು ಸ್ವಾಯತ್ತ ಸಂಸ್ಥೆ ಎಂದು ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಮಂಜುನಾಥ ನಾಯಕ ಅವರು ತಿಳಿಸುತ್ತಿದ್ದಂತೆಯೇ ನಾಲ್ವರು ಸದಸ್ಯರು ನಗೆಪಾಟಲಿಗೆ ಈಡಾದರು.

ಆದರೆ, ಅಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ಕೈಗಾರಿಕೆ ಇಲಾಖೆಯು ನೀಡುವ ಕರಕುಶಲ ವಸ್ತುಗಳನ್ನು ಫಲಾನುಭವಿ ಗಳಿಗೆ ವಿತರಿಸಿದ್ದಾದರೂ ಏಕೆ? ಎಂದು ಆ ಸದಸ್ಯರು ಪ್ರಶ್ನಿಸುವ ಮೂಲಕ ಇಲಾಖೆ ಜಿ.ಪಂ. ಮೂಲಕವೇ ವಿಶೇಷ ಸಮಾ ರಂಭ ಏರ್ಪಡಿಸಿ ಫಲಾನುಭವಿಗಳಿಗೆ ಸಾಮಗ್ರಿ ವಿತರಿಸಬಹುದಿತ್ತಲ್ಲ? ಎಂದು ಕೋರಿದರು.

ಶಾಸಕರ ಸಲಹೆಯ ಮೇರೆಗೆ ಅದೇ ಸಮಾರಂಭದಲ್ಲಿ ಫಲಾನುಭವಿಗಳಿಗೆ ಸಾಮಗ್ರಿ ವಿತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರಾದರೂ ಅದಕ್ಕೆ, ತೃಪ್ತರಾಗದ ಬಹುತೇಕ ಸದಸ್ಯರು, `ಇನ್ನು ಮುಂದೆ ಯಾರಾದರೂ ದೊಡ್ಡ ವರ ಮದುವೆ ಸಮಾರಂಭದಲ್ಲೇ ಫಲಾನುಭವಿಗಳಿಗೆ ಜಿಲ್ಲಾ ಪಂಚಾಯಿತಿಯ ಅನುದಾನದ ಸಾಮಗ್ರಿ ವಿತರಿಸಿ~ ಎಂದು ಕೀಟಲೆ ಮಾಡಿದರು.

ಈ ರೀತಿ ಆಗದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯವರು ತಿಳಿಸಿ ಸದಸ್ಯರ ಕೋಪ ಶಮನಗೊಳಿಸಿದರು.

`ತಾಲ್ಲೂಕು ಪಂಚಾಯಿತಿಯ ಕೆಡಿಪಿ ಸಾಮಾನ್ಯ ಸಭೆಗಳಿಗೂ ನಮ್ಮನ್ನು ಕರೆಯುವುದಿಲ್ಲ ಎಂದು ಸೋಗಿ ಕ್ಷೇತ್ರದ ಸದಸ್ಯೆ ನಳಿನಾ ಅವರು ತಿಳಿಸಿದಾಗ, ಹೂವಿನಹಡಗಲಿ ತಾ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರು ಮಾತನಾಡಿ, ಕೆಡಿಪಿ ಸಭೆಗಳಿಗೆ ಜಿಲ್ಲಾ ಪಂಚಾಯಿತಿ ಸದಸ್ಯರನ್ನು ಕರೆಯುವ ಪದ್ಧತಿ ಇಲ್ಲ ಎಂದು ತಿಳಿಸಿದರು.

ಕೂಡ್ಲಿಗಿಯಲ್ಲಿ ತಾಲ್ಲೂಕು ಪಂಚಾಯಿತಿ ಸಭೆಗಳಿಗೆ ಜಿಲ್ಲಾ ಪಂಚಾಯಿತಿ ಸದಸ್ಯರನ್ನು ಆಹ್ವಾನಿಸು ತ್ತಾರಲ್ಲ? ಎಂದು ಅವರು ಮರುಪ್ರಶ್ನೆ ಎಸೆದ ಕೂಡಲೇ ಸಭೆಯಲ್ಲಿ ಭಾಗವ ಹಿಸಿದ್ದ ಅಧಿಕಾರಿಗಳ ಸಮೂಹದಿಂದ ನಗೆ ತೇಲಿಬಂತು. ಇದರಿಂದ ಅನೇಕ ಸದಸ್ಯರಲ್ಲಿ ತೀವ್ರ ಮುಜುಗರ ಉಂಟಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.