ADVERTISEMENT

‘ನ್ಯಾ.ಸದಾಶಿವ ಆಯೋಗದ ವರದಿ ತಿರಸ್ಕರಿಸಿ’

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2017, 8:52 IST
Last Updated 23 ಡಿಸೆಂಬರ್ 2017, 8:52 IST

ಬಳ್ಳಾರಿ: ‘ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ತಿರಸ್ಕರಿಸಬೇಕು ಎಂದು ಆಗ್ರಹಿಸಿ ಡಿ.29 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆಂಗಳೂರು ನಿವಾಸಕ್ಕೆ ಮುತ್ತಿಗೆ ಹಾಕಲಾಗುವುದು’ ಎಂದು ಅಖಿಲ ಭಾರತ ಬಂಜಾರ ಸೇವಾ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸುಭಾಷ್‌ ರಾಥೋಡ್‌ ತಿಳಿಸಿದರು.

‘ಪರಿಶಿಷ್ಟ ಜಾತಿ ಪಟ್ಟಿಯಿಂದ ಕೊಂಚ, ಕೊರಮ, ಭೋವಿ ಮತ್ತು ಲಂಬಾಣಿಗರನ್ನು ತೆಗೆಯಬೇಕು ಎಂದು ವರದಿಯಲ್ಲಿ ಅವೈಜ್ಞಾನಿಕವಾಗಿ ಶಿಫಾರಸು ಮಾಡಿರುವುದು ಸಮುದಾಯದ ಜನರಲ್ಲಿ ಆತಂಕ ಮೂಡಿಸಿದೆ. ಈ ನಾಲ್ಕೂ ಸಮುದಾಯದವರು ಸ್ಪೃಶ್ಯರು ಎಂದು ಹೇಳಿರುವುದು ಸರಿಯಲ್ಲ’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

‘ಕೊಂಚ, ಕೊರಮ, ಭೋವಿ ಮತ್ತು ಲಂಬಾಣಿಗರು ಅಸ್ಪೃಶ್ಯತೆ ಆಚರಿಸುತ್ತಾರೆ. ಲಂಬಾಣಿ ಸಮುದಾಯದ ಮಹಿಳೆಯರು ಮದ್ಯ ಸೇವಿಸುತ್ತಾರೆ ಎಂಬ ಅವಹೇಳನಕಾರಿ ಮಾತುಗಳನ್ನು ವರದಿಯಲ್ಲಿ ಬರೆಯಲಾಗಿದೆ. ಆದರೆ ನಾವೂ ಅಸ್ಪೃಶ್ಯರೇ ಆಗಿದ್ದೇವೆ. ಶೋಷಣೆಗೆ ಒಳಗಾಗಿದ್ದೇವೆ ಎಂಬುದನ್ನು ವರದಿಯಲ್ಲಿ ಮರೆಮಾಚಲಾಗಿದೆ’ ಎಂದು ಆರೋಪಿಸಿದರು.

ADVERTISEMENT

‘ಸಂವಿಧಾನದ 341 (2) ವಿಧಿಯ ಪ್ರಕಾರ ಮೊದಲು ನಾಲ್ಕೂ ಉಪಜಾತಿಗಳನ್ನು ಪರಿಶಿಷ್ಟ ಜಾತಿಗಳ ಪಟ್ಟಿಯಿಂದ ತೆಗೆಯಬೇಕು ಎಂದು ಹೇಳಿರುವುದು ಸಾಮಾಜಿಕ ನ್ಯಾಯದ ವಿರುದ್ಧವಾಗಿರುವ ಶಿಫಾರಸು. ಈ ಉಪಜಾತಿಗಳು ಮೇಲ್ಜಾತಿಗೆ ಸೇರಿವೆ ಎಂದಿರುವುದು ಅವಮಾನಕಾರಿಯಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಪರಿಶಿಷ್ಟ ಜಾತಿಗೆ ಸೇರಿದ 101 ಉಪಜಾತಿಗಳ ಪೈಕಿ 72 ಉಪಜಾತಿಗಳ ಜನರು ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರ ವರದಿ ಜಾರಿಗೊಳಿಸುವಂತೆ ಕೇಂದ್ರಕ್ಕೆ ಶಿಫಾರಸು ಮಾಡಬಾರದು’ ಎಂದು ಒತ್ತಾಯಿಸಿದರು.

‘2001ರ ಜನಗಣತಿ ಪ್ರಕಾರ ರಾಜ್ಯದಲ್ಲಿ ಭೋವಿ ಸಮುದಾಯದ ಜನಸಂಖ್ಯೆ 9.52 ಲಕ್ಷವಿದೆ. ಆದರೆ 2012ರಲ್ಲಿ ಆಯೋಗ ವರದಿ ಸಲ್ಲಿಸುವ ಸಂದರ್ಭದಲ್ಲಿ ಜನಸಂಖ್ಯೆ 9.48 ಲಕ್ಷವಿದೆ ಎಂದು ಉಲ್ಲೇಖಿಸುತ್ತದೆ. 11 ವರ್ಷಗಳ ಅವಧಿಯಲ್ಲಿ ಜನಸಂಖ್ಯೆ ಕಡಿಮೆಯಾಗಿದೆ ಎಂದು ಸುಳ್ಳು ಮಾಹಿತಿ ನೀಡಲಾಗಿದೆ. ಜನಸಂಖ್ಯೆ ಆಧರಿಸಿ ಉಪಜಾತಿಗಳ ಮೀಸಲಾತಿ ವರ್ಗೀಕರಣ ಸರಿಯಲ್ಲ’ ಎಂದರು.

‘ಸರ್ಕಾರ ವರದಿಯನ್ನು ಕೂಡಲೇ ಬಹಿರಂಗಪಡಿಸಬೇಕು. ಸಾರ್ವಜನಿಕ ಚರ್ಚೆಗೆ ಅವಕಾಶ ನೀಡಬೇಕು’ ಎಂದು ಒಕ್ಕೂಟದ ಮುಖಂಡ ವೈ.ಕೊಟ್ರೇಶ್‌ ಆಗ್ರಹಿಸಿದರು. ಮುಖಂಡರಾದ ಸುಂಕಣ್ಣ, ಜಿ.ರಾಮಚಂದ್ರಪ್ಪ, ಈಶ್ವರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.