ADVERTISEMENT

`ಮನುಕುಲದ ನೆಮ್ಮದಿಗೆ ಪರಿಸರ ರಕ್ಷಿಸಿ'

​ಪ್ರಜಾವಾಣಿ ವಾರ್ತೆ
Published 7 ಜೂನ್ 2013, 5:38 IST
Last Updated 7 ಜೂನ್ 2013, 5:38 IST

ಕಂಪ್ಲಿ: ಮನುಕುಲದ ನೆಮ್ಮದಿಗಾಗಿ ಪರಿಸರ ಕಾಪಾಡುವುದು ತುಂಬಾ ಅವಶ್ಯ ಎಂದು ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರ ಸಮಾಜಕಾರ್ಯ ಅಧ್ಯಯನ ವಿಭಾಗದ ಮುಖ್ಯಸ್ಥೆ ಡಾ. ಗೌರಿ ಮಾನಿಕ್ ಮಾನಸ ಅಭಿಪ್ರಾಯಪಟ್ಟರು.

ಸ್ಥಳೀಯ ವ್ಹಿಜನ್ ಯೂತ್ ಅಸೋಸಿಯೇಷನ್ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿ, ಭವಿಷ್ಯದ ದೃಷ್ಟಿಯಿಂದ ಪ್ರತಿಯೊಬ್ಬರು ಪರಿಸರ ರಕ್ಷಣೆಗೆ ಆಸಕ್ತಿ ವಹಿಸುವಂತೆ ಮನವಿ ಮಾಡಿದರು.

ಕೂಡ್ಲಿಗಿ ತಾಲ್ಲೂಕು ಕಂದಗಲ್ ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ಬಿ. ಚಂದ್ರಮೌಳಿ ತಮ್ಮ ಒಂದು ತಿಂಗಳ ವೇತನ ್ಙ 12ಸಾವಿರ ಪರಿಸರ ಸಂರಕ್ಷಣೆ ಕಾರ್ಯಕ್ಕೆ ಈ ಸಂದರ್ಭದಲ್ಲಿ ನೀಡಿದ್ದರಿಂದ ಸನ್ಮಾನಿಸಲಾಯಿತು.

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಭಾರತೀಜಿ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿದರು. ಉದ್ಭವ ಮಹಾ ಗಣಪತಿ ದೇವಸ್ಥಾನದಿಂದ ಪ್ರಾರಂಭಗೊಂಡ ಪರಿಸರ ಸಂರಕ್ಷಣೆ ಜಾಗೃತಿ ಜಾಥಾ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜನತೆಯಲ್ಲಿ ಜಾಗೃತಿ ಮೂಡಿಸಿತು.

ವ್ಹಿಜನ್ ಯೂತ್ ಅಸೋಸಿಯೇಷನ್ ಅಧ್ಯಕ್ಷ ಬಿ. ವಿರೂಪಾಕ್ಷ ಗೌಡ, ಉಪ ತಹಶೀಲ್ದಾರ ಕೆ. ಬಾಲಪ್ಪ, ಪಿಎಸ್‌ಐ ಎನ್. ಆನಂದ್, ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಮಂಜುನಾಥ, ಮುಖ್ಯಗುರು ಬಿ.ಎಸ್. ದೊಡ್ಡಮನಿ, ಎಸ್‌ಡಿಎಂಸಿ ಅಧ್ಯಕ್ಷ ರಂಗಸ್ವಾಮಿ, ಯೂತ್ ಅಸೋಸಿಯೇಷನ್ ಕಾರ್ಯದರ್ಶಿ ಮಲ್ಲಿಕಾರ್ಜುನರಾವ್ ಕರಾಡೆ, ಖಜಾಂಚಿ ಜಿ.ಎಂ. ವೀರೇಶ್, ಎಸ್. ಮಹೇಶ್, ವೀರೇಶ್ ಹೊನ್ನಳ್ಳಿ, ನಾಗನಗೌಡ, ಆನಂದ್, ಶೇಖರ್, ಅನಿಲ್, ಆನಂದ್‌ಕುಮಾರ್, ಎನ್. ಸೋಮಶೇಖರ್ ಹಾಜರಿದ್ದರು. ರೆಹಮತ್. ಬಿ ಪ್ರಾರ್ಥಿಸಿದರು, ಕೆ. ಶಿವಕುಮಾರ್ ಸ್ವಾಗತಿಸಿದರು, ಮಂಜುನಾಥ ಕುರುಗೋಡು ಕಾರ್ಯಕ್ರಮ ನಿರೂಪಿಸಿದರು, ಮಾರುತಿ ವಂದಿಸಿದರು. 

ಕಂಪ್ಲಿ: ವಿಶ್ವ ಪರಿಸರ ದಿನಾಚರಣೆ
ಕಂಪ್ಲಿ: ಸ್ಥಳೀಯ ಸತ್ಯ ಅರುಣೋದಯ ಸೇವಾ ಸಮಿತಿಯವರು ಬ್ರೈಟ್ ವೇ ಶಾಲಾ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಬುಧವಾರ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ಮುಖ್ಯ ಗುರು ಸಚ್ಚಿದಾನಂದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಕೈಗಾರೀಕರಣದಿಂದ ವಾಯು ಮತ್ತು ಪರಿಸರ ಮಾಲಿನ ಅಧಿಕವಾಗಿದೆ. ಭವಿಷ್ಯದಲ್ಲಿ ಇದನ್ನು ತಡೆಗಟ್ಟಲು ಎಲ್ಲರೂ ಗಿಡ ಮರಗಳನ್ನು ಬೆಳೆಸುವಂತೆ ವಿನಂತಿಸಿದರು. ಶಾಲಾ ಆವರಣದಲ್ಲಿ 20 ಸಸಿಗಳನ್ನು ನೆಡಲಾಯಿತು. ಅವುಗಳ ಪೋಷಣೆ ಮತ್ತು ರಕ್ಷಣೆಯನ್ನು ಶಾಲಾ ಸಿಬ್ಬಂದಿಗೆ ವಹಿಸಲಾಯಿತು.

ಸಂಸ್ಥೆ ಅಧ್ಯಕ್ಷ ಡಿ.ವಿ. ಸತ್ಯನಾರಾಯಣ, ಕಾರ್ಯದರ್ಶಿ ಯು. ಶಿವರಾಜ್, ಖಜಾಂಚಿ ಯಣ್ಣಿ ವೆಂಕಟೇಶ, ಶಿಕ್ಷಕರು, ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗದವರು ಹಾಜರಿದ್ದರು.

ಸತ್ಯಅರುಣೋದಯ ಸೇವಾ ಸಮಿತಿ ಕಾರ್ಯದರ್ಶಿ ಬಿ. ಗೋಪಾಲರಾವು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

`ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮೂಡಿಸಿ'
ಕಂಪ್ಲಿ: ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮೂಡಿಸುವಂತೆ ಎಸ್.ಎನ್ ಪೇಟೆ ಸಮೂಹ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ವ್ಯಕ್ತಿ ಮಹ್ಮದ್ ಇಸಾಕ್ ಮನವಿ ಮಾಡಿದರು.

ಸ್ಥಳೀಯ ಎಸ್.ಎನ್ ಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಶಿಕ್ಷಣ ಇಲಾಖೆ ಹಾಗೂ ವಾಸವಿ ಯುವಜನ ಸಂಘ ಸಂಯುಕ್ತವಾಗಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಸಸಿ ನೆಡುವ ಮತ್ತು ಸಸಿ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.

ವಾಸವಿ ಯುವಜನ ಸಂಘದ ಅಧ್ಯಕ್ಷ ಎಂ. ಶ್ರೀನಿವಾಸ ಮಾತನಾಡಿ, ಮುಂದಿನ ದಿನಗಳಲ್ಲಿ ಪಟ್ಟಣದ ಲಭ್ಯ ಸ್ಥಳಗಳಲ್ಲಿ ಮರ ಗಿಡಗಳನ್ನು ಬೆಳೆಸುವ ಮೂಲಕ ಹಸಿರು ವಲಯ ರೂಪಿಸುವ ಯೋಜನೆ ಹೊಂದಿರುವುದಾಗಿ ಹೇಳಿದರು.

ಶಿಕ್ಷಕ ಸಂಘದ ಪ್ರತಿನಿಧಿ ಕೆ.ಸಿ. ಭೀಮಣ್ಣ, ಮುಖ್ಯಗುರು ಅರಳಿಹಳ್ಳಿ ಯರ‌್ರಿಸ್ವಾಮಿ, ಬಿ.ಎಸ್. ದೊಡ್ಡಮನಿ, ಪ್ರಭು, ಎಸ್. ನಾಗರಾಜ, ನಂ.2 ಮುದ್ದಾಪುರ ಇಮಾಂಸಾಬ್, ಸಣಾಪುರ ಅಂಜನಾದೇವಿ, ಗುಂಡುರಾವ್, ಎಸ್. ಸಿದ್ದೇಶ್, ಮಹಾಬಲೇಶ್ವರಗೌಡ, ವಿ. ನಾಗರತ್ನದೇವಿ ವಿವಿಧ ಶಾಲೆಗಳ ಶಿಕ್ಷಕರು ಭಾಗವಹಿದ್ದರು. ಸಮೂಹ ಸಂಪನ್ಮೂಲ ಕೇಂದ್ರ ವ್ಯಾಪ್ತಿಯ 16 ಶಾಲೆಗಳಿಗೆ ತಲಾ ಆರು ಸಸಿಗಳನ್ನು ವಿತರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.