ಬಳ್ಳಾರಿ: ಪ್ರಸಕ್ತ ಸಾಲಿನ ಬಿ.ಇಡಿ ಪ್ರಥಮ ಸೆಮಿಸ್ಟರ್ ಪರೀಕ್ಷಾ ಫಲಿತಾಂಶದಲ್ಲಿ ಭಾರೀ ವ್ಯತ್ಯಾಸ ಕಂಡುಬಂದಿದ್ದು, ಕಳಪೆ ಹಾಗೂ ಕಡಿಮೆ ಫಲಿತಾಂಶ ಬಂದಿದೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ತೀವ್ರ ಆತಂಕ ಉಂಟಾಗಿದ್ದು, ಮರು ಮೌಲ್ಯಮಾಪನ ನಡೆಸಬೇಕು ಎಂದು ಒತ್ತಾಯಿಸಿ ನಗರದಲ್ಲಿ ಸೋಮವಾರ ನೂರಾರು ವಿದ್ಯಾರ್ಥಿಗಳು ಎಸ್ಎಫ್ಐ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಗಡಿಗಿ ಚೆನ್ನಪ್ಪ ವೃತ್ತದಿಂದ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದವರೆಗೆ ಪ್ರತಿಭಟನಾ ರ್ಯಾಲಿ ನಡೆಸಿದ ವಿದ್ಯಾರ್ಥಿಗಳು ಕುಲಪತಿ ಡಾ.ಮಂಜಪ್ಪ ಹೊಸಮನೆ ಅವರಿಗೆ ಈ ಕುರಿತ ಮನವಿ ಅರ್ಪಿಸಿದರು.
ವಿವಿಯ ಪರೀಕ್ಷಾ ಪದ್ಧತಿಯು ದ್ವಂದ್ವ ನೀತಿಯಿಂದ ಕೂಡಿದ ಪರಿಣಾಮವಾಗಿ ಅನೇಕ ವಿದ್ಯಾರ್ಥಿಗಳು ಕನ್ನಡ ವಿಷಯದಲ್ಲೇ ಶೂನ್ಯ ಅಂಕ ಪಡೆಯುವಂತಾಗಿದೆ ಎಂದು ಆರೋಪಿಸಿರುವ ವಿದ್ಯಾರ್ಥಿಗಳು, ಶುಲ್ಕರಹಿತ ಮರು ಮೌಲ್ಯಮಾಪನಕ್ಕೆ ಆದೇಶ ನೀಡಬೇಕು ಎಂದು ಒತ್ತಾಯಿಸಿದರು.
ಗುಲ್ಬರ್ಗ ವಿಶ್ವವಿದ್ಯಾಲಯದ ನಿಯಮಾನುಸಾರ ಮೌಲ್ಯಮಾಪನ ನೆಸಿ, ಮುಂದಿನ ಸೆಮಿಸ್ಟರ್ ಪರೀಕ್ಷೆಗಳನ್ನು ಮುಂದೂಡಬೇಕು ಎಂದು ಆಗ್ರಹಿಸಿರುವ ವಿದ್ಯಾರ್ಥಿಗಳು, ಗ್ರೇಸ್ ಅಂಕಗಳನ್ನು ಸರಿಯಾಗಿ ನೀಡುವುದರ ಜತೆಗೆ ಪ್ರವೇಶ ಸಂದರ್ಭವೇ ಪಠ್ಯ ಕ್ರಮದ ಪ್ರತಿ ನೀಡಬೇಕು ಎಂದು ಕೋರಿದರು.
ಎಸ್ಎಫ್ಐ ಮುಖಂಡರಾದ ಹುಳ್ಳಿ ಉಮೇಶ್, ಎನ್.ಆಂಜನೇಯ, ಶ್ವೇತ, ರಾಜೇಶ, ಸಿ. ಹೊನ್ನೂರಸ್ವಾಮಿ, ಸುಭಾನ್ ಹಾಗೂ ಬಿ.ಇಡಿ ಕಾಲೇಜುಗಳ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.