ADVERTISEMENT

ರಾಷ್ಟ್ರೀಯ ವಾಲಿಬಾಲ್ ಟೂರ್ನಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 17 ಜನವರಿ 2012, 8:45 IST
Last Updated 17 ಜನವರಿ 2012, 8:45 IST

ಮರಿಯಮ್ಮನಹಳ್ಳಿ: ರಾಷ್ಟ್ರಮಟ್ಟದಲ್ಲಿ ಕ್ರೀಡೆಯಲ್ಲಿ ಪ್ರತಿನಿಧಿಸುವುದು ಹೆಮ್ಮೆಯ ಸಂಗತಿಯಾಗಿದ್ದು, ದೇಶಕ್ಕಾಗಿ ಆಡುವಾಗ ಖುಷಿಯ ಜತೆಗೆ ಜವಾಬ್ದಾರಿಯೂ ಇರುತ್ತದೆ. ಶ್ರಮ ಇದ್ದಲ್ಲಿ ಪ್ರತಿಫಲ ತಾನಾಗಿಯೇ ಬರುತ್ತದೆ ಎಂದು ಅಂತರರಾಷ್ಟ್ರೀಯ ವಾಲಿಬಾಲ್ ಕ್ರೀಡಾಪಟು ಸೋಮನಾಥ ಗಿರಿಗೌಡ ಹೇಳಿದರು.

ಪಟ್ಟಣದ ಶ್ರೀ ವಿನಾಯಕ ಪ್ರೌಢಶಾಲಾ ಮೈದಾನದಲ್ಲಿ ಸೋಮವಾರ ಆರಂಭವಾದ 57ನೇ ರಾಷ್ಟ್ರೀಯ 14 ವರ್ಷದೊಳಗಿನ ಶಾಲಾ ಮಕ್ಕಳ ವಾಲಿಬಾಲ್ ಪಂದ್ಯಾವಳಿಯ ಕ್ರೀಡಾಜ್ಯೋತಿ ಬೆಳಗಿಸಿ ಮಾತನಾಡಿದರು.
ಕ್ರೀಡಾಪಟುಗಳು ಚೆನ್ನಾಗಿ ಆಡಿದರೆ ಗೆಲವು, ಫಲಿತಾಂಶ ಸಹ ಪೂರಕವಾಗಿಯೇ ಬರುತ್ತದೆ. ಪಠ್ಯದ ಜೊತೆಗೆ ಕ್ರೀಡೆಗೂ ಮಹತ್ವ ನೀಡಬೇಕಾಗಿದೆ. ನನಗೆ ತರಬೇತಿ ನೀಡಿದ್ದು ಹೊಸಪೇಟೆಯ ಪ್ರವೀಣ್‌ಸಿಂಗ್ ಅವರು ಎಂಬುದು ಹೆಮ್ಮೆಯ ಸಂಗತಿ ಎಂದರು.

ಅದ್ದೂರಿ ಚಾಲನೆ: ಐದು ದಿನಗಳ ಪಂದ್ಯಾವಳಿಯ ಉದ್ಘಾಟನೆ ಅದ್ದೂರಿ ಚಾಲನೆ ನೀಡಲಾಯಿತು. ಪಥ ಸಂಚಲನದಲ್ಲಿ ಕರ್ನಾಟಕವೂ ಸೇರಿದಂತೆ ತಮಿಳುನಾಡು, ಆಂಧ್ರಪ್ರದೇಶ, ಮಧ್ಯಪ್ರದೇಶ, ಸೇರಿದಂತೆ 17 ರಾಜ್ಯಗಳ ಸುಮಾರು 480 ಕ್ರೀಡಾಪಟುಗಳು ಭಾಗವಹಿಸಿದ್ದರು.

ಬಾರದ ಜನಪ್ರತಿನಿಧಿಗಳು: ಜಿಲ್ಲಾ ಸಚಿವ ಬಾಲಚಂದ್ರ ಜಾರಕಿಹೊಳಿ ಅವರು ಉದ್ಘಾಟನಾ ಸಮಾರಂಭಕ್ಕೆ ಬಾರದ ಕಾರಣ ಅವರ ಭಾಷಣವನ್ನು ಓದಿ ಹೇಳಲಾಯಿತು. ಅದರಂತೆ ಹೊಸಪೇಟೆ ವಿಜಯನಗರ ವಿಧಾನ ಸಭಾ ಕ್ಷೇತ್ರದ ಶಾಸಕ ಬಿ.ಎಸ್.ಆನಂದಸಿಂಗ್ ಸೇರಿದಂತೆ ಸಂಸದರಾದ ಅನಿಲ್‌ಲಾಡ್, ಜೆ.ಶಾಂತ, ಶಿವರಾಮೇಗೌಡ, ಶಾಸಕರಾದ ಚಂದ್ರಾನಾಯ್ಕ, ಟಿ.ಎಚ್.ಸುರೇಶ್‌ಬಾಬು, ಬಿ.ಶ್ರೀರಾಮುಲು, ಸೋಮಶೇಖರರೆಡ್ಡಿ, ಈ.ತುಕಾರಾಂ, ಬಿ.ನಾಗೇಂದ್ರ, ಎನ್.ತಿಪ್ಪನ್ಣ, ಕೆ.ಸಿ.ಕೊಂಡಯ್ಯ ಸೇರಿದಂತೆ ಇತರೆ ಜನಪ್ರತಿನಿಧಿಗಳ ಗೈರು ಎದ್ದು ಕಾಣುತ್ತಿತ್ತು.

ಕಾರ್ಯಕ್ರಮಕ್ಕೂ ಮೊದಲು ವಿವಿಧ ಕಲಾಮೇಳಗಳ ತಂಡಗಳಿಂದ ಮೆರವಣಿಗೆ ನೆಡೆಯಿತು. ನಂತರ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ರಾತ್ರಿ  ಅಕಾಶದಲ್ಲಿ ಬಾಣ ಬಿರುಸುಸಿಡಿಸಲಾಯಿತು.

ಶಾಸಕ ಕೆ.ನೇಮಿರಾಜ್ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಎಂ.ಎಸ್. ಸೋಮಲಿಂಗಪ್ಪ ಧ್ವಜಾರೋಹಣ ನೆರವೇರಿಸಿದರು. ಜಿ.ಪಂ. ಸಿಇಒ ಮಂಜುನಾಥ ನಾಯಕ, ಎಸ್‌ಜಿಎಫ್‌ಐನ ಪ್ರಶಾಂತ್ ತ್ರೀವೇದಿ, ತಾ.ಪಂ.ಅಧ್ಯಕ್ಷ ಸಿ.ಡಿ.ಮಹದೇವ್, ಉಪಾಧ್ಯಕ್ಷೆ ಬಾಣದ ಸೀತಮ್ಮ, ಸದಸ್ಯರಾದ ಯು.ಸೋಮಪ್ಪ, ದಾಕ್ಷಾಯಣಿ ಅಂಜಿನಪ್ಪ, ತಿಪ್ಪಿಬಾಯಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.