ADVERTISEMENT

`ವ್ಯಾಸತೀರ್ಥ ಯೋಜನೆ'ಗೆ ಸ್ವಾಮೀಜಿ ಚಾಲನೆ

ಮಂತ್ರಾಲಯ ಮಠದಿಂದ ಗ್ರಾಮೀಣರಿಗೆ ನೀರು ಪೂರೈಕೆ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2013, 5:37 IST
Last Updated 24 ಏಪ್ರಿಲ್ 2013, 5:37 IST

ಬಳ್ಳಾರಿ: ತೀವ್ರ ಬರಗಾಲದ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಿಸುತ್ತಿರುವ ಜಿಲ್ಲೆಯ ಸಂಡೂರು, ಕೂಡ್ಲಿಗಿ ಹಾಗೂ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ವಿಧ ಗ್ರಾಮಗಳ ಜನತೆಗೆ ಬೇಸಿಗೆ ಮುಗಿಯುವವರೆಗೆ ಉಚಿತ ನೀರು ಪೂರೈಸುವ `ವ್ಯಾಸತೀರ್ಥ ಯೋಜನೆ' ಆರಂಭಿಸಲಾಗುತ್ತಿದೆ ಎಂದು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಎಸ್.ಎನ್. ಸುಯಮೀಂದ್ರ ಆಚಾರ್ ತಿಳಿಸಿದರು.

ನಗರದ ಸತ್ಯನಾರಾಯಣ ಪೇಟೆಯ ರಾಘವೇಂದ್ರ ಸ್ವಾಮೀಜಿ ಮಠದ ಆವರಣದಲ್ಲಿ ಮಂಗಳವಾರ ಸಂಜೆ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಟ್ರಸ್ಟ್, ಜಿಲ್ಲಾ ಪಂಚಾಯಿತಿ ಹಾಗೂ ಇನ್ಫೋಸಿಸ್ ಪ್ರತಿಷ್ಠಾನಗಳ ಸಹಯೋಗದಲ್ಲಿ  ಏರ್ಪಡಿಸಲಾಗಿದ್ದ ನೀರು ಪೂರೈಕೆ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವ ಹೆಚ್ಚಾಗಿ ರುವುದರಿಂದ ಈ ಭಾಗಗಳ ಸಾರ್ವಜನಿಕರ ಅನುಕೂಲಕ್ಕಾಗಿ ಕುಡಿಯುವ ನೀರಿನ ಟ್ಯಾಂಕರ್‌ಗಳ ಮೂಲಕ ನೀರು ಒದಗಿಸುವ ನಿಟ್ಟಿನಲ್ಲಿ ಇನ್ಫೋಸಿಸ್ ಪ್ರತಿಷ್ಠಾನ ರೂ 20 ಲಕ್ಷ ನೀಡಿದೆ ಎಂದರು.

ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ನೆರವಿನೊಂದಿಗೆ ಎರಡು ಟ್ಯಾಂಕರ್‌ಗಳನ್ನು ಒದಗಿಸಲಾಗಿದ್ದು, ಟ್ಯಾಂಕರ್‌ಗೆ ಅಗತ್ಯ ಇಂಧನ ಹಾಗೂ ಚಾಲಕರ ವೇತನವನ್ನು ಟ್ರಸ್ಟ್‌ನಿಂದ ಭರಿಸಲಾಗುವುದು ಎಂದು ಅವರು ತಿಳಿಸಿದರು.

ಬೇಸಿಗೆ ನಂತರ ಅರಣ್ಯ ಇಲಾಖೆ ನೆರವಿನೊಂದಿಗೆ ಜಿಲ್ಲೆಯಲ್ಲಿ 5 ಲಕ್ಷ ಸಸಿ ನೆಡುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಜಿಲ್ಲೆಯಾದ್ಯಂತ ಬರಗಾಲ ಆವರಿಸಿದ್ದು, ಜನರ ನೀರಿನ ಸಮಸ್ಯೆ ನೀಗಿಸಲು  ಜಿಲ್ಲಾಡಳಿತ ಎರಡು ಟ್ಯಾಂಕರ್ ಒದಗಿಸಿದೆ. ಟ್ರಸ್ಟ್ ಇನ್ನೊಂದು ಟ್ಯಾಂಕರ್ ಒದಗಿಸುವಂತೆ ಕೇಳಿದ್ದು, ಶೀಘ್ರವೇ ಒದಗಿಸಲಾಗುವುದು ಎಂದು ಎಂದು ಜಿ.ಪಂ. ಸಿಇಓ ಮಂಜುನಾಥ ನಾಯಕ ತಿಳಿಸಿದರು.

ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಸುಯತೀಂದ್ರ ಸ್ವಾಮೀಜಿ ಟ್ಯಾಂಕರ್‌ಗಳಿಗೆ ಚಾಲನೆ ನೀಡಿದರು.
ಟ್ರಸ್ಟ್‌ನ ಸದಸ್ಯರಾದ ಸಂಜೀವ್ ಮೂರ್ತಿ,  ಡಾ.ವಿದ್ಯಾಧರ ಕಿನ್ನಾಳ್, ಕಾರ್ಯದರ್ಶಿ ವಿಜಯ್ ಢಣಾಪುರ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.