ಬಳ್ಳಾರಿ: ಕಳೆದ ವರ್ಷದ ಅಕ್ಟೋಬರ್ ತಿಂಗಳಲ್ಲಿ ಹಿಂದುಳಿದ ವರ್ಗದ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ವಿರೋಧಿಯಾಗಿರುವ ಶುಲ್ಕ ವಿನಾಯಿತಿ ಕುರಿತ ಆದೇಶದಲ್ಲಿ ಲೋಪ– ದೋಷಗಳಿದ್ದು, ಸರ್ಕಾರ ಅದನ್ನು ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿ ವಿದ್ಯಾರ್ಥಿ ಸಂಘಟನೆಗಳು ನಗರದಲ್ಲಿ ಎಐಡಿಎಸ್ಓ ಮತ್ತು ಎಐಡಿವೈಓ ಸಂಘಟನೆಗಳು ಶುಕ್ರವಾರ ಪ್ರತಿಭಟನೆ ನಡೆಸಿದವು.
ಎಲ್ಲ ಅರ್ಹ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಶುಲ್ಕ ಪಾವತಿಸುವ ಸಂದರ್ಭವೇ ವಿನಾಯಿತಿ ನೀಡೇಕು ಎಂದು ಎಐಡಿಎಸ್ಓ ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷ ಗೋವಿಂದ ಒತ್ತಾಯಿಸಿದರು.
ಪೂರ್ಣ ಮೊತ್ತ ಪಾವತಿಸಿಕೊಂಡು ಬ್ಯಾಂಕ್ ಖಾತೆಗೆ ವರ್ಗಾಯಿಸುವ ವಿಧಾನ ರದ್ದುಗೊಳಿಸಬೇಕು. ವಿದ್ಯಾರ್ಥಿಗಳು ಗರಿಷ್ಠ ಅಂಕ ಪಡೆಯಬೇಕು ಎಂಬ ಷರತ್ತನ್ನು ತೆಗೆದುಹಾಕಿ, ಮುಂದಿನ ತರಗತಿಯ ಪ್ರವೇಶಾತಿಗೆ ಅರ್ಹರಾದವರಿಗೆಲ್ಲ ಶುಲ್ಕ ವಿನಾಯಿತಿ ದೊರೆಯುವಂತಾಗಬೇಕು ಎಂದು ಅವರು ಆಗ್ರಹಿಸಿದರು.
ಕಾಲೇಜು ಪ್ರವೇಶ ಪಡೆಯುವ ಎಲ್ಲ ವಿದ್ಯಾರ್ಥಿಗಳು ಬೋಧನೆ, ಪರೀಕ್ಷೆ, ಪ್ರಯೋಗಾಲಯ, ಕ್ರೀಡೆ ಮತ್ತಿತರ ಶುಲ್ಕ ರಿಯಾಯಿತಿಯು ಮೊದಲೇ ದೊರೆಯುತ್ತಿತ್ತು ಎಂದು ಅವರು ತಿಳಿಸಿದರು. ಡಾ.ಪ್ರಮೋದ್, ಎಸ್.ಉಮೇಶ್, ರಫಿಕ್, ನೇತ್ರಾ, ಮಂಜುನಾಥ, ಬಸವರಾಜ್, ಸಂಜಯ್, ಪ್ರಿಯಾ, ವಾಣಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.