ADVERTISEMENT

ಶ್ರೀರಾಮುಲು ಹೊಸ ಪಕ್ಷದ ಬ್ಯಾನರ್ ಪ್ರತ್ಯಕ್ಷ

​ಪ್ರಜಾವಾಣಿ ವಾರ್ತೆ
Published 15 ಜನವರಿ 2012, 8:25 IST
Last Updated 15 ಜನವರಿ 2012, 8:25 IST

ಬಳ್ಳಾರಿ: ಶಾಸಕ ಬಿ. ಶ್ರೀರಾಮುಲು ಅವರ ಹೊಸ ಪಕ್ಷ ರಚನೆಯ ಬಗ್ಗೆ ರಾಜ್ಯದಾದ್ಯಂತ ಕುತೂಹಲ ಇರುವ ಸಂದರ್ಭದಲ್ಲೇ ಅವರ ಇಲ್ಲಿನ ಕಚೇರಿಯಲ್ಲಿ ಶನಿವಾರ ದಿಢೀರನೆ ಕಾಣಿಸಿಕೊಂಡ ಬ್ಯಾನರ್ ಒಂದು ಅದಕ್ಕೆ ಉತ್ತರ ನೀಡುವಂತಿದೆ.

ಆ ಬ್ಯಾನರ್‌ನಲ್ಲಿ ಪಕ್ಷದ ಹೆಸರು, ಚಿಹ್ನೆ ಮತ್ತು ಘೋಷವಾಕ್ಯವನ್ನು ಬರೆಯಲಾಗಿದೆ. ಬೊಗಸೆ ಕೈ ನಡುವೆ ಬಡವ, ಶ್ರಮಿಕ ಮತ್ತು ರೈತನ ಚಿತ್ರಗಳಿವೆ. ಅದರ ಕೆಳಭಾಗದಲ್ಲಿ ಬಿಎಸ್‌ಆರ್ ಎಂದು ಬರೆಯಲಾಗಿದೆ. `ಸ್ವಾಭಿಮಾನದೊಂದಿಗೆ ಬದುಕೋಣ~ ಎಂಬುದು ಅದರಲ್ಲಿರುವ ಘೋಷವಾಕ್ಯ.

ಶ್ರೀರಾಮುಲು ಅವರು ಇದುವರೆಗೆ ಎಲ್ಲಿಯೂ ತಮ್ಮ ಹೊಸ ಪಕ್ಷದ ಹೆಸರಾಗಲಿ ಇತರ ವಿವರಗಳನ್ನು ತಿಳಿಸಿಲ್ಲ. ಸಂಕ್ರಾಂತಿ ನಂತರವೇ ಅದನ್ನು ಬಹಿರಂಗ ಮಾಡುವುದಾಗಿ ಹೇಳಿದ್ದರು. ಈ ನಡುವೆ ಶನಿವಾರ ಇದ್ದಕ್ಕಿದ್ದಂತೆ ಬ್ಯಾನರ್ ಪ್ರತ್ಯಕ್ಷವಾಗಿದೆ.

ಗಣಿ ಹಗರಣದ ಆರೋಪದ ಮೇಲೆ ಜೈಲಿನಲ್ಲಿರುವ ಮಾಜಿ ಸಚಿವ ಜಿ. ಜನಾರ್ದನ ರೆಡ್ಡಿ ಅವರ ಜಾಮೀನು ಅರ್ಜಿಯ ವಿಚಾರಣೆ ಜ. 5ರಂದು ನಡೆದಿತ್ತು. ಆ ದಿನ ಅವರಿಗೆ ಜಾಮೀನು ದೊರೆತಿದ್ದರೆ ಸಂಕ್ರಾಂತಿಯ ದಿನದಂದು ಪಕ್ಷದ ಅಧಿಕೃತ ಘೋಷಣೆ ಮಾಡುತ್ತಿದ್ದರು. ಆದರೆ ಜಾಮೀನು ಅರ್ಜಿಯ ವಿಚಾರಣೆ ಜ. 23ಕ್ಕೆ ಮುಂದೂಡಿದ ಹಿನ್ನೆಲೆಯಲ್ಲಿ ಘೋಷಣೆ ವಿಳಂಬವಾಗಬಹುದು ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿಬಂದಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.