ADVERTISEMENT

ಸಹಕಾರ ಸಂಸ್ಥೆಗಳಿಗೆ ಸ್ವಾಯತ್ತಕ್ಕೆ ತಿದ್ದುಪಡಿ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2012, 5:20 IST
Last Updated 22 ಅಕ್ಟೋಬರ್ 2012, 5:20 IST

ಸಿರುಗುಪ್ಪ: ಸಹಕಾರ ಸಂಸ್ಥೆಗಳಿಗೆ ಸಂವಿಧಾನ ಬದ್ಧ ಹಕ್ಕು ಮತ್ತು ಸ್ವಾಯತ್ತತೆ ಕಲ್ಪಿಸಲು ಲೋಕಸಭೆಯಲ್ಲಿ 97 ನೇ ಕಾಯ್ದೆಗೆ ತಿದ್ದುಪಡಿಯನ್ನು ಮಾಡಲಾಗಿದೆ ಅದನ್ನು ಇಲ್ಲಿಯ ರಾಜ್ಯ ಸರ್ಕಾರ ಯಥಾವತ್ತಾಗಿ ಜಾರಿಗೆ ತರಲು ಮುಂದಾಗಿದೆ ಎಂದು ಕೊಪ್ಪಳ ಸಂಸದ ಶಿವರಾಮನಗೌಡ ಹೇಳಿದರು.

ಪಟ್ಟಣದಲ್ಲಿ ನೂತನವಾಗಿ ವಿಷ್ಣುವಿಲಾಸ ಸೌಹಾರ್ದ ಪತ್ತಿನ ಸಹಕಾರಿ ನಿ ಬ್ಯಾಂಕ್‌ನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.

ರಾಜ್ಯದಲ್ಲಿ ಸಹಕಾರ ತತ್ವದ ಚಳುವಳಿ ಶತಮಾನಕಂಡು ದೇಶದಲ್ಲಿಯೇ ಮಾದರಿಯಾಗಿದೆ, ಸಹಕಾರ ಸಂಸ್ಥೆಗಳನ್ನು ಹುಟ್ಟುಹಾಕಿ ಜನರಿಗೆ ಉತ್ತಮ ಸೇವೆ ನೀಡಿ ಯಶಸ್ವಿಯಾಗಿದ್ದೇವೆ ಎಂದರು.
ನೂತನವಾಗಿ ಆರಂಭಿಸಿರುವ ಈ ಬ್ಯಾಂಕಿನಲ್ಲಿ 365 ದಿವಸ ಗ್ರಾಹಕರಿಗೆ ಸೇವೆ ಸಲ್ಲಿಸುವ ಪ್ರಯತ್ನ ಮೆಚ್ಚುವಂತದ್ದು, ಈ ಬ್ಯಾಂಕ್ ಹೆಮ್ಮರವಾಗಿ ಬೆಳೆದು ಆರ್ಥಿಕ ಪ್ರಗತಿಯನ್ನು ಸಾಧಿಸಲಿ ಎಂದು ಸಂಸದರು ಹಾರೈಸಿದರು.

ಹೈದ್ರಾಬಾದ್ ಕರ್ನಾಟಕದ ಬಳ್ಳಾರಿ ಜಿಲ್ಲೆಯಲ್ಲಿ ಮಾತ್ರ ಸಹಕಾರ ಕ್ಷೇತ್ರ ಗಟ್ಟಿಯಾಗಿ ನೆಲೆ ನಿಂತು ಮುಂಚೂಣಿಯಲ್ಲಿದೆ, ಸಹಕಾರ ಸಂಸ್ಥೆಗಳು ಶುದ್ಧಹಸ್ತದಿಂದ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದರೆ ಮಾತ್ರ ಆರ್ಥಿಕ ಸದೃಢತೆ ಹೊಂದುತ್ತವೆ ಎಂದು ಮಾನ್ವಿಯ ಪಟ್ಟಣ ಸೌಹಾರ್ದ ಸಹಕಾರ ಬ್ಯಾಂಕಿನ ಅಧ್ಯಕ್ಷ ಆರ್.ತಿಮ್ಮಯ್ಯಶೆಟ್ಟಿ ಹೇಳಿದರು.

ಸಹಕಾರಿ ಧುರೀಣ ಮಾಜಿ ಶಾಸಕ ಟಿ.ಎಂ.ಚಂದ್ರಶೇಖರಯ್ಯ ಹೊಸಪೇಟೆಯ ವಿಕಾಸ ಸೌಹಾರ್ದ ಸಹಕಾರಿ ಬ್ಯಾಂಕಿನ ಅಧ್ಯಕ್ಷ ವಿಶ್ವನಾಥ ಹಿರೇಮಠ, ಎಂ. ಪಂಪಾಪತಿ ಶೆಟ್ಟಿ ಮಾತನಾಡಿದರು.

ಉಡುಪಿಯ ಪಲಿಮಾರು ಮಠದ ವಿದ್ಯಾಧೀಶತೀರ್ಥ ಶ್ರಿಪಾದಂಗಳವರು ಸಾನ್ನಿಧ್ಯ ವಹಿಸಿದ್ದರು. ಪುರಸಭೆ ಅಧ್ಯಕ್ಷ ಬಿ.ಈರಣ್ಣ, ಬಳ್ಳಾರಿ ಜಿಲ್ಲಾ ಅಕ್ಕಿಗಿರಣಿ ಮಾಲೀಕರ ಸಂಘದ ಅಧ್ಯಕ್ಷ ಎನ್.ಜಿ.ಬಸವರಾಜಪ್ಪ, ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಜಿ.ಸಿದ್ದಾರೆಡ್ಡಿ ಅತಿಥಿಗಳಾಗಿದ್ದರು.

ಬ್ಯಾಂಕ್‌ನ ಅಧ್ಯಕ್ಷ ಎಚ್.ಜೆ. ಹನುಮಂತಯ್ಯ ಅಧ್ಯಕ್ಷತೆ ವಹಿಸಿದ್ದರು.ನಿರ್ದೇಶಕ ಕೆ.ನಾಗರಾಜಶೆಟ್ಟಿ ಸ್ವಾಗತಿಸಿದರು. ಜೆ.ನರಸಿಂಹಮೂರ್ತಿ ನಿರೂಪಿಸಿದರು. ವ್ಯವಸ್ಥಾಪಕ ಅನಿಲ್‌ಕುಮಾರ್ ವಂದಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.