ಕಂಪ್ಲಿ: ‘ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ಶಾಸಕ, ಬಿಜೆಪಿ ಅಭ್ಯರ್ಥಿ ಟಿ.ಎಚ್. ಸುರೇಶ್ಬಾಬು ತಿಳಿಸಿದರು.
ತಾಲ್ಲೂಕಿನ ದೇವಲಾಪುರ ಗ್ರಾಮದಲ್ಲಿ ಭಾನುವಾರ ಮತಯಾಚನೆಗೆ ಮುನ್ನ ನಡೆದ ಸಭೆಯಲ್ಲಿ ಮಾತನಾಡಿದ ಅವರು, ‘ಶಾಸಕನಾಗಿ ಆಯ್ಕೆಯಾದ ಎರಡು ಅವಧಿಯಲ್ಲಿ ಕ್ಷೇತ್ರದ ಮೂಲ ಸೌಕರ್ಯಕ್ಕೆ ಪ್ರಥಮ ಆದ್ಯತೆ ನೀಡಿದ್ದೇನೆ. ಭವಿಷ್ಯದಲ್ಲಿ ಮಾದರಿ ಕ್ಷೇತ್ರವಾಗಿ ಮಾಡಲು ಮೂರನೇ ಬಾರಿ ಅವಕಾಶ ಕಲ್ಪಿಸುವಂತೆ’ ಮತದಾರರಲ್ಲಿ ಮನವಿ ಮಾಡಿದರು.
ಗ್ರಾಮದ ಕಾಂಗ್ರೆಸ್ ಮುಖಂಡರಾದ ರಾಮನಗೌಡ, ಗೌಡರ ರೇವಮ್ಮ, ಮಾರೆಮ್ಮ, ಡಿ. ವೀರೇಶ್, ಜಡೆಪ್ಪ, ಕುರುಬರ ರಾಮಂಜನಿ ಬಿಜೆಪಿ ಸೇರಿದರು.
ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ ದೇವಲಾಪುರ ರವಿ, ಸಿ.ಡಿ. ಕುಮಾರಸ್ವಾಮಿ, ಓಂಕಾರಪ್ಪ, ತಳವಾರ ತಿಪ್ಪಯ್ಯ, ಚಂದ್ರಶೇಖರ್ ಇದ್ದರು.
ಸಿಪಿಐಎಂ ಅಭ್ಯರ್ಥಿ ರೋಡ್ ಷೋ
ಕಂಪ್ಲಿ: ಸಿಪಿಐಎಂ ಅಭ್ಯರ್ಥಿ ವಿ.ಎಸ್.ಶಿವಶಂಕ್ರಪ್ಪ ಭಾನುವಾರ ಪಟ್ಟಣದಲ್ಲಿ ಬಂಡಿ ಏರಿ ಕಾರ್ಯಕರ್ತರೊಂದಿಗೆ ರೋಡ್ ಷೋ ನಡೆಸಿದರು.
‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನವಿರೋಧಿ ನೀತಿ, ಕೋಮುವಾದ ಮತ್ತು ಜಾತಿವಾದದಿಂದ ಬೇಸತ್ತಿದ್ದಾರೆ. ಬಿಜೆಪಿ ಶಾಸಕ ಟಿ.ಎಚ್. ಸುರೇಶ್ಬಾಬು ಕ್ಷೇತ್ರವನ್ನು ಮರೆತ್ತಿದ್ದಾರೆ; ಎಂದು ದೂರಿದರು.
‘ಪ್ರಧಾನಿ ಮೋದಿ ನಂಬಿಕೆಗೆ ಅರ್ಹರಲ್ಲ. ಅವರು ಸುಳ್ಳಿನ ಸರದಾರರು. ಕೈಗಾರಿಕೋದ್ಯಮಿಗಳ ಸಾಲಮನ್ನಾಕ್ಕೆ ನೀಡುವ ಆದ್ಯತೆ ರೈತರ ಸಾಲ ಮನ್ನಾಕ್ಕೆ ನೀಡಿಲ್ಲ. ರೈತರನ್ನು ದಿಕ್ಕು ತಪ್ಪಿಸಲು ಮಹಾದಾಯಿ ವಿಚಾರ, ಸಾಲಮನ್ನಾ ಕುರಿತು ಮಾತನಾಡುತ್ತಿದ್ದಾರೆ’ ಎಂದು ಟೀಕಿಸಿದರು.
‘ಬಿಜೆಪಿ ಪ್ರಣಾಳಿಕೆ ಸಂಪೂರ್ಣ ಬೋಗಸ್’ ಎಂದು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಯು. ಬಸವರಾಜ ಆರೋಪಿಸಿದರು.
ಅಂಬೇಡ್ಕರ್ ವೃತ್ತದಿಂದ ಆರಂಭವಾದ ರೋಡ್ ಷೋ ಡಾ.ರಾಜ್ಕುಮಾರ ರಸ್ತೆ ಮೂಲಕ ಹೊಸ ಬಸ್ ನಿಲ್ದಾಣದ ಬಳಿ ಸಮಾರೋಪಗೊಂಡಿತು. ಮುಖಂಡರಾದ ಬಂಡಿ ಬಸವರಾಜ, ಡಿ. ಮುನಿಸ್ವಾಮಿ, ಸೋಮಣ್ಣ, ಅಲ್ಲಾಭಕ್ಷಿ, ಮಂಜುನಾಥ, ಹುಲಿಯಪ್ಪ, ಅನಿಲ್ಕುಮಾರ್, ಗಾಳಿ ಬಸವರಾಜ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.