ಬಳ್ಳಾರಿ: ಬ್ಯಾಂಕ್ನಿಂದ ₹5 ಕೋಟಿ ಸಾಲ ಕೊಡಿಸುವುದಾಗಿ ನಂಬಿಸಿ ವ್ಯಕ್ತಿಯೊಬ್ಬ ನಗರದ ವ್ಯಾಪಾರಿಯೊಬ್ಬರಿಗೆ ₹15 ಲಕ್ಷ ವಂಚನೆ ಮಾಡಿರುವುದು ಬುಧವಾರ ಬೆಳಕಿಗೆ ಬಂದಿದೆ.
ನಗರದ ಸಿಇಎನ್ ಠಾಣೆಯಲ್ಲಿ ಈ ಕುರಿತುಪ್ರಕರಣ ದಾಖಲಾಗಿದೆ. ಕೋಯಮತ್ತೂರು ನಿವಾಸಿಗಳಾದ ಸತೀಶ್ ರಾವ್ ಮಟ್ಟು ಮತ್ತು ಶಿವರಾಜಕುಮಾರ್ ಎಂಬುವವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಬಳ್ಳಾರಿಯ ವ್ಯಾಪಾರಿಗೆ ಬೆಂಗಳೂರಿನಲ್ಲಿ ಸತೀಶ್ ರಾವ್ ಮಟ್ಟು ಪರಿಚಯವಾಗಿದ್ದರು. ತನಗೆ ಬ್ಯಾಂಕ್ವೊಂದರ ಅಧಿಕಾರಿ ಪರಿಚಯವಿದ್ದು ಅವರಿಂದ ₹5 ಕೋಟಿ ಕೊಡಿಸುವುದಾಗಿ ಸತೀಶ್ ಅವರನ್ನು ನಂಬಿಸಿದ್ದ. ಆತನ ಮಾತು ನಂಬಿದ ವ್ಯಾಪಾರಿ, ಬಳ್ಳಾರಿಗೆ ಬರಲು ತಿಳಿಸಿದ್ದರು. ಅದರಂತೆ, ಶಿವರಾಜ್ಕುಮಾರ್ ಎಂಬುವವರನ್ನು ತನ್ನೊಂದಿಗೆ ಬಳ್ಳಾರಿಗೆ ಕರೆತಂದಿದ್ದ ಸತೀಶ್, ಬ್ಯಾಂಕ್ ಅಧಿಕಾರಿ ಎಂದು ಪರಿಚಯಿಸಿದ್ದ ಎನ್ನಲಾಗಿದೆ.
ಸಾಲ ಕೊಡಿಸಲು ₹15 ಲಕ್ಷ ಪಡೆದಿದ್ದು ಅಲ್ಲದೇ ವ್ಯಾಪಾರಿಯ ಬ್ಯಾಂಕ್ ಖಾತೆಯೊಂದರ ವಿವರಗಳನ್ನು ಸತೀಶ್ ಪಡೆದುಕೊಂಡಿದ್ದ. ಆ ಖಾತೆ ಮೂಲಕ ಸತೀಶ್ ಅಕ್ರಮವಾಗಿ ₹3.74 ಕೋಟಿ ವ್ಯವಹಾರವನ್ನು ವ್ಯಾಪಾರಿ ಗಮನಕ್ಕೆ ಬಾರದಂತೆ ನಡೆಸಿದ್ದಾನೆ ಎನ್ನಲಾಗಿದೆ.
ಇದೆಲ್ಲದರ ಬಳಿಕ ಸಾಲ ಕೊಡಿಸದೇ ವಂಚಿಸಿದ್ದಾನೆ. ವಂಚನೆಗೊಳಗಾದ ವ್ಯಾಪಾರಿ ಈಗ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.