ಬಳ್ಳಾರಿ ಜಿಲ್ಲೆಯ ಕುರುಗೋಡು ಪಟ್ಟಣದ ಉತ್ತರ ದಿಕ್ಕಿನ ಈಶ್ವರ ಗುಡ್ಡದಲ್ಲಿ ಇರುವ ಐತಿಹಾಸಿಕ ಕೋಟೆ ನಿರ್ವಹಣೆಯ ಕೊರತೆಯಿಂದ ಪಾಳು ಬಿದ್ದಿದೆ. ಪ್ರಕೃತಿ ದತ್ತವಾಗಿ ಸುತ್ತುವರೆದಿರುವ ಕಲ್ಲಿನ ಗುಡ್ಡದ ನಡುವೆ ನಿರ್ಮಾಣಗೊಂಡಿರುವ ಈ ಕೋಟೆಯ ಕಲ್ಲುಗಳು ಕಳಚಿ ಬೀಳುತ್ತಿದ್ದು, ಕೋಟೆಯು ಆಕಾರ ಕಳೆದುಕೊಳ್ಳುತ್ತಿದೆ.
ಕೋಟೆಯ ಮೇಲ್ಭಾಗದಲ್ಲಿ ಕುಳಿತುಕೊಳ್ಳಲು ಸ್ಥಳಾವಕಾಶವಿದೆ.ಆದರೆ, ಅನೈತಿಕ ಚಟುವಟಿಕೆಗಳ ತಾಣವಾಗಿ ಬದಲಾಗಿದೆ. ಕೋಟೆಯ ಮಧ್ಯಭಾಗದಲ್ಲಿ ಆಂಜನೇಯಸ್ವಾಮಿ ದೇವಸ್ಥಾನವಿದೆ. ಕೋಟೆಯ ನಡುವೆಯೇ ಬಾವಿಯೊಂದು ಇದ್ದು, ಪಾಳು ಬಿದ್ದಿದೆ.
ಕೋಟೆಗಳನ್ನು ಸಾಮಾನ್ಯವಾಗಿ ಗಿರಿದುರ್ಗ, ವನದುರ್ಗ ಮತ್ತು ಜಲದುರ್ಗ ಎಂದು ಮೂರು ವಿಧಗಳಲ್ಲಿ ವಿಂಗಡಿಸುತ್ತಾರೆ. ಕುರುಗೋಡು ಕೋಟೆ ಗುಡ್ಡಗಳ ಸಾಲಿನಲ್ಲಿ ನಿರ್ಮಿಸಲಾಗಿರುವುದರಿಂದ ಇದನ್ನು ಗಿರಿದುರ್ಗ ಕರೆಯಲಾಗುತ್ತದೆ. ಇಂಥ ಬಲಿಷ್ಠ ಹಾಗೂ ಎತ್ತರದ ಕೋಟೆಯನ್ನು ’ಮುಗಿಲುದ್ದವಾಗಿ ಮೂವಳಿಸಿದ ಕೋಟೆ’ ಎಂದು ಶಾಸನದಲ್ಲಿ ಬಣ್ಣಿಸಲಾಗಿದೆ ಎಂಬುದು ಇತಿಹಾಸ ಪುಟಗಳಿಂದ ತಿಳಿದುಬರುತ್ತದೆ.
‘ನಿರ್ವಹಣೆ ಇಲ್ಲದೆ ಅವನತಿಯ ಅಂಚಿಗೆ ಸಾಗುತ್ತಿರುವ ಈ ಕೋಟೆಯ ರಕ್ಷಣೆಗೆ ಬಗ್ಗೆ ಕೇಂದ್ರ ಪುರಾತತ್ವ ಸರ್ವೇಕ್ಷಣಾ ಇಲಾಖೆ ಇಲ್ಲವೇ ರಾಜ್ಯ ಪ್ರಾಚ್ಯವಸ್ತು ಸಂರಕ್ಷಣಾ ಇಲಾ
ಖೆಯ ಅಧಿಕಾರಿಗಳು ಗಮನಹರಿಸುವ ಅಗತ್ಯವಿದೆ’ ಎಂದು ಸ್ಥಳೀಯರಾದ ಚಾನಾಳು ಅಂಬರೀಷ್ ಒತ್ತಾಯಿಸುತ್ತಾರೆ. ‘ನಿಧಿಗಳ್ಳರ ಹಾವಳಿಯಿಂದ ಕೋಟೆ ಅವನತಿಯ ಹಾದಿಯಲ್ಲಿದೆ’ ಎಂಬುದು ಸ್ಥಳೀಯ ಶಾಮಿಯಾನ ಮೌಲಾಲಿ ಆತಂಕ.
* *
ಕುರುಗೋಡು ಕೋಟೆ ಹಾಗೂ ದೇವಸ್ಥಾನಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆ ಕ್ರಮಕೈಗೊಳ್ಳಬೇಕು
ವಿಶ್ವನಾಥ ಗೌಡ, ಉಪನ್ಯಾಸಕ
ಕುರುಗೋಡು ಸರ್ಕಾರಿ ಪಿ.ಯು ಕಾಲೇಜು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.