ADVERTISEMENT

ಸೌಕರ್ಯಗಳ ಕೊರತೆ ನಡುವೆಯೂ ಮಿಂಚಿದರು..!

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2018, 9:49 IST
Last Updated 12 ಫೆಬ್ರುವರಿ 2018, 9:49 IST

ಬಳ್ಳಾರಿ: ಸೌಕರ್ಯಗಳ ಕೊರತೆಯ ನಡುವೆಯೂ ಸರ್ಕಾರಿ ನೌಕರರು ನಗರದಲ್ಲಿ ಭಾನುವಾರ ನಡೆದ ರಾಜ್ಯಮಟ್ಟದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಪ್ರತಿಭೆ, ಪರಿಶ್ರಮ ಪ್ರದರ್ಶಿಸಿ ಮಿಂಚಿದರು.

‘ಸಮರ್ಪಕ ಊಟ ಮತ್ತು ವಸತಿ ಸೌಕರ್ಯವಿಲ್ಲ’ ಎಂಬ ದೂರಿನ ಜೊತೆಗೇ ಕ್ರೀಡಾಪಟುಗಳು ಮತ್ತು ಕಲಾವಿದರು ಕ್ರೀಡಾಸಂಕೀರ್ಣ, ಜಿಲ್ಲಾ ಕ್ರೀಡಾಂಗಣ, ವಿಮ್ಸ್‌ ಕ್ರೀಡಾಂಗಣ ಸೇರಿ ವಿವಿಧೆಡೆ ನಡೆದ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡರು.

ಕ್ರೀಡಾ ಸಂಕೀರ್ಣ: ಸಾಂಸ್ಕೃತಿಕ ಸ್ಪರ್ಧೆಗಳು, ಈಜು, ದೇಹದಾರ್ಢ್ಯ ಹಾಗೂ ಭಾರ ಎತ್ತುವ ಸ್ಪರ್ಧೆಗಳು ನಡೆದ ಕ್ರೀಡಾ ಸಂಕೀರ್ಣ ನೂರಾರು ಮಂದಿಯನ್ನು ಆಯಸ್ಕಾಂತದಂತೆ ಸೆಳೆದಿದ್ದು ಗಮನಸೆಳೆಯಿತು. ನಾಲ್ಕೂ ವಿಭಾಗಗಳಲ್ಲಿ ಪಾಲ್ಗೊಂಡವರಿಗಿಂತಲೂ ನೋಡುಗರ ಸಂಖ್ಯೆಯೇ ಹೆಚ್ಚಿತ್ತು.

ADVERTISEMENT

ಈಜುಕೊಳದಲ್ಲಿ ಸ್ಪರ್ಧಿಗಳನ್ನು ಉತ್ತೇಜಿಸಲು ನೆರೆದವರ ಕೂಗು ಪ್ರತಿಧ್ವನಿಸುತ್ತಿತ್ತು. ಮಲ್ಟಿ ಜಿಮ್‌ನಲ್ಲಿ ನಡೆದ ದೇಹದಾರ್ಢ್ಯಹಾಗೂ ಭಾರ ಎತ್ತುವ ಸ್ಪರ್ಧೆಗಳಲ್ಲೂ ಸ್ಪರ್ಧಿಗಳಿಗೆ ಹೆಚ್ಚಿನ ಉತ್ತೇಜನ ದೊರಕಿತ್ತು.

ಮಧ್ಯಾಹ್ನ ಸ್ಪರ್ಧೆ: ಪ್ರತಿಯೊಬ್ಬರ ದೇಹ ತೂಕವನ್ನು ದಾಖಲಿಸಿಕೊಳ್ಳಬೇಕಾಗಿದ್ದುದರಿಂದ ದೇಹದಾರ್ಢ್ಯ ಹಾಗೂ ಭಾರ ಎತ್ತುವ ಸ್ಪರ್ಧೆಗಳನ್ನು ಮಧ್ಯಾಹ್ನ ಆರಂಭಿಸಲಾಗಿತ್ತು. 60 ಕೆ.ಜಿ, 65 ಕೆ.ಜಿ, 70 ಕೆ.ಜಿ ಮತ್ತು 75 ಕೆ.ಜಿ. ತೂಕದವರ ವಿಭಾಗದಲ್ಲಿ ಸ್ಪರ್ಧಿಗಳ ದೇಹದಾರ್ಢ್ಯ ಪ್ರದರ್ಶನ ವೀಕ್ಷಣೆಗೆ ನೂಕುನುಗ್ಗಲು ಏರ್ಪಟ್ಟಿದ್ದು ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.