ಹರಪನಹಳ್ಳಿ:ಇಲ್ಲಿಯ ಪುರಸಭೆ ಅಧ್ಯಕ್ಷರಾಗಿ 5ನೇ ವಾರ್ಡ್ ಬಿಜೆಪಿ ಸದಸ್ಯ ಎಚ್.ಎಂ.ಅಶೋಕ ಆಯ್ಕೆಯಾಗಿದ್ದಾರೆ.
ಶುಕ್ರವಾರ ನಡೆದ ಚುನಾವಣೆ ಆಯ್ಕೆ ಸಭೆಯಲ್ಲಿ ಅಧ್ಯಕ್ಷ ಸ್ಥಾನ ಬಯಸಿ ಬಿಜೆಪಿಯಿಂದ ಎಚ್.ಎಂ.ಅಶೋಕ್, ಪಕ್ಷೇತರ ಸದಸ್ಯ ಡಿ.ಅಬ್ದುಲ್ ರೆಹಮಾನ್ ಅವರು ನಾಮಪತ್ರ ಸಲ್ಲಿಸಿದ್ದರು. ಆಯ್ಕೆ ಸಭೆಯಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ್ ಮತ್ತು ಶಾಸಕ ಜಿ.ಕರುಣಾಕರ ರೆಡ್ಡಿ ಅವರನ್ನು ಒಳಗೊಂಡು 20 ಜನ ಸದಸ್ಯರು ಹಾಜರಿದ್ದರು. ಕಾಂಗ್ರೆಸ್ ಪಕ್ಷದ 8 ಜನ ಸದಸ್ಯರು ಮತ್ತು ಓರ್ವ ಬಿಜೆಪಿ ಸದಸ್ಯೆ ಸೇರಿ ಒಟ್ಟು 9 ಜನ ಸದಸ್ಯರು ಗೈರಾಗಿದ್ದರು.
ಕೈ ಎತ್ತುವ ಮೂಲಕ ನಡೆದ ಮತದಾನ ಪ್ರಕ್ರಿಯೆಯಲ್ಲಿ ಎಚ್.ಎಂ.ಅಶೋಕ್ ಅವರು11 ಮತ ಪಡೆದು ಗೆಲುವು ಪಡೆದಿದ್ದಾರೆ. ಅಬ್ದುಲ್ ರೆಹಮಾನ್ 9 ಮತ ಪಡೆದು ಪರಾಭವಗೊಂಡಿದ್ದಾರೆ ಎಂದು ತಹಶೀಲ್ದಾರ್ ಡಾ.ಶಿವಕುಮಾರ ಬಿರಾದಾರ್ ಘೋಷಿಸಿದರು. ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಬಣ್ಣ ಹಚ್ಚಿ ಸಂಭ್ರಮಿಸಿದರು.
ಆಯ್ಕೆ ಸಭೆ ಬಳಿಕ ಶಾಸಕ ಜಿ.ಕರುಣಾಕರ ರೆಡ್ಡಿ ಮಾತನಾಡಿ, ಬಿಜೆಪಿ ಪಕ್ಷದ ಅಭ್ಯರ್ಥಿ ಬಹುಮತ ಪಡೆದು ಗೆಲುವು ಸಾಧಿಸಿದ್ದಾರೆ. ತಮ್ಮ ಪಕ್ಷದ ಸದಸ್ಯೆಯೊಬ್ಬರು ಗೈರಾಗಿದ್ದು ಏಕೆ ಎಂಬುದು ನನಗೆ ತಿಳಿದಿಲ್ಲ, ಕಾಂಗ್ರೆಸ್ ಗುಂಪುಗಾರಿಕೆಯಿಂದಲೂ ನಾವು ಅಧಿಕಾರಕ್ಕೆ ಬಂದಿಲ್ಲ ಎಂದು ಹೇಳಿದರು.
ಸಂಸದ ಜಿ.ಎಂ.ಸಿದ್ದೇಶ್ವರ ಮಾತನಾಡಿ, ಪುರಸಭೆ ಅಧ್ಯಕ್ಷರಾಗಿರುವ ಅಶೋಕ್ ಅವರು ಪಟ್ಟಣದ ಜನತೆಯ ಒಳಿತಿಗಾಗಿ ಕೆಲಸ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಅಶೋಕ್ ಮಾತನಾಡಿ, ಪಟ್ಟಣದಲ್ಲಿ ಚರಂಡಿ, ರಸ್ತೆ, ಕುಡಿಯುವ ನೀರು ಕಲ್ಪಿಸಲು ಆದ್ಯತೆ ನೀಡಿ ಕೆಲಸ ಮಾಡುತ್ತೇನೆ ಎಂದರು. ಬಿಜೆಪಿ ಪಕ್ಷದ ಮುಖಂಡರು, ಕಾರ್ಯಕರ್ತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.