ಹೊಸಪೇಟೆ: ಆಟೊ ಹಾಗೂ ಅದರಲ್ಲಿದ್ದ ಪ್ರಯಾಣಿಕರು ನಗರದ ಸಂಡೂರು ರಸ್ತೆಯಲ್ಲಿರುವ ತುಂಗಭದ್ರಾ ಮೇಲ್ಮಟ್ಟದ ಕಾಲುವೆಯಲ್ಲಿ (ಎಚ್.ಎಲ್.ಸಿ.) ಗುರುವಾರ ಮಧ್ಯಾಹ್ನ ಕೊಚ್ಚಿಕೊಂಡು ಹೋಗಿದ್ದು, ಶೋಧ ಕಾರ್ಯ ಮುಂದುವರಿದಿದೆ.
ಪೊಲೀಸ್ ಸಿಬ್ಬಂದಿ, ಅಗ್ನಿಶಾಮಕ ದಳ ಹಾಗೂ ನುರಿತ ಈಜುಗಾರರು ರಾತ್ರಿ ವರೆಗೆ ಶೋಧ ನಡೆಸಿದರೂ ಯಾರೊಬ್ಬರೂ ಪತ್ತೆಯಾಗಿಲ್ಲ. ‘ಕಾಲುವೆ ದಡದಿಂದ ಹೋಗುತ್ತಿದ್ದಾಗ ಆಟೊ ನಿಯಂತ್ರಣ ತಪ್ಪಿ ಬಿದ್ದು, ಹರಿದು ಹೋಗುತ್ತಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಕರೆ ಮಾಡಿ ತಿಳಿಸಿದರು.
ಕೂಡಲೇ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಬಂದು ಕಾರ್ಯಾಚರಣೆ ನಡೆಸಲಾಗಿದೆ. ಆದರೆ, ಸಿಲಿಂಡರ್ ಬಿಟ್ಟರೆ ಬೇರೇನೂ ಪತ್ತೆಯಾಗಿಲ್ಲ’ ಎಂದು ಅಗ್ನಿಶಾಮಕ ದಳದ ಅಧಿಕಾರಿ ಕೆ.ಎಂ. ಕೃಷ್ಣ ಸಿಂಗ್ ತಿಳಿಸಿದರು.
‘ಕಾಲುವೆ 20 ಅಡಿ ಅಳ, ಅಷ್ಟೇ ಅಗಲವಾಗಿದೆ. ತುಂಬಿ ಹರಿಯುತ್ತಿರುವ ಕಾರಣ ನೀರಿನ ಸೆಳೆತಕ್ಕೆ ಮುಂದೆ ಹರಿದು ಹೋಗಿರುವ ಸಾಧ್ಯತೆ ಹೆಚ್ಚಿದೆ. ಆಟೊದಲ್ಲಿ ಎಷ್ಟು ಜನರಿದ್ದರೂ, ಅವರೆಲ್ಲರೂ ಎಲ್ಲಿನವರು ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.