ಬಳ್ಳಾರಿ: ನಗರದ ಕಾಳಮ್ಮ ಸರ್ಕಲ್ ಹತ್ತಿರ ಇರುವ ಆಕ್ಸಿಸ್ ಬ್ಯಾಂಕಿನ ಎಟಿಎಂನಲ್ಲಿ ದರೋಡೆ ಮಾಡಲು ಯತ್ನಿಸುತ್ತಿದ್ದ ದುಷ್ಕರ್ಮಿಯೊಬ್ಬನನ್ನು ಪೊಲೀಸರು ಸೋಮವಾರ ರಾತ್ರಿ ಬಂಧಿಸಿದ್ದಾರೆ.
ಅನಂತಪುರ ಜಿಲ್ಲೆಯ ಆರ್. ವೆಂಕಟೇಶ್ (22) ಬಂಧಿತ. ಈ ಸಂಬಂಧ ಬ್ರೂಸ್ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವೆಂಕಟೇಶ್ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಸೋಮವಾರ ರಾತ್ರಿ 1.25ರ ಸುಮಾರಿನಲ್ಲಿ ಎಟಿಎಂ ಕೇಂದ್ರಕ್ಕೆ ಕಳ್ಳ ನುಗ್ಗಿರುವ ಕುರಿತು ಬ್ರೂಸ್ಪೇಟೆ ಠಾಣೆಯ ರಾತ್ರಿ ಕರ್ತವ್ಯದಲ್ಲಿದ್ದ ಎಎಸ್ಐ ಮಲ್ಲಿಕಾರ್ಜುನ ಅವರಿಗೆ ಮಾಹಿತಿ ಸಿಕ್ಕಿತ್ತು. ಕೂಡಲೇ ಸ್ಥಳಕ್ಕೆ ತೆರಳಿದ್ದ ಮಲ್ಲಿಕಾರ್ಜುನ, ಆರೋಪಿಯನ್ನು ಕೃತ್ಯವೆಸಗುವಾಗಲೇ ಹಿಡಿದಿದ್ದರು. ಅವರಿಂದ ತಪ್ಪಿಸಿಕೊಂಡು ಹೋಗಲು ವೆಂಕಟೇಶ ಯತ್ನಿಸಿದ್ದ. ಅಷ್ಟು ಹೊತ್ತಿಗೆ ಸ್ಥಳಕ್ಕೆ ಬಂದಿದ್ದ ಕಾನ್ಸ್ಟೇಬಲ್ಗಳಾದ ಅನಿಲ್ ಮತ್ತು ಸಿದ್ದೇಶ್ ದುಷ್ಕರ್ಮಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೋಭಾರಾಣಿ ವಿ.ಜೆ ತಿಳಿಸಿದ್ದಾರೆ.
ಘಟನೆಯ ಕುರಿತ ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.