ADVERTISEMENT

ಬಳ್ಳಾರಿ ಪಾಲಿಕೆ ಧೋರಣೆಗೆ ಆಕ್ರೋಶ: ಹೋರಾಟ ತೀವ್ರಗೊಳಿಸಲು ತಂಡ ರಚನೆ

ಬಳ್ಳಾರಿ ನಾಗರಿಕ ಹೋರಾಟ ಸಮಿತಿ ಸಮಾವೇಶ

​ಪ್ರಜಾವಾಣಿ ವಾರ್ತೆ
Published 28 ಜುಲೈ 2025, 4:35 IST
Last Updated 28 ಜುಲೈ 2025, 4:35 IST
ನಗರದ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಆಗ್ರಹಿಸಿ ಭಾನುವಾರ ಗಾಂಧಿ ಭವನದಲ್ಲಿ ನಡೆದ ಬಳ್ಳಾರಿ ನಾಗರಿಕ ಹೋರಾಟ ಸಮಿತಿ (ಬಿಎನ್‌ಎಚ್‌ಎಸ್‌) ಸಮಾವೇಶದಲ್ಲಿ ಸಮಿತಿ ಸಂಚಾಲಕ ಸೋಮಶೇಖರಗೌಡ ಮಾತನಾಡಿದರು. 
ನಗರದ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಆಗ್ರಹಿಸಿ ಭಾನುವಾರ ಗಾಂಧಿ ಭವನದಲ್ಲಿ ನಡೆದ ಬಳ್ಳಾರಿ ನಾಗರಿಕ ಹೋರಾಟ ಸಮಿತಿ (ಬಿಎನ್‌ಎಚ್‌ಎಸ್‌) ಸಮಾವೇಶದಲ್ಲಿ ಸಮಿತಿ ಸಂಚಾಲಕ ಸೋಮಶೇಖರಗೌಡ ಮಾತನಾಡಿದರು.    

ಬಳ್ಳಾರಿ: ಸಮರ್ಪಕ ನಾಗರಿಕ ಸೌಲಭ್ಯಗಳಿಗಾಗಿ, ಶುದ್ಧ ಕುಡಿಯುವ ನೀರು, ಒಳಚರಂಡಿ, ಹಾಳಾದ ರಸ್ತೆಗಳ ದುರಸ್ಥಿ, ನಾಯಿ ಮತ್ತು ಬೀಡಾಡಿ ದನಗಳ ಹಾವಳಿ ತಪ್ಪಿಸಲು ಆಗ್ರಹಿಸಿ ಭಾನುವಾರ ಗಾಂಧಿ ಭವನದಲ್ಲಿ ಬಳ್ಳಾರಿ ನಾಗರಿಕ ಹೋರಾಟ ಸಮಿತಿ (ಬಿಎನ್‌ಎಚ್‌ಎಸ್‌) ಯಿಂದ ನಾಗರಿಕ ಸಮಾವೇಶ ನಡೆಯಿತು.

ಸಮಾವೇಶದಲ್ಲಿ ಮಾತನಾಡಿದ ನ್ಯಾಯವಾದಿ ಆರ್. ಪಾಂಡು, ‘ ಬಳ್ಳಾರಿ ನಗರಕ್ಕೆ 8 ರಿಂದ 10 ದಿನಕ್ಕೊಮ್ಮೆ ಕಲುಷಿತ ನೀರು ಪೂರೈಕೆಯಾಗುತ್ತದೆ. ಇದರಿಂದ ಜನರ ಆರೋಗ್ಯ ಹದಗೆಡುತ್ತಿದೆ. ರಸ್ತೆಗಳು ಗುಂಡಿಬಿದ್ಧಿವೆ. ಮಾಲಿನ್ಯ ಮಿತಿಮೀರಿದೆ. ನಗರ ಸಾರಿಗೆ ವ್ಯವಸ್ಥೆ ಸರಿಯಾಗಿಲ್ಲ. ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಮಹಾನಗರ ಪಾಲಿಕೆ ಮಾತ್ರ ಕೇವಲ ತೆರಿಗೆ ವಸೂಲಿ ಮಾಡುವುದರಲ್ಲಿ ನಿರತವಾಗಿದೆ. ಬಳ್ಳಾರಿಯನ್ನು ಲಂಡನ್ ಅಥವಾ ಪ್ಯಾರಿಸ್ ಮಾಡಿ ಎಂದು ನಾವು ಕೇಳುತ್ತಿಲ್ಲ. ಮೂಲಸೌಕರ್ಯ ಮಾತ್ರ ಕೇಳುತ್ತಿದ್ದೇವೆ.  ಟ್ರಾಫಿಕ್ ಸಮಸ್ಯೆ ಪರಿಹರಿಸಲು ಎಲ್ಲಾ ಕಡೆಯೂ ಸಿಗ್ನಲ್‌ಗಳನ್ನು ಅಳವಡಿಸಬೇಕು. ಉದ್ಯಾನಗಳನ್ನು ಉತ್ತಮಗೊಳಿಸಬೇಕು. ಕ್ರೀಡೆಗೆ ಪ್ರೋತ್ಸಾಹ ಕೊಡಬೇಕು’ ಎಂದು ಹೇಳಿದರು.

ಸಮಿತಿ ಜಿಲ್ಲಾ ಸಲಹೆಗಾರ ನರಸಣ್ಣ ಮಾತನಾಡಿ, ‘ದೇಶವೆಂದರೆ ಇಲ್ಲಿನ ಜನ ಎಂಬುದು ನಮ್ಮ ಪಾಲಿಕೆಗೆ ನಾವು ಅರ್ಥ ಮಾಡಿಸಬೇಕು. ಇಲ್ಲಿ ಸ್ವಚ್ಛ ಭಾರತ ಎಂಬುದು ಕೇವಲ ಮಾತಿಗೆ ಸೀಮಿತವಾಗಿದೆ. ಮನೆಯಿಂದ ಹೊರಗೆ ಬಂದರೆ ಹೊಲಸು ಭಾರತವನ್ನೇ ನಾವು ನೋಡುತ್ತಿದ್ದೇವೆ. ಜನಗಳ ಸಮಸ್ಯೆ ಬಗೆಹರಿಸದಿದ್ದರೆ ನಮಗೆ ಈ ಮಹಾನಗರ ಪಾಲಿಕೆ ಏಕೆ ಬೇಕು? ಇಂತಹ ನಿರ್ಲಕ್ಷ್ಯ ಧೋರಣೆ ಹೊಂದಿರುವ ಮಹಾನಗರ ಪಾಲಿಕೆ ವಿರುದ್ಧ ಹೋರಾಟಕ್ಕೆ ನೀವೆಲ್ಲರೂ ಸಜ್ಜಾಗಬೇಕು’ ಎಂದರು. 

ADVERTISEMENT

ಸಮಿತಿಯ ಮತ್ತೊಬ್ಬ ಸಲಹೆಗಾರ ಮುರ್ತುಜಾ ಸಾಬ್ ‘ಈ ಸಮಾವೇಶಕ್ಕೆ ಒಂದು ತಿಂಗಳಿನಿಂದ ತಯಾರಿ ನಡೆಯುತ್ತಿದೆ. ಒಂದು ಲಕ್ಷ ಸಹಿ ಸಂಗ್ರಹಣೆ ಮಾಡಲಾಗುತ್ತಿದೆ. ಇದರ ಪರಿಣಾಮವಾಗಿ ಮಹಾನಗರ ಪಾಲಿಕೆ ಹಲವು ಕಡೆ ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಿದೆ. ಇದು ಜನಗಳ ಹೋರಾಟಕ್ಕಿರುವ ಶಕ್ತಿ’ ಎಂದು ತಿಳಿಸಿದರು. 

ಸಮಿತಿಯ ಸಂಚಾಲಕ ಆರ್. ಸೋಮಶೇಖರ್ ಗೌಡ ಮಾತನಾಡಿ, ‘ಮಹಾನಗರ ಪಾಲಿಕೆ ಸಮಸ್ಯೆಗಳನ್ನು ಬಗೆಹರಿಸುತ್ತಿಲ್ಲ. ಬದಲಿಗೆ ಸೃಷ್ಟಿಸುತ್ತಿದೆ. ಹೀಗಾಗಿ ಸಮಸ್ಯೆಗಳು ಹೆಚ್ಚುತ್ತಲೇ ಇವೆ. ಈ ಎಲ್ಲಾ ಸಮಸ್ಯೆಗಳು ಬಗೆಹರಿಯಬೇಕೆಂದರೆ ಬಡಾವಣೆಗಳಲ್ಲಿ ಜನತೆ ಸಮಿತಿಗಳನ್ನ ರಚಿಸಿಕೊಂಡು ಹೋರಾಡಬೇಕು. ಹೋರಾಟ ಒಂದೇ ನಮ್ಮ ಮುಂದೆ ಇರುವ ದಾರಿ’ ಎಂದು ಹೇಳಿದರು.

ಸಮಿತಿಯ ಜಿಲ್ಲಾ ಸಲಹೆಗಾರ ಶ್ಯಾಮಸುಂದರ, ಕಾರ್ಯಕಾರಿ ಸಮಿತಿಯ ಸದಸ್ಯ ಡಾ. ಎನ್. ಪ್ರಮೋದ್, ಎ. ಶಾಂತಾ ಸಮಾವೇಶದಲ್ಲಿ ಮಾತನಾಡಿದರು. 

ಗೊತ್ತುವಳಿ ಮಂಡನೆ 

ಬಳ್ಳಾರಿ ನಗರದಲ್ಲಿರುವ ಸಮಸ್ಯೆಗಳು ಮತ್ತು ಅವುಗಳ ಪರಿಹಾರಕ್ಕೆ ಸಂಬಂಧಿಸಿದ ಗೊತ್ತುವಳಿಯನ್ನು ಸಮಾವೇಶದಲ್ಲಿ ಮಂಡಿಸಲಾಯಿತು. ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ 47 ಜನ ಸದಸ್ಯರ ಹೊಸ ಸಮಿತಿ ರಚನೆಯಾಯಿತು. ಈ ಸಮಿತಿಯ ನಿಯೋಗದಲ್ಲಿ ಇದೇ ತಿಂಗಳ 30ರಂದು ಮಹಾನಗರ ಪಾಲಿಕೆಯ ಮೇಯರ್ ಅವರಿಗೆ ಮನವಿ ಪತ್ರ ಸಲ್ಲಿಸಲು ನಿರ್ಧರಿಸಲಾಯಿತು. 

ನಗರದ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಆಗ್ರಹಿಸಿ ಭಾನುವಾರ ಗಾಂಧಿ ಭವನದಲ್ಲಿ ನಡೆದ ಬಳ್ಳಾರಿ ನಾಗರಿಕ ಹೋರಾಟ ಸಮಿತಿ (ಬಿಎನ್‌ಎಚ್‌ಎಸ್‌) ಸಮಾವೇಶದಲ್ಲಿ ಭಾಗವಹಿಸಿದ್ದ ಜನ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.