ಸಿರುಗುಪ್ಪ: ನಗರದ ಉಪ ನೋಂದಣಾಧಿಕಾರಿಗಳ ಕಚೇರಿ ಮಂದೆ ಸಿ.ಪಿ.ಐ.ಎಂ ತಾಲ್ಲೂಕು ಸಮಿತಿ ವತಿಯಿಂದ ಸೋಮವಾರ ಧರಣಿ ಪ್ರತಿಭಟನೆ ನಡೆಸಿದರು.
ನಂತರ ಮಧ್ಯಾಹ್ನ ತಾಲ್ಲೂಕು ಉಪ ನೋಂದಣಾಧಿಕಾರಿ ವಿರುದ್ದ ಕಾನೂನು ಕ್ರಮಕ್ಕೆ ಒತ್ತಾಯಿಸಿ ಶಿರಸ್ತೇದಾರ ರಾಘವೇಂದ್ರ ಅವರಿಗೆ ಪತ್ರ ಸಲ್ಲಿಸಿದರು.
ಸಿ.ಪಿ.ಐ.ಎಂ ತಾಲ್ಲೂಕು ಕಾರ್ಯದರ್ಶಿ ಎಚ್.ತಿಪ್ಪಯ್ಯ ಮಾತನಾಡಿ, ಸಿರುಗುಪ್ಪ ಉಪ ನೋಂದಾಣಾಧಿಕಾರಿಗಳು ಮತ್ತು ಇತರರು ಸೇರಿ ಸುಳ್ಳು ದಾಖಲೆ ಸೃಷ್ಟಿಸಿ ಬೇನಾಮಿ ಹೆಸರುಗಳ ಮೇಲೆ ಆಸ್ತಿಗಳನ್ನು ಕ್ರಯ ನೋಂದಣಿ ಮಾಡಿಸಿಕೊಳ್ಳುವುದರಿಂದ ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ ಎಂದರು.
ಅನಗತ್ಯವಾಗಿ ಸಾರ್ವಜನಿಕರನ್ನು ಕೋರ್ಟ್ ಕಚೇರಿಗೆ ತಿರುಗುವಂತೆ ಮಾಡುತ್ತಿದ್ದಾರೆ, ಆಸ್ತಿ ನೋಂದಣಿ ಮಾಡಿಸಿಕೊಳ್ಳುವವರ ಹತ್ತಿರ ಸರ್ಕಾರದ ಶುಲ್ಕ ಮೀರಿ ಹೆಚ್ಚಿನ ಹಣ ವಸೂಲಿ ಮಾಡುತ್ತಿರುವುದರಿಂದ ನಾಗರಿಕರು ಬೇಸತ್ತಿದ್ದಾರೆ. ಇದ್ದರಿಂದ ಆಸ್ತಿ ಪಟ್ಟದಾರರಿಗೆ ನಡುಕ ಹುಟ್ಟವಂತಾಗಿದೆ ಮತ್ತು ಹಲವು ಅಕ್ರಮ ದಾಖಲೆ ಸೃಷ್ಟಿ ಮಾಡಿದ ವ್ಯಕ್ತಿಗಳ ವಿರುದ್ಧ ಹಾಗೂ ಉಪನೋಂದಣಿ ಅಧಿಕಾರಿಗಳ ಅಕ್ರಮದಲ್ಲಿ ಭಾಗಿಯಾದವರ ಮೇಲೆ ಸೂಕ್ತ ಕ್ರಮ ಜರುಗಿಸಬೇಕು, ಇಲ್ಲದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪಕ್ಷದ ಮುಖಂಡರಾದ ಎಚ್.ಬಿ.ಓಬಳೇಶ್ವರಪ್ಪ, ಬಿ.ಎಲ್.ಈರಣ್ಣ, ವಿ.ಮಾರುತಿ, ಬಿ.ಸುರೇಶ್, ಕೆ.ಈರಮ್ಮ, ಕೆ.ಬಸವರಾಜ, ಎಂ.ಲಕ್ಷ್ಮಣ್ಣ, ಎಚ್.ಎಂ.ದುರಗಪ್ಪ, ನಾಗರಾಜ ಗೌಡ, ಎಂ.ಹುಲ್ಲೆಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.