ಹರಪನಹಳ್ಳಿ : ದಾವಣಗೆರೆ ವಾಣಿಜ್ಯ ತೆರಿಗೆಗಳ ಇಲಾಖೆ ಉಪ ಆಯುಕ್ತ ಸಿದ್ದರಾಜು ನೇತೃತ್ವದ ಅಧಿಕಾರಿಗಳ ತಂಡ ಗುರುವಾರ ಪಟ್ಟಣದ ವಿವಿಧ ಅಂಗಡಿಗಳ ಮೇಲೆ ಪರೀಕ್ಷಾರ್ಥ ಖರೀದಿ ಮತ್ತು ತಪಾಸಣೆ ಕೈಗೊಂಡಿತು.
ದಾವಣಗೆರೆ ನಾಲ್ಕು ವಾಹನಗಳಲ್ಲಿ ಆಗಮಿಸಿದ್ದ 10ಕ್ಕೂ ಅಧಿಕ ಜನರಿದ್ದ ಅಧಿಕಾರಿಗಳ ತಂಡ ಮಾರುತಿ ಎಲೆಕ್ಟ್ರಿಕಲ್ಸ್, ಎಲೆಕ್ಟ್ರಾನಿಕ್ಸ್, ಕಬ್ಬಿಣ ಅಂಗಡಿ, ಬಟ್ಟೆ ವ್ಯಾಪಾರ ಸೇರಿದಂತೆ 15ಕ್ಕು ಹೆಚ್ಚು ಅಂಗಡಿಗಳ ಮೇಲೆ ದಾಳಿ ನಡೆಸಿ, ದಂಡ ವಿಧಿಸಿ ತೆರಳಿದೆ. ಮದ್ಯಾಹ್ನ 12 ಗಂಟೆಗೆ ಬಂದು ರಾತ್ರಿ 8 ಗಂಟೆ ತನಕ ಅಂಗಡಿಗಳಲ್ಲಿ ಪರಿಶೀಲನೆ ನಡೆಸಿತು.
ಸಿಬ್ಬಂದಿ ವಿವಿಧ ಅಂಗಡಿಗಳಲ್ಲಿ ಪರೀಕ್ಷಾರ್ಥ ಸಾಮಾನು ಖರೀದಿಸಿದ್ದಾರೆ. ಖರೀದಿಸಿದ ವಸ್ತುಗಳಿಗೆ ಜಿಎಸ್ಟಿ ಬಿಲ್ ಕೇಳಿದರೂ ಕೊಟ್ಟಿಲ್ಲ. ಅಂತಹ 12 ಅಂಗಡಿಗಳ ಮೇಲೆ ದಾಳಿ ನಡೆಸಿ, ಪ್ರತಿ ಮಾಲೀಕರಿಗೆ ₹20 ಸಾವಿರ ತನಕ ದಂಢ ವಿಧಿಸಿದ್ದಾರೆ ಎಂದು ಇಲಾಖೆ ಮೂಲಗಳು ತಿಳಿಸಿವೆ.
ಹರಪನಹಳ್ಳಿ ಪಟ್ಟಣದ ವಿವಿಧ ಅಂಗಡಿಗಳಲ್ಲಿ ಸಾಮಾನು ಖರೀದಿಸಿದಾಗ ಬಿಲ್ ಕೊಡದಿರುವ ಬಗ್ಗೆ ದೂರುಗಳು ಬಂದಿದ್ದವು. ಅವುಗಳ ಆಧಾರದ ಮೇಲೆ ತಪಾಸಣೆ ಕೈಗೊಂಡು, ರಸೀದಿ ಕೊಡದ 12 ಅಂಗಡಿಗಳ ಮಾಲೀಕರಿಗೆ ತಲಾ ₹20 ಸಾವಿರ ದಂಡ ವಿಧಿಸಲಾಗಿದೆ. ಯಾವುದೇ ವ್ಯಕ್ತಿ ಕನಿಷ್ಠ ₹200 ಸಾಮಾನು ಖರೀದಿಸಿದರೆ, ಕಡ್ಡಾಯವಾಗಿ ಜಿಎಸ್ಟಿ ಬಿಲ್ ಕೊಡುವ ನಿಯಮವನ್ನು ಪ್ರತಿಯೊಬ್ಬರು ಪಾಲಿಸಬೇಕು ಎಂದು ಉಪ ಆಯುಕ್ತ ಸಿದ್ದರಾಜು ತಿಳಿಸಿದರು. ಸಹಾಯಕ ಆಯುಕ್ತ ನಟರಾಜ್, ತೆರಿಗೆ ಅಧಿಕಾರಿಗಳಾದ ರಾಜಕುಮಾರ, ಗಾಯತ್ರಿ ಹಾಗೂ ನಾಲ್ಕು ಜನ ಪರಿವೀಕ್ಷಕರು, ಸಿಬ್ಬಂದಿ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.