ADVERTISEMENT

ಕೆಳಮಟ್ಟದ ಕಾಲುವೆಗೆ ಹರಿದ ನೀರು

ಎಚ್‌.ಎಲ್‌.ಸಿ.ಗೆ 8ರಂದು ನೀರು ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2019, 14:35 IST
Last Updated 7 ಆಗಸ್ಟ್ 2019, 14:35 IST
ತುಂಗಭದ್ರಾ ಕೆಳಮಟ್ಟದ ಕಾಲುವೆಗೆ ಬುಧವಾರ ನೀರು ಹರಿಸಲಾಯಿತು
ತುಂಗಭದ್ರಾ ಕೆಳಮಟ್ಟದ ಕಾಲುವೆಗೆ ಬುಧವಾರ ನೀರು ಹರಿಸಲಾಯಿತು   

ಹೊಸಪೇಟೆ: ಕೃಷಿ ಉದ್ದೇಶಕ್ಕಾಗಿ ತುಂಗಭದ್ರಾ ಜಲಾಶಯ ಆಡಳಿತ ಮಂಡಳಿಯು ಬಲದಂಡೆ ಕೆಳಮಟ್ಟದ ಕಾಲುವೆ (ಎಲ್‌.ಎಲ್‌.ಸಿ.) ಹಾಗೂ ಎಡದಂಡೆ ಮುಖ್ಯ ಕಾಲುವೆಗೆ ಬುಧವಾರ ನೀರು ಹರಿಸಿದೆ.

ಬಲದಂಡೆ ಮೇಲ್ಮಟ್ಟದ ಕಾಲುವೆಗೆ (ಎಚ್‌.ಎಲ್‌.ಸಿ.) ಗುರುವಾರ (ಆ.8) ನೀರು ಹರಿಸಲು ನಿರ್ಧರಿಸಿದೆ. ವಿಜಯನಗರ ಕಾಲುವೆಗಳಿಗೆ ಹಲವು ದಿನಗಳಿಂದ ನೀರು ಹರಿಸಲಾಗುತ್ತಿದೆ. ಸದ್ಯ 100 ಕ್ಯುಸೆಕ್‌ ನೀರು ಹರಿಸಲಾಗುತ್ತಿದ್ದು, ಹಂತ ಹಂತವಾಗಿ ಹೆಚ್ಚಿಸಲಾಗುತ್ತದೆ.

ಬಲದಂಡೆ ಮೇಲ್ಮಟ್ಟ ಹಾಗೂ ಕೆಳಮಟ್ಟದ ಕಾಲುವೆಯ ನೀರು ಬಳ್ಳಾರಿ, ಅನಂತಪುರ, ಕರ್ನೂಲು, ಕಡಪ ಜಿಲ್ಲೆಗಳಿಗೆ ಹೋದರೆ, ಎಡದಂಡೆ ಮುಖ್ಯ ಕಾಲುವೆಯ ನೀರು ಕೊಪ್ಪಳ, ರಾಯಚೂರು ಜಿಲ್ಲೆಗೆ ಹೋಗಲಿದೆ. ಇನ್ನು ವಿಜಯನಗರದ ಉಪಕಾಲುವೆಗಳ ನೀರು ನಗರದಿಂದ ಕಂಪ್ಲಿ ವರೆಗೆ ಹರಿಯಲಿದೆ.

ADVERTISEMENT

ಕೆಳಮಟ್ಟದ ಕಾಲುವೆಗೆ ಒಂದು ವಾರದಿಂದ ಕುಡಿಯುವ ಉದ್ದೇಶಕ್ಕಾಗಿ ನೀರು ಹರಿಸಲಾಗುತ್ತಿದೆ. ಈಗ ಅದರೊಂದಿಗೆ ಕೃಷಿ ಉದ್ದೇಶಕ್ಕೂ ನೀರು ಹರಿಸಲಾಗುತ್ತಿದೆ. ಎಲ್ಲ ಕಾಲುವೆಗಳಿಗೂ ನೀರು ಹರಿಸುವಂತೆ ರಾಜ್ಯ ಸರ್ಕಾರ ಮಂಗಳವಾರ ರಾತ್ರಿ ಆದೇಶ ಹೊರಡಿಸಿತ್ತು. ಅದರಂತೆ ನೀರು ಹರಿಸಲಾಗುತ್ತಿದೆ. ಎಚ್‌.ಎಲ್‌.ಸಿ.ಯಲ್ಲಿ ಕೆಲವೆಡೆ ಕೆಲಸ ನನೆಗುದಿಗೆ ಬಿದ್ದಿರುವುದರಿಂದ ಒಂದು ದಿನ ತಡವಾಗಿ ನೀರು ಹರಿಸಲು ತೀರ್ಮಾನಿಸಲಾಗಿದೆ ಎಂದು ತುಂಗಭದ್ರಾ ನೀರಾವರಿ ಯೋಜನೆಯ ಅಧಿಕಾರಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.