ದೊಡ್ಡಬಳ್ಳಾಪುರ: ದಾಖಲಾತಿ ಇಲ್ಲದೆ ಕನ್ನಡ ಶಾಲೆಗಳು ಮುಚ್ಚುತ್ತಿರುವ ಈ ಸಂದರ್ಭದಲ್ಲೂ 1ನೇ ತರಗತಿಗೆ 65 ಮಕ್ಕಳು ದಾಖಲಾಗಿರುವುದು ಹೆಮ್ಮೆಯ ವಿಷಯ ಎಂದು ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಸಿಲ್ವರ್ಸ್ ಸ್ಪಾರ್ಕ್ನ ಮಾನವ ಸಂಪನ್ಮೂಲ ವಿಭಾಗದ ಮುಖ್ಯ ಆಡಳಿತಾಧಿಕಾರಿ ವಿ.ವೆಂಕಟೇಶ್ ಹೇಳಿದರು.
ನಗರದ ಸ್ವಾಮಿ ವಿವೇಕಾನಂದ ಹಿರಿಯ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ 1ನೇ ತರಗತಿ ವಿದ್ಯಾರ್ಥಿಗಳಿಗೆ `ಅಕ್ಷರ' ಬರೆಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಗ್ರಾಮೀಣ ಹಾಗೂ ನಗರ ಪ್ರದೇಶದ ಬಹುತೇಕ ಕನ್ನಡ ಶಾಲೆಗಳಲ್ಲಿ ಇವತ್ತು ದಾಖಲಾತಿಗಳು ಇಲ್ಲದೆ ಶಾಲೆಗಳು ಮುಚ್ಚುವ ಹಂತಕ್ಕೆ ಬಂದಿವೆ. ಇಂತಹ ಸಂದರ್ಭದಲ್ಲಿ ನಗರ ಪ್ರದೇಶದಲ್ಲಿನ ಅನುದಾನಿತ ಕನ್ನಡ ಪ್ರಾಥಮಿಕ ಶಾಲೆಯ 1ನೇ ತರಗತಿಗೆ 65 ಜನ ಮಕ್ಕಳು ದಾಖಲಾಗಿರುವುದು ಹೆಮ್ಮೆಯ ವಿಷಯ. ಶಿಸ್ತುಬದ್ಧ ಉತ್ತಮ ಶಿಕ್ಷಣ ಹಾಗೂ ಕಲಿಕಾ ವಾತಾವರಣ ನಿರ್ಮಾಣ ಮಾಡಿದರೆ ಪೋಷಕರು ತಾವಾಗಿಯೇ ಕನ್ನಡ ಶಾಲೆಗಳತ್ತ ಬರುತ್ತಾರೆ ಎಂದು ಹೇಳಿದರು.
ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ ಕಾರ್ಯದರ್ಶಿ ಎಂ.ಬಿ.ಗುರುದೇವ್ ಮಾತನಾಡಿ, 1ನೇ ತರಗತಿಗೆ ದಾಖಲಾಗಿರುವ ಮಕ್ಕಳಿಗೆ ಅಕ್ಕಿ ಮೇಲೆ ಕನ್ನಡ ವರ್ಣ ಮಾಲೆಯ `ಅ' ಅಕ್ಷರ ಬರೆಸುವ ಮೂಲಕ ಕಲಿಕೆಗೆ ಚಾಲನೆ ನೀಡಲಾಗಿದೆ. ಮಕ್ಕಳು ಸಂತಸದಾಯಕ ವಾತಾವರಣದಲ್ಲಿ ಓದು,ಬರಹ ಕಲಿಯುವಂತೆ ಮಾಡಿದಾಗ ಮಾತ್ರ ಕಲಿಕೆಯಲ್ಲಿ ಪ್ರಗತಿ ಸಾಧಿಸಲು ಸಾಧ್ಯ' ಎಂದರು.
`ಕಲಿಕೆ ಎನ್ನುವುದು ಬಲವಂತವಾಗಬಾರದು. ಈ ಸಾಲಿನಲ್ಲಿ ಸ್ವಾಮಿ ವಿವೇಕಾನಂದ ಕನ್ನಡ ಹಿರಿಯ ಪ್ರಾಥಮಿ ಶಾಲೆಯಲ್ಲಿ 586 ಜನ ವಿದ್ಯಾರ್ಥಿಗಳು ವ್ಯಾಸಂಗ ಮಾಡುವ ಮೂಲಕ ಇಡೀ ನಗರದಲ್ಲಿಯೇ ಅತಿ ಹೆಚ್ಚು ಜನ ವಿದ್ಯಾರ್ಥಿಗಳು ಕಲಿಯುತ್ತಿರುವ ಶಾಲೆ ಎನ್ನುವ ಕೀರ್ತಿಗೆ ಪಾತ್ರವಾಗಿದೆ' ಎಂದು ಹೇಳಿದರು. ಮುಖ್ಯಶಿಕ್ಷಕ ಹುಲಿಕಲ್ ನಟರಾಜ್, ಸಿಲ್ವರ್ಸ್ ಸ್ಪಾರ್ಕ್ನ ನರಸಪ್ಪ ಮತ್ತಿತರರು ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.