ADVERTISEMENT

ಒತ್ತುವರಿ–ರೈತರಿಗೆ ನೋಟಿಸ್

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2017, 6:22 IST
Last Updated 21 ನವೆಂಬರ್ 2017, 6:22 IST

ವಿಜಯಪುರ: ‘ಕೆರೆ ಅಂಗಳದ ಸರ್ಕಾರಿ ಜಮೀನುಗಳನ್ನು ಒತ್ತುವರಿ ಮಾಡಿಕೊಂಡಿದ್ದೀರಿ. ಇದಕ್ಕೆ ಉತ್ತರಿಸಲು ನೀವು ಹಾಜರಾಗಿ ಎಂದು ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದಿಂದ ನೋಟಿಸ್ ನೀಡುವ ಮೂಲಕ ರೈತರ ಮಾನಸಿಕ ನೆಮ್ಮದಿಗೆ ಭಂಗವುಂಟು ಮಾಡಲಾಗುತ್ತಿದೆ’ ಎಂದು ರೈತ ಮುಖಂಡ ಕಲ್ಯಾಣ್ ಕುಮಾರ್ ಬಾಬು ಬೇಸರ ವ್ಯಕ್ತಪಡಿಸಿದ್ದಾರೆ.

ಸತತ ನಾಲ್ಕೈದು ವರ್ಷಗಳಿಂದ ತೀವ್ರ ಬರಗಾಲವಿದೆ. ರೈತರು ತಮ್ಮ ಜಮೀನುಗಳಲ್ಲಿ ಬೆಳೆಗಳನ್ನು ಬಿತ್ತನೆ ಮಾಡಿ, ಬೆಳೆಯಲು ಸಾಧ್ಯವಾಗಿಲ್ಲ. ಜಮೀನುಗಳಿಗೆ ಹೊಂದಿಕೊಂಡಿರುವ ಕೆರೆ ಅಂಗಳ ಪ್ರದೇಶಗಳಲ್ಲಿ ರೈತರು ದನಕರುಗಳಿಗೆ ಮೇವು ಬಿತ್ತನೆ ಮಾಡಿದ್ದರು. ನೀರಾವರಿ ಇರುವವರು ರೇಷ್ಮೆ ಬೆಳೆಗಳನ್ನು ಇಟ್ಟುಕೊಂಡಿದ್ದರು ಎಂದಿದ್ದಾರೆ.

ಈಚೆಗೆ ರಾಜ್ಯ ಸರ್ಕಾರ ಭೂ ಮಾಪಕರಿಂದ ಕೆರೆಗಳನ್ನು ಸರ್ವೇ ಮಾಡಿ ಕೆರೆ ಅಚ್ಚುಕಟ್ಟು ಪ್ರದೇಶದ ಸುತ್ತಲೂ ಕಾಲುವೆ ನಿರ್ಮಾಣ ಮಾಡಿ, ಕೆರೆ ಭೂಮಿಯನ್ನು ಸರ್ಕಾರದ ವಶಕ್ಕೆ ಪಡೆದುಕೊಂಡಿದೆ. ನಂತರ ಯಾವ ರೈತರು ಕೆರೆ ಅಂಗಳಕ್ಕೆ ಹೋಗಿಲ್ಲ. ಸದರಿ ಭೂಮಿಗಳನ್ನು ಯಾರೂ ಅಕ್ರಮವಾಗಿ ಮಾರಾಟಕ್ಕೆ ಯತ್ನಿಸಿಲ್ಲ ಎಂದು ತಿಳಿಸಿದ್ದಾರೆ.

ADVERTISEMENT

ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದಿಂದ ರೈತರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಖುದ್ದಾಗಿ ಅಥವಾ ವಕೀಲರ ಮೂಲಕ ನ್ಯಾಯಪೀಠದ ಮುಂದೆ ಹಾಜರಾಗುವಂತೆ ತಿಳಿಸಿದೆ. ತೀವ್ರ ಸಂಕಷ್ಟಕ್ಕೆ ಒಳಗಾಗಿರುವ ರೈತರಿಗೆ ವಕೀಲರನ್ನು ನೇಮಿಸಬೇಕಾದರೆ ಹಣಕಾಸಿನ ತೊಡಕು ಉಂಟಾಗುತ್ತಿದೆ. ಬೆಂಗಳೂರಿನ ಕಂದಾಯ ಭವನದಲ್ಲಿರುವ ನ್ಯಾಯಾಲಯಕ್ಕೆ ಹಾಜರಾಗಬೇಕಾದರೆ ಕಷ್ಟವಾಗಿದೆ. ಆದ್ದರಿಂದ ಜಾರಿಯಾಗಿರುವ ನೋಟಿಸ್ ಬಗ್ಗೆ ಪುನರ್ ಪರಿಶೀಲಿಸಬೇಕು. ರೈತರಿಗೆ ಆಗುತ್ತಿರುವ ತೊಂದರೆ ತಪ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.

ರೈತರು ನ್ಯಾಯಾಲಯಕ್ಕೆ ಹಾಜರಾಗಲು ಅವರ್‌್ಯಾರು ಅಕ್ರಮವಾಗಿ ದಾಖಲೆಗಳನ್ನು ಮಾಡಿಕೊಂಡಿಲ್ಲ, ಸರ್ವೇ ಮಾಡಿದ ನಂತರ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿತ್ತು. ರೈತರು ಒತ್ತುವರಿಯನ್ನು ಬಿಟ್ಟಿದ್ದರಿಂದ ಆಕ್ಷೇಪಣೆಗಳು ಸಲ್ಲಿಸಿಲ್ಲ. ಆದರೂ ರೈತರಿಗೆ ನೋಟಿಸ್‌ ನೀಡಿರುವುದು ಹಾಸ್ಯಾಸ್ಪದವಾಗಿದೆ. ಅವುಗಳನ್ನು ಪುನರ್ ಪರಿಶೀಲಿಸಿ ರೈತರ ಮೇಲಿರುವ ಪ್ರಕರಣಗಳನ್ನು ವಜಾಗೊಳಿಸಬೇಕು ಎಂದು ರೈತ ಸಂಘ ಮತ್ತು ಹಸಿರು ಸೇನೆ ಹೋಬಳಿ ಘಟಕದ ಅಧ್ಯಕ್ಷ ಮಂಡಿಬೆಲೆ ನಾರಾಯಣಸ್ವಾಮಿ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.