ADVERTISEMENT

ಕರ್ತವ್ಯಲೋಪ ಎಸಗಿದ್ದರೆ ಕ್ರಮ

ಉಪಲೋಕಾಯುಕ್ತರ ಸಮ್ಮುಖದಲ್ಲಿ ದೂರುಗಳ ವಿಲೇವಾರಿ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2013, 9:16 IST
Last Updated 5 ಡಿಸೆಂಬರ್ 2013, 9:16 IST

ದೊಡ್ಡಬಳ್ಳಾಪುರ: ತಾಲ್ಲೂಕು ವ್ಯಾಪ್ತಿ ಯಲ್ಲಿ ಲೋಕಾಯುಕ್ತಕ್ಕೆ ಸಲ್ಲಿಕೆ ಯಾಗಿದ್ದ ದೂರುಗಳ ವಿಲೇವಾರಿ ಮತ್ತು ಸಾರ್ವಜನಿಕರ ಕುಂದು ಕೊರತೆಗಳ ಸಭೆ ರಾಜ್ಯ ಉಪ ಲೋಕಾಯುಕ್ತ ನ್ಯಾಯಮೂರ್ತಿ ಸುಭಾಷ್ ಬಿ.ಆಡಿ ಅವರ ನೇತೃತ್ವದಲ್ಲಿ  ನಗರದ ಒಕ್ಕಲಿಗರ ಭವನದಲ್ಲಿ ನಡೆಯಿತು.

ಅಧಿಕಾರಿಗಳು ನಿವೃತ್ತಿಯಾಗಿದ್ದರೂ ಸಹ ಕರ್ತವ್ಯಲೋಪ ಎಸಗಿದ್ದರೆ ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು.

ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಸಾರ್ವಜನಿಕರ ಯಾವುದೇ ಕೆಲಸಗಳನ್ನು ವಿಳಂಬ ಮಾಡಬಾರದು. ಕರ್ತವ್ಯದಲ್ಲಿ ಭ್ರಷ್ಟಾಚಾರವೆಸಗಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಉಪಲೋಕಾಯುಕ್ತ ನ್ಯಾಯಮೂರ್ತಿ ಅಧಿಕಾರಿಗಳಿಗೆ ಎಚ್ಚರಿಸಿದರು.

ಹಳ್ಳಿಗಳಲ್ಲಿ ಸಂಚರಿಸಲು ಪರವಾನಗಿ ಪಡೆದು ಹಳ್ಳಿಗಳಿಗೆ ಬಾರದೇ ಹೆದ್ದಾರಿಗಳಲ್ಲಿ ಸಂಚರಿಸುತ್ತಿರುವ ಖಾಸಗಿ ಬಸ್‌ಗಳ ಮೇಲೆ ಕ್ರಮ ಕೈಗೊಳ್ಳುವಂತೆ ಆರ್.ಟಿ.ಓ ಅಧಿಕಾರಿಗಳಿಗೆ ಮನವಿ ಮಾಡಿದ್ದರ ಯಾವುದೇ ಕ್ರಮ ಕೈಗೊಂಡಿಲ್ಲ.

ಅಧಿಕಾರಿಗಳು ಒಂದು ಬಸ್ ಹಿಡಿದು ವಶಪಡಿಸಿಕೊಂಡರೆ ಅದೇ ಕಂಪೆನಿಯ ಇನ್ನೊಂದು ಬಸ್ ಸಂಚರಿಸುತ್ತದೆ ಎಂದು ಸಾಸಲು ಹೋಬಳಿಯ ಚಿಕ್ಕರಾಜು ನೀಡಿದ್ದ ದೂರನ್ನು ವಿಚಾರಣೆ ನಡೆಸಿದ ಉಪ ಲೋಕಾ ಯುಕ್ತ ನ್ಯಾಯಮೂರ್ತಿಗಳು, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ೧೫ ದಿನಗಳೊಳಗೆ ಈ ಬಗ್ಗೆ ವರದಿ ಸಲ್ಲಿಸಬೇಕು. ನಿರ್ದಿಷ್ಟ ಮಾರ್ಗಗಳ ಪರವಾನಗಿ ಪಡೆದು ಬೇರೆ ಮಾರ್ಗದಲ್ಲಿ ಸಂಚರಿಸುವ ವಾಹನಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಸಾಸಲು ಹೋಬಳಿ ಕೆ.ಜಿ. ಲಿಂಗೇನಹಳ್ಳಿಯಲ್ಲಿ ನಡೆದ ಬೋಗಸ್ ಖಾತೆ ವಿಚಾರವಾಗಿ ದೂರು ಸ್ವೀಕರಿಸಿದ ಅವರು, ಗ್ರಾಮಲೆಕ್ಕಿಗರು ಸರಿಯಾದ ದಾಖಲೆ ತರದಿರುವುದನ್ನು ಹಾಗೂ ಪ್ರಕರಣದ ಕುರಿತಾಗಿ ಮಾಹಿತಿ ಇಲ್ಲದಿರುವುದನ್ನು ಗಂಭೀರವಾಗಿ ಪರಿಗಣಿಸಿ ಕಾಣೆಯಾಗಿರುವ ಕಡತ ಹುಡುಕಿ ಸೂಕ್ತ ಕ್ರಮ ಕೈಗೊಳ್ಳಬೇಕು. ಗ್ರಾಮಲೆಕ್ಕಿಗರು ಗ್ರಾಮಗಳಲ್ಲಿ ವಾಸವಿದ್ದು, ಜನರ ಕೆಲಸಗಳನ್ನು ಮಾಡಿಕೊಡಬೇಕು ಸೂಚನೆ ನೀಡಿದರು.

ಪೋಲಿಸ್ ಠಾಣೆಯಲ್ಲಿ ದೂರು ಸ್ವೀಕರಿಸದೆ ಸಂಧಾನ ಮಾಡಿ ತಪ್ಪಿತಸ್ಥರನ್ನು ರಕ್ಷಿಸುವ ಪ್ರಕರಣಕ್ಕೆ ಸಂಬಂಧಿಸಿದಂತೆ ‘ಕೊಲೆ ಮಾಡಿರುವ ಅಪರಾಧಿಗಳು ಇನ್ನೊಮ್ಮೆ ಮಾಡು ವುದಿಲ್ಲ ಎಂದರೆ ಕ್ಷಮಿಸುತ್ತೀರಾ ? ಎಂದು ಪ್ರಶ್ನಿಸಿದರು. ಯಾವುದೇ ಅಪರಾಧ ಕೃತ್ಯವಾಗಿರುವುದು ಕಂಡು ಬಂದರೆ ಮೊದಲು ದೂರು ದಾಖಲಿ ಸಿಕೊಂಡು ತನಿಖೆ ಕೈಗೊಳ್ಳುವಂತೆ ಪೋಲಿಸ್ ಅಧಿಕಾರಿಗಳಿಗೆ ಸೂಚಿಸಿದರು.

ಸಾರ್ವಜನಿಕರು ತಮ್ಮ ಕುಂದು ಕೊರತೆಗಳನ್ನು ಅರ್ಜಿಯ ಮೂಲಕ ಲೋಕಾಯುಕ್ತಕ್ಕೆ ಸಲ್ಲಿಸಿ ತಮ್ಮ ಸಮಸ್ಯೆಗಳ ಪರಿಹಾರ ಮಾಡಿ ಕೊಳ್ಳಬಹುದು. ಪೂರ್ತಿ ವಿಚಾರಣೆಯಾಗದ ಪ್ರಕರಣಗಳ ಫಿರ್ಯಾದುದಾರರನ್ನು ಬೆಂಗಳೂರಿನ ಲೋಕಾಯುಕ್ತ ನ್ಯಾಯಾಲಯಕ್ಕೆ ಬರುವಂತೆ ಸೂಚಿಸಿದರು.

ಯಾರಿಗೂ ರೀಯಾತಿ ಬೇಡ: ನಗರ ವ್ಯಾಪ್ತಿಯಲ್ಲೇ ಹೆಚ್ಚು ಭೂ ಒತ್ತುವರಿಗಳು ನಡೆದರಿವ ಬಗ್ಗೆ ಸಾರ್ವಜನಿಕರು ಹೆಚ್ಚು ದೂರುಗಳು ಬಂದಿವೆ. ಈ ನಿಟ್ಟಿನಲ್ಲಿ ಶ್ರೀಮಂತರು, ಬಡವರು ಎನ್ನುವ ರೀಯಾತಿ ನೀಡದೆ ಒತ್ತುವರಿಗಳನ್ನು ತೆರವು ಮಾಡಿಕೊಡಬೇಕು. ಸರ್ಕಾರಿ ಭೂಮಿಯನ್ನು ಮಂಜೂರು ಮಾಡುವ ಅಧಿಕಾರ ತಹಸೀಲ್ದಾರ್‌ ಸೇರಿದಂತೆ ಯಾವುದೇ ಅಧಿಕಾರಿಗೂ ಇಲ್ಲ. ಸರ್ಕಾರದ ನಿಯಮಾನುಸಾರವೇ ಭೂಮಿ, ನಿವೇಶನಗಳ ಮಂಜೂರಾತಿ ನಡೆಯಬೇಕು. ಕೊಳಚೆ ನಿರ್ಮೂಲ ಮಂಡಲಿಯಿಂದ ಹಕ್ಕು ಪತ್ರಗಳನ್ನು ನೀಡಿದ ಮಾತ್ರಕ್ಕೆ ನಿವೇಶನದ ಮಾಲೀಕತ್ವ ಬರುವುದಿಲ್ಲ ಎಂದರು.

ನಗರಸಭೆ ವ್ಯಾಪ್ತಿ ಪ್ರದೇಶದಲ್ಲಿ ಅಕ್ರಮ ಖಾತೆಗಳ ಹಾವಳಿ ಹೆಚ್ಚಾಗಿವೆ.  ಅಕ್ರಮ ಖಾತೆಗಳ ಪಟ್ಟಿಯನ್ನು ಒಂದು ತಿಂಗಳ ಒಳಗೆ ಸಿದ್ಧಪಡಿಸಿ ಜಿಲ್ಲಾಧಿ ಕಾರಿಗಳಿಗೆ ಸಲ್ಲಿಸಿ ರದ್ದುಪಡಿಸಬೇಕು. ಇಲ್ಲವಾದರೆ ನಗರಸಭೆ ಅಧಿಕಾರಿಗಳ  ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ನಗರಸಭೆ ವ್ಯಾಪ್ತಿಯ ಸಂಜಯ ನಗರದ ಕೊಳಚೆ ಪ್ರದೇಶದಲ್ಲಿ ವಾಸವಾಗಿರುವ ಬಡ ಕುಟುಂಬ
ಗಳನ್ನು ಗುರುತಿಸಿ ಕಾನೂನು ರೀತಿಯಲ್ಲಿ ಅರ್ಹರಿಗೆ ಕಾಯಂ ಪತ್ರಗಳನ್ನು ವಿತರಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ವಿ.ಶಂಕರ್, ಜಿಲ್ಲಾ ಹೆಚ್ಚವರಿ ಪೋಲಿಸ್ ಅಧೀಕ್ಷಕ ಅಹದ್
ಪುತ್ತಿಗೆ, ಉಪ ವಿಭಾಗಾಧಿಕಾರಿ ಮಂಜುನಾಥ್‌, ತಹಶೀಲ್ದಾರ್ ಕೆ.ಬಿ.ಸಿದ್ದಲಿಂಗಯ್ಯ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ದೊಡ್ಡಬಳ್ಳಾಪುರದಿಂದ ವರ್ಗಾ ವಣೆಯಾದ ಹಾಗೂ  ನಿವೃತ್ತಿಯಾದ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.