ADVERTISEMENT

ಕರ್ತವ್ಯ ನಿರತ ವೈದ್ಯರ ಮೇಲೆ ಹಲ್ಲೆ

ಬಿಡದಿ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ಘಟನೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2013, 9:33 IST
Last Updated 17 ಸೆಪ್ಟೆಂಬರ್ 2013, 9:33 IST

ರಾಮನಗರ: ಬಿಡದಿಯ ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೈದ್ಯ ಡಾ. ಫತೆ ಅಲಿ ಖಾನ್‌ ಅವರ ಮೇಲೆ ಸೋಮವಾರ ಸಾರ್ವಜನಿಕರು ಹಲ್ಲೆ ಮಾಡಿರುವ ಘಟನೆ ವರದಿ ಯಾಗಿದೆ.

ಕೆಂಚನಕುಪ್ಪೆ ಬಳಿ ಅಪಘಾತ ವೊಂದರಲ್ಲಿ ಮೃತಪಟ್ಟ ಯೋಗಾನಂದ್‌ ಅವರಿಗೆ ಸೂಕ್ತ ಚಿಕಿತ್ಸೆ ನೀಡಲಿಲ್ಲ ಎಂಬ ಕಾರಣಕ್ಕೆ ಆಕ್ರೋಶಗೊಂಡ, ಮೃತರ ಸಂಬಂಧಿ ಹಾಗೂ ಸಾರ್ವಜನಿಕರು ವೈದ್ಯರನ್ನು ಥಳಿಸಿ, ತೀವ್ರ ಹಲ್ಲೆ ಮಾಡಿದರು ಎಂದು ಬಿಡದಿಯ ಪೊಲೀಸರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಘಟನೆ ವಿವರ: ಅಪಘಾತಕ್ಕೆ ಒಳ ಗಾಗಿದ್ದ ವ್ಯಕ್ತಿಯನ್ನು ಆಟೊದಲ್ಲಿ ಸಾರ್ವಜನಿಕರು ಆಸ್ಪತ್ರೆಗೆ ಕರೆ ತಂದಿದ್ದರು. ಆತನನ್ನು ತಪಾಸಣೆ ನಡೆಸಿದ ವೈದ್ಯ ಫತೆ ಅಲಿ ಖಾನ್‌ ಅವರು ಆತ ಮೃತಪಟ್ಟಿರುವುದನ್ನು ದೃಢ ಪಡಿಸಿದರು. ನಂತರ ವೈದ್ಯರು ಇತರೆ ರೋಗಿಗಳ ತಪಾಸಣೆಗೆ ತೆರಳಿ ದರು. ಇದರಿಂದ ಆಕ್ರೋಶಗೊಂಡ ಮೃತರ ಸಂಬಂಧಿಕರು, ಸಾರ್ವಜನಿ ಕರೊಂದಿಗೆ ಸೇರಿಕೊಂಡು ಆ ವೈದ್ಯರನ್ನು ಥಳಿಸಿ, ಗಾಯಗೊಳಿಸಿದರು ಎಂದು ಪ್ರತ್ಯಕ್ಷದರ್ಶಿ ಯೊಬ್ಬರು ತಿಳಿಸಿದರು.

ವೈದ್ಯರ ತಲೆಯ ಹಿಂಬದಿಯಲ್ಲಿ ಗಾಯವಾಗಿತ್ತು. ಎಂಟು ಹೊಲಿಗೆ ಗಳನ್ನು ಹಾಕಿ ಚಿಕಿತ್ಸೆ ನೀಡಲಾಯಿತು ಎಂದು ಆಸ್ಪತ್ರೆಯ ಸಿಬ್ಬಂದಿ ಹೇಳಿದರು. ಘಟನೆ ನಡೆದ ಸ್ಥಳಕ್ಕೆ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಚ್‌.ಪಿ. ಜಯರಾಮ್‌, ಪ್ರಧಾನ ಕಾರ್ಯದರ್ಶಿ ಶಿವಣ್ಣ, ಖಜಾಂಚಿ ಕೆ.ಸತೀಶ್‌, ಗೌರವ ಅಧ್ಯಕ್ಷ ಪುಟ್ಟಸ್ವಾಮಿ ಮತ್ತಿತರರು ಭೇಟಿ ನೀಡಿ, ಗಾಯಗೊಂಡಿದ್ದ ವೈದ್ಯರೊಂದಿಗೆ ಸಮಾಲೋಚನೆ ನಡೆಸಿದರು. ವೈದ್ಯರ ಬೆಂಬಲಕ್ಕೆ ಸಂಘ ಸದಾ ಇದೆ ಎಂದು ಅಧ್ಯಕ್ಷರು ಗಾಯಗೊಂಡಿದ್ದ ವೈದ್ಯರಿಗೆ ತಿಳಿಸಿದರು.

ಅಮಾನತಿಗೆ ಶಿಫಾರಸು: ’ಆಸ್ಪತ್ರೆ ಯಲ್ಲಿ ನಡೆದ ಈ ಘಟನೆಯನ್ನು ಸರಿ ಯಾಗಿ ನಿರ್ವಹಿಸಲಿಲ್ಲ ಎಂಬ ಕಾರಣಕ್ಕೆ ಬಿಡದಿ ಸರ್ಕಾರಿ ಆಸ್ಪತ್ರೆಯ ಆಡಳಿತಾ ಧಿಕಾರಿ ನಿವೇದಿತಾ ಅವರನ್ನು ಅಮಾನತಿ ನಲ್ಲಿಡಲು ಹಿರಿಯ ಅಧಿಕಾರಿಗಳಿಗೆ ಶಿಫಾರಸು ಮಾಡಿರುವುದಾಗಿ’ ಜಿಲ್ಲಾ ಆರೋಗ್ಯಾಧಿಕಾರಿ ರಘನಂದನ್‌ ’ಪ್ರಜಾವಾಣಿ’ಗೆ ತಿಳಿಸಿದರು.

‘ಬಿಡದಿ ಸರ್ಕಾರಿ ಆಸ್ಪತ್ರೆಯಲ್ಲಿ ನಿರ್ವಹಣೆ ಕೊರತೆ ಹಾಗೂ ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ ಎಂಬ ಆರೋಪಗಳು ಈ ಹಿಂದೆಯೂ ಆಸ್ಪತ್ರೆಯ ಆಡಳಿತಾಧಿಕಾರಿ ನಿವೇದಿತಾ ಅವರ ಮೇಲೆ ಬಂದಿತ್ತು. ಇವೆಲ್ಲವನ್ನೂ ಪರಿಗಣಿಸಿ ಹಾಗೂ ಸೋಮವಾರದ ಘಟನೆ ನಿಬಾಯಿಸುವಲ್ಲಿ ವಿಫಲರಾದ ಹಿನ್ನೆಲೆಯಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಲು ಶಿಫಾರಸು ಮಾಡಲಾಗಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT