ADVERTISEMENT

ಕಾಡಾನೆ ಮರಿ ಸಾವು

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2011, 19:30 IST
Last Updated 24 ಅಕ್ಟೋಬರ್ 2011, 19:30 IST

ಕನಕಪುರ: ಕಳೆದ ಒಂದು ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದ ಕಾಡನೆ ಮರಿಯೊಂದು ಅನಾರೋಗ್ಯಕ್ಕೆ ತುತ್ತಾಗಿ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಉಯ್ಯಂಬಳ್ಳಿ ಹೋಬಳಿಯ ನಲ್ಲಹಳ್ಳಿದೊಡ್ಡಿ ಗ್ರಾಮದ ಹೊರವಲಯಲ್ಲಿ ಇಂದು ನಡೆದಿದೆ.

ಒಂದು ವಾರದ ಹಿಂದೆ ಗ್ರಾಮದ ಹೊರವಲಯದಲ್ಲಿ ಕಾಣಿಸಿಕೊಂಡ ಒಂಟಿ ಆನೆ ಮರಿಯು ನಲ್ಲಹಳ್ಳಿ ದೊಡ್ಡಿ ಗ್ರಾಮದ ಸುತ್ತಮುತ್ತಲು ಪ್ರದೇಶದಲ್ಲಿ ಓಡಾಡಿಕೊಂಡಿತ್ತು. ಗ್ರಾಮಸ್ಥರು ಅದನ್ನು ಕಾಡಿಗೆ ಅಟ್ಟುವ ಪ್ರಯತ್ನಮಾಡಿದರು. ಆದರೂ ಅದು ಹೊರವಲಯದಲ್ಲೇ ಉಳಿದುಕೊಂಡಿತು. ಗ್ರಾಮಸ್ಥರು ಅರಣ್ಯ ಇಲಾಖೆಗೆ ವಿಚಾರ ಮುಟ್ಟಿಸಿ ಅದನ್ನು ಓಡಿಸುವಂತೆ ಮನವಿ ಮಾಡಿದರು.

ಆದರೂ ಅರಣ್ಯ ಇಲಾಖೆಯ ಯಾವ ಅಧಿಕಾರಿಗಳೂ ಆನೆ ಇದ್ದ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಲಿಲ್ಲ. ಇತ್ತ ಆನೆ ಮರಿ ಯಾವುದೋ ಖಾಯಿಲೆಗೆ ತುತ್ತಾಗಿ ನರಳುತ್ತಿತ್ತು. ಆಹಾರ ತಿನ್ನದೆ ದಿನದಿಂದ ದಿನಕ್ಕೆ ಕೃಷವಾಗಿ ಕೊನೆಗೆ ಸಾವನಪ್ಪಿತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಸೋಮವಾರ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಆನೆಯ ಮರಣೋತ್ತರ ಪರೀಕ್ಷೆ ನಡೆಸಿ ಸಂಸ್ಕಾರ ಮಾಡಿದ್ದಾರೆ. ಸುತ್ತಮುತ್ತಲ ಗ್ರಾಮಸ್ಥರು ಆಗಮಿಸಿ ಆನೆ ಮರಿಗೆ ಅಂತಿಮ ಪೂಜೆ ಸಲ್ಲಿಸಿದರು. 

 ನಿರ್ಲಕ್ಷ: ಕಾಡಾನೆ ಮರಿಯು ಗ್ರಾಮಕ್ಕೆ ಬಂದು ಒಂದು ವಾರವಾದರೂ, ಅರಣ್ಯ ಅಧಿಕಾರಿಗಳು ಬಾರದೆ ನಿರ್ಲಕ್ಷ ತಾಳಿದ್ದಾರೆ.

ಆನೆ ಮರಿ ಸಾವಿಗೆ ಅರಣ್ಯ ಅಧಿಕಾರಿಗಳ ನಿರ್ಲಕ್ಷವೇ ಕಾರಣವೆಂದು ಗ್ರಾಮಸ್ಥರು ಆರೋಪಸಿದ್ದಾರೆ.
ವಾರದಿಂದ ಆಹಾರ ಸೇವಿಸದೆ ನಿತ್ರಾಣಗೊಂಡಿತ್ತು. ಅಧಿಕಾರಿಗಳಿಗೆ ತಿಳಿಸಿದರೂ ಈ ಮರಿಯನ್ನು ಗುಣಪಡಿಸಲು ಮುಂದಾಗಲಿಲ್ಲ. ಒಂದು ಪಕ್ಷ ಔಷಧಿ ನೀಡಿದ್ದರೆ ಆನೆ ಸಾಯುತ್ತಿರಲಿಲ್ಲ. ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.