ದೇವನಹಳ್ಳಿ: ಒಣ ಭೂಮಿಯಲ್ಲಿ ನಡೆಸುವ ಕೃಷಿ ಚಟುವಟಿಕೆಯಲ್ಲಿ ಮಣ್ಣು ಮತ್ತು ಮಳೆ ನೀರು ಸಂರಕ್ಷಣೆ ಮಾಡುವುದು ಅತಿಮುಖ್ಯವೆಂದು ಕೃಷಿ ಉಪ ನಿರ್ದೇಶಕಿ ಗೀತಾ ಹಳ್ಳಿ ತಿಳಿಸಿದರು.
ದೇವನಹಳ್ಳಿ ತಾಲ್ಲೂಕು ಕುಂದಾಣ ಗ್ರಾಮದಲ್ಲಿ ನಡೆದ ಹೋಬಳಿ ಮಟ್ಟದ ‘ಇಲಾಖೆಗಳ ನಡಿಗೆ ರೈತ ಬಾಗಿಲಿಗೆ’ ಕೃಷಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿ, ಅಭಿಯಾನದ ಉದ್ದೇಶ ಕೃಷಿ, ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ, ಕೃಷಿಮಾರಾಟ ಮಂಡಳಿ ಹಾಗೂ ಪಶು ಪಾಲನಾ ಇಲಾಖೆಗಳಲ್ಲಿ ರೈತರಿಗೆ ದೊರೆಯುವ ಸವಲತ್ತು ಮತ್ತು ಅದರಿಂದಾಗುವ ಪ್ರಯೋಜನದ ಜತೆಗೆ ಅಗತ್ಯ ಮಾಹಿತಿ ನೀಡುವ ವಿಶೇಷ ಕಾರ್ಯಕ್ರಮ ಸರ್ಕಾರ ನಡೆಸುತ್ತಿದೆ ಎಂದರು.
ಇದರಲ್ಲಿ ಮಣ್ಣು ಆರೋಗ್ಯ ಅಭಿಯಾನದಡಿ ಮಣ್ಣು ಪರೀಕ್ಷೆ ಫಲಿತಾಂಶದ ಚೀಟಿಗಳು ರೈತ ಸಂಪರ್ಕ ಕೇಂದ್ರಗಳಲ್ಲಿ ಲಭ್ಯವಿದೆ ಎಂದು ವಿವರಿಸಿದರು.
ರಸಗೊಬ್ಬರ ಖರೀದಿಸಲು ರೈತರ ಅಧಾರ್ ಕಾರ್ಡ್ ಕಡ್ಡಾಯವಾಗಿದೆ ಎಂದರು.
ನೀರಿನ ಸಂರಕ್ಷಣೆ ಕುರಿತು ಉಪನ್ಯಾಸ ನೀಡಿದ ಜಿಕೆವಿಕೆ ಸಹ ಪ್ರಾಧ್ಯಾಪಕ ತಿಮ್ಮೆಗೌಡ, ವಿಶ್ವದಲ್ಲಿ ಈವರೆಗೆ ಕೃತಕ ನೀರು ಉತ್ಪಾದಿಸಲು ಸಾಧ್ಯವಿಲ್ಲ, ಮರುಬಳಕೆಗೆ ಅವಕಾಶವಿದೆ ನೀರು ಇಲ್ಲದೆ ಯಾವುದೆ ಜೀವ ಸಂಕುಲಗಳು ಉಳಿಯಲು ಸಾಧ್ಯವಿಲ್ಲ ಎಂದರು.
ಜಿಕೆವಿಕೆ ಕೃಷಿ ವಿಭಾಗ ಸಿರಿಧಾನ್ಯಗಳ ಸಂಶೋಧನ ಸಹ ಪ್ರಾಧ್ಯಾಪಕ ಬೋರಯ್ಯ ಮಾತನಾಡಿ, ಅರ್ಧಶತಮಾನಗಳ ಹಿಂದೆ ಗ್ರಾಮೀಣ ಪ್ರದೇಶದ ಪ್ರಮುಖ ಆಹಾರವಾಗಿದ್ದ ಸಿರಿಧಾನ್ಯಗಳು ಮೂಲೆಗುಂಪಾಗಲು ನಿರ್ಲಕ್ಷ್ಯ ಕಾರಣ ಎಂದರು.
ನವಣೆ ,ಊದಲು, ಹಾರಕ, ಸಾಮೆ, ಕೊರ್ಲೆ ಪ್ರಸ್ತುತ ಅತ್ಯಂತ ಅನಿವಾರ್ಯವಾದ ಅಹಾರಧಾನ್ಯ. ತೀವ್ರತರದ ರೋಗ ಗುಣ ಪಡಿಸುವ ಎಲ್ಲಾ ರೀತಿಯ ಪೌಷ್ಟಿಕಾಂಶ ಇವುಗಳಲ್ಲಿವೆ ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ರಾಧಮ್ಮ ಮುನಿರಾಜು, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಲಲಿತಮ್ಮ, ಕಾರಹಳ್ಳಿ ಶ್ರೀನಿವಾಸ್, ಗೋಪಾಲಸ್ವಾಮಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಜಯ ಬಿ.ಸ್ವಾಮಿ, ಗ್ರಾಮ ಪಂಚಾಯಿತಿ ಸದಸ್ಯ ಕೆ.ವಿ ಸ್ವಾಮಿ ,ಸಹಾಯಕ ಕೃಷಿ ನಿರ್ದೇಶಕಿ ಮಂಜುಳಾ, ಉಪತಹಶೀಲ್ದಾರ್ ಬಾಲ ಕೃಷ್ಣ, ಸಹಾಯಕ ಕೃಷಿ ಅಧಿಕಾರಿ ಮುಜಮಿಲ್ ಉಪಸ್ಥಿತರಿದ್ದರು.
**
ಹತ್ತು ವರ್ಷಗಳಿಂದ ಬೆಳೆ ವಿಮೆ ಜಾರಿಯಾಗಿದ್ದರೂ ವಿಮೆ ಬಗ್ಗೆ ಕಾಳಜಿ ತೋರುತ್ತಿಲ್ಲ ,ಈ ಬಾರಿ ರಾಗಿ ,ತೊಗರಿ, ಮುಸುಕಿನ ಜೋಳಕ್ಕೆ ವಿಮೆಗೆ ನೋಂದಾಯಿಸಲು ಇದೇ ಜುಲೈ 17 ಅಂತಿಮ ದಿನವಾಗಿದೆ.
-ಗೀತಾ ಹಳ್ಳಿ,
ಕೃಷಿ ಉಪ ನಿರ್ದೇಶಕಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.