ADVERTISEMENT

ಗಾಂಧಿ ಜಯಂತಿ: ಕಲ್ಯಾಣಿ ಸ್ವಚ್ಛಗೊಳಿಸಿದ ಮಕ್ಕಳು

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2011, 19:30 IST
Last Updated 3 ಅಕ್ಟೋಬರ್ 2011, 19:30 IST

ದೊಡ್ಡಬಳ್ಳಾಪುರ: ನಗರದ ಪೊಲೀಸ್ ವಸತಿ ಆವರಣದಲ್ಲಿರುವ ಕಲ್ಯಾಣಿ ಹಾಗೂ ವಿನಾಯಕ ನಗರದ ಸರ್ಕಾರಿ ಶಾಲೆಯ ಆವರಣದ ಸುತ್ತ ಮುತ್ತಲಿನ ಪ್ರದೇಶವನ್ನು ಸ್ವರಾಜ್, ನಾಗದಳ, ಪೊಲೀಸ್ ಇಲಾಖೆ ಹಾಗೂ ದೊಡ್ಡಬಳ್ಳಾಪುರ ಅಭಿವೃದ್ಧಿ ಸಮಿತಿ ಸಹಯೋಗದಲ್ಲಿ ಸ್ವಚ್ಛಗೊಳಿಸಲಾಯಿತು.

ಜವಾಹರ್ ನವೋದಯ ಶಾಲೆ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳೊಂದಿಗೆ ಪರಿಸರ ಕಾಳಜಿಯುಳ್ಳವರು  ಕಲ್ಯಾಣಿ ಹೂಳು ತೆಗೆದು,  ಆವರಣದಲ್ಲಿ ಬೆಳೆದಿದ್ದ ಕಳೆ ಗಿಡಗಳನ್ನು ಕಿತ್ತುಹಾಕಿ ಸ್ವಚ್ಛಗೊಳಿಸಿದರು.  ವಿದ್ಯಾರ್ಥಿಗಳು ಮತ್ತು ನಾಗರಿಕರು ಎರಡು ಗುಂಪುಗಳಾಗಿ ಶ್ರಮದಾನ ಮಾಡುವ ಮೂಲಕ ಸ್ವಚ್ಛತಾ ಕಾರ್ಯ ಮಾಡಿ ಗಾಂಧೀ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿದರು.

ಪೊಲೀಸ್ ವೃತ್ತ ನಿರೀಕ್ಷಕ ಸುಭ್ರಮಣ್ಯ, `ಮಹಾತ್ಮ ಗಾಂಧಿಜೀ ತತ್ವಗಳು ಸ್ವಚ್ಚತೆ, ನೈರ್ಮಲ್ಯ ಹಾಗೂ ಪರಿಸರ ಕಾಳಜಿಯನ್ನು ಸಾರುತ್ತವೆ. ಹಾಗಾಗಿ ಎಲ್ಲರೂ ಈ ತತ್ವಗಳನ್ನು ಪಾಲಿಸಬೇಕು~ ಎಂದು ತಿಳಿಸಿದರು.   

ದೊಡ್ಡಬಳ್ಳಾಪುರ ಅಭಿವೃದ್ಧಿ ಸಮಿತಿ ಸಂಚಾಲಕ ಡಿ.ಆರ್.ನಟರಾಜ್, `ಮಕ್ಕಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಓದುವುದರರೊಂದಿಗೆ ಪರಿಸರ ರಕ್ಷಣಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಹಾಗೂ ನವೋದಯ ಶಾಲೆ ವಿದ್ಯಾರ್ಥಿಗಳಿಗೆ ಇಂತಹ  ಸದಾವಕಾಶವನ್ನು ಕಲ್ಪಿಸಿಕೊಟ್ಟಿದೆ~ ಎಂದು ಶ್ಲಾಘಿಸಿದರು.

ಸ್ವರಾಜ್ ಸಂಸ್ಥೆ ಯೋಜನಾ ಸಂಯೋಜಕ ವೈ.ಟಿ.ಲೋಹಿತ್, `ಹೊಸ ಕಲ್ಯಾಣಿಗಳನ್ನು ನಿರ್ಮಿಸುವುದು ದೂರದ ಮಾತು. ಹಾಗಾಗಿ ಇರುವ ಕಲ್ಯಾಣಿಗಳನ್ನು ಉಳಿಸಿಕೊಳ್ಳುವುದು ಇಂದಿನ ಸಮಾಜದ ಕರ್ತವ್ಯ. ಇಂದಿನ ಮಕ್ಕಳು ಈ ನಿಟ್ಟಿನಲ್ಲಿ ಪರಿಸರ ಆಸಕ್ತಿನ್ನು ಬೆಳೆಸಿಕೊಳ್ಳಬೇಕು~ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ದೊಡ್ಡಬಳ್ಳಾಪುರ ಅಭಿವೃದ್ಧಿ ಸಮಿತಿ ಎನ್,ಸಿ.ಲಕ್ಷ್ಮೀ, ಶ್ರೀನಿವಾಸ್, ರಾಘವನ್,  ಎಸ್.ನಟರಾಜ್, ಮಂಜುಳಾ, ನಾಗದಳ ಬದ್ರಿನಾಥ್, ಮಂಜುನಾಥ್, ಸ್ವರಾಜ್ ಸಂಸ್ಥೆ ವೈ.ಟಿ.ಲೋಹಿತ್, ನವೋದಯ ಶಾಲೆ ಶಿಕ್ಷಕ ಪ್ರಭಾಕರ್, ಬಸವರಾಜು ಮುಂತಾದವರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.