ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 10 ಸಾವಿರ ಶಂಕಿತ ಕ್ಷಯರೋಗಿಗಳ ಕಫ ಪರೀಕ್ಷೆ ನಡೆಸಲಾಗಿದ್ದು ಒಂದು ಸಾವಿರ ರೋಗಿಗಳನ್ನು ಪತ್ತೆ ಹಚ್ಚಲಾಗಿದೆ. ಇಲ್ಲಿನ ತಾಲ್ಲೂಕು ಆರೋಗ್ಯ ಕೇಂದ್ರ ಕಚೇರಿಯಲ್ಲಿ ಸೋಮವಾರ ನಡೆದ ರಾಷ್ಟ್ರೀಯ ಪರಿಷ್ಕೃತ ಕ್ಷಯ ರೋಗ ನಿಯಂತ್ರಣ ಕಾರ್ಯಕ್ರಮದಲ್ಲಿ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಶಖಿಲಾ ಮಾತನಾಡಿದರು.
ಸರ್ಕಾರ ಸಕ್ರಿಯ ಕ್ಷಯರೋಗ ಪತ್ತೆ ಹಚ್ಚುವ ಕಾರ್ಯಕ್ರಮವನ್ನು ಈಗಾಗಲೇ ಆರಂಭಿಸಿದೆ. ರೋಗ ಹೆಚ್ಚುತ್ತಿರುವ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಿ ಪತ್ತೆ ಹಚ್ಚಲಾಗುತ್ತದೆ. ಜಿಲ್ಲೆಯಲ್ಲಿ ಒಟ್ಟು 1.29ಲಕ್ಷ ಜನರನ್ನು ಅಪಾಯದ ಅಂಚಿನಲ್ಲಿರುವವರು ಎಂದು ಗುರುತಿಸಲಾಗಿದೆ. 195 ಗುಂಪುಗಳು, 50 ಮೇಲ್ವಿಚಾರಕರು ಡಿ. 4ರಿಂದ 18ರ ವರೆಗೆ ಕಾರ್ಯ ನಿರ್ವಹಿಸಲಿದ್ದು ರೋಗಿಗಳನ್ನು ಪತ್ತೆ ಹಚ್ಚಲಿದ್ದಾರೆ ಎಂದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಭಾರತಿ ಮತ್ತು ಉಪಾಧ್ಯಕ್ಷೆ ನಂದಿನಿ ಮಾತನಾಡಿ, ಅಪಾಯಕಾರಿ ಕ್ಷಯ ರೋಗದ ಬಗ್ಗೆ ಜನರಲ್ಲಿ ತಿಳಿವಳಿಕೆ ಮೂಡಿಸಬೇಕು. ವಾಯು ಮತ್ತು ಜಲಮಾಲಿನ್ಯದಿಂದ ಈ ಕಾಯಿಲೆ ಬರುತ್ತದೆ. ಅನಾರೋಗ್ಯವನ್ನು ಕೆಲವರು ಗುಪ್ತವಾಗಿರಿಸುತ್ತಾರೆ. ಆಶಾ ಕಾರ್ಯಕರ್ತರು ಅವರ ಮನವೊಲಿಸುವ ಪ್ರಯತ್ನ ಮಾಡಬೇಕು ಎಂದರು.
ಡಾ. ಮುನಾವರ್ ಮಾತನಾಡಿ, 2017ರಿಂದ 2025ರ ವರೆಗೆ ಕ್ಷಯ ರೋಗಿಗಳನ್ನು ಪತ್ತೆ ಹಚ್ಚಿ ಕ್ಷಯಮುಕ್ತ ರಾಷ್ಟ್ರ ಮಾಡಬೇಕಾಗಿದೆ. ವಲಸೆ ಕಾರ್ಮಿ
ಕರು ಕೆಲಸ ಮಾಡುತ್ತಿರುವ ಸ್ಥಳಗಳು, ಗಣಿಗಳ ಪ್ರದೇಶ, ಕೋಳಿ ಸಾಕಾಣಿಕೆ ಕೇಂದ್ರ, ಗಾರ್ಮೆಂಟ್ಸ್ ಕೆಲಸ, ಕಟ್ಟಡ ಕಾಮಗಾರಿಯಲ್ಲಿ ತೊಡಗಿರುವವರಿಗೆ ಪರೀಕ್ಷೆ ನಡೆಸಬೇಕಾಗಿದೆ ಎಂದರು.
ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ವೆಂಕಟೇಶ್ ಮಾತನಾಡಿದರು. ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಸಂಜಯ್, ಡಾ.ಮನೋಹರ್, ಡಾ. ಕೋಮಲ, ಡಾ. ರಶ್ಮಿ ಇದ್ದರು.
* *
ಕ್ಷಯ ರೋಗಿಗಳ ಸಂಖ್ಯೆ ಇಳಿಮುಖವಾಗಿದ್ದರು ವಿಶ್ವದಲ್ಲಿ ಭಾರತವು ಅತಿ ಹೆಚ್ಚು ಕ್ಷಯ ರೋಗಿಗಳನ್ನು ಹೊಂದಿದ್ದು ವಿಶ್ವದ ಶೇ. 27ರಷ್ಟು ಕ್ಷಯರೋಗ ಹೊಂದಿದವರು ಭಾರತದವರು
ಡಾ. ಶಖಿಲಾ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.