ADVERTISEMENT

ಪ್ರಕರಣ ದಾಖಲಿಸಿಕೊಳ್ಳದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2017, 7:21 IST
Last Updated 8 ಡಿಸೆಂಬರ್ 2017, 7:21 IST

ದೇವನಹಳ್ಳಿ: ಕಾಕ್ಲರ್ (ಕಿವಿಗೆ ಶಬ್ದ ಗ್ರಹಿಸುವ ಸಾಧನ ) ಕಳ್ಳತನಕ್ಕೆ ಸಂಬಂಧಿಸಿದಂತೆ ದೂರು ನೀಡಲು ಹೋದರೆ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲು ನಿರಾಕರಿಸುತ್ತಿದ್ದಾರೆ ಎಂದು ತಾಲ್ಲೂಕಿನ ಭುವನಹಳ್ಳಿ ಗ್ರಾಮದ ಪೋಷಕರು ಆರೋಪಿಸಿದರು.

ದೇವನಹಳ್ಳಿ ಶಿಶು ಮತ್ತು ಮಹಿಳಾ ಅಭಿವೃದ್ಧಿ ಇಲಾಖೆ ಆವರಣದಲ್ಲಿ ಗುರುವಾರ ಮಾತನಾಡಿದ ಪೋಷಕರಾದ ಚಂದ್ರಿಕಾ ಹಾಗೂ ಮುನಿರಾಜು, ‘ನಮ್ಮ ಮಗಳು ರುಷಿಕಾಗೆ ಮಾತು ಬರುವುದಿಲ್ಲ ಮತ್ತು ಕಿವಿ ಕೇಳಿಸುತ್ತಿರಲಿಲ್ಲ. ಕಳೆದ ವರ್ಷ ₹ 7.5 ಲಕ್ಷ ವೆಚ್ಚ ಮಾಡಿ ಖಾಸಗಿ ಆಸ್ಪತ್ರೆ ವೆಚ್ಚ ಹೊರತು ಪಡಿಸಿ ಕಾಕ್ಲರ್ ₹ 2.65 ಲಕ್ಷ ವೆಚ್ಚದಲ್ಲಿ ಖರೀದಿಸಿ ನೀಡಿದ ಪರಿಣಾಮ ಶಬ್ದ ಗ್ರಹಿಸುವ ಶಕ್ತಿ ಪಡೆದುಕೊಂಡಿದ್ದಳು’ ಎಂದರು.

ಎರಡು ವರ್ಷದಿಂದ ಅಂಗನವಾಡಿ ಕೇಂದ್ರಕ್ಕೆ ಕಳುಹಿಸಲಾಗುತ್ತಿತ್ತು, ಕಳೆದ ತಿಂಗಳು 13 ರಂದು ಕಾಕ್ಲರ್ ಕಳ್ಳತನವಾಗಿದೆ ಎಂದು ಅಂಗನವಾಡಿ ಕಾರ್ಯಕರ್ತೆ ಸುಳ್ಳು ಮಾಹಿತಿ ನೀಡಿದ್ದಾರೆ. ಮಗು ರುಷಿಕ ಸನ್ನೆ ಮೂಲಕ ಕಳ್ಳತನವಾಗಿಲ್ಲ ಅಂಗನವಾಡಿ ಕೇಂದ್ರದಲ್ಲೆ ತೆಗೆದುಕೊಂಡರು ಎಂದು ಹೇಳುತ್ತಿದ್ದಾಳೆ ಎಂದು ಹೇಳಿದರು.

ADVERTISEMENT

ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಗೆ ದೂರು ನೀಡಲಾಗಿದೆ. ಶಿಶು ಮತ್ತು ಮಹಿಳಾ ಅಭಿವೃದ್ಧಿ ಇಲಾಖೆಗೂ ದೂರು ನೀಡಿದ್ದರು ಕಳವು ಪ್ರಕರಣಕ್ಕೂ ನಮಗೂ ಸಂಬಂಧವಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ.

ಭುವನಹಳ್ಳಿ ಮುನಿರಾಜು ಮಾತನಾಡಿ, ಅಂಗನವಾಡಿ ಕೇಂದ್ರದಲ್ಲಿರುವುದೆ ಹದಿನಾಲ್ಕು ಮಕ್ಕಳು, ಕಳ್ಳತನ ಎಂಬುದು ಪುಟ್ಟ ಮಕ್ಕಳಿಗೆ ಗೊತ್ತಿಲ್ಲ. ಇದ್ದ ಇಬ್ಬರಲ್ಲಿ ಕದ್ದವರು ಯಾರು? ಎಂಬ ಸ್ಥಿತಿ ಇದಾಗಿದೆ. ಯಾವುದೇ ಕಳ್ಳತನ ಪ್ರಕರಣ ಇರಲಿ ಮೊದಲು ಪ್ರಕರಣ ದಾಖಲಿಸಿಕೊಳ್ಳಬೇಕು ಎಂದರು.

* * 

ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಗೆ ದೂರು ನೀಡಲು ಹೋದರೆ ಸ್ವೀಕರಿಸುತ್ತಿಲ್ಲ, ಅಂಗನವಾಡಿ ಕಾರ್ಯಕರ್ತೆಯನ್ನು ಕರೆದುಕೊಂಡು ಬನ್ನಿ ಎನ್ನುತ್ತಾರೆ
ಚಂದ್ರಿಕಾ, ಮುನಿರಾಜು,  ಪೋಷಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.