ADVERTISEMENT

ಭೂಮಿ ಹುಣ್ಣಿಮೆ: ಬದುಕು ಹಸನಾಯ್ತು

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2011, 19:30 IST
Last Updated 23 ಅಕ್ಟೋಬರ್ 2011, 19:30 IST

ದೊಡ್ಡಬಳ್ಳಾಪುರ: `ಆಧುನಿಕ ಬದುಕಿಗೆ ಶರಣಾಗಿರುವ ನಾವು ಪೂರ್ವಜರು ಆಚರಿಸುತ್ತಿದ್ದ ಅರ್ಥಪೂರ್ಣ ಹಬ್ಬಗಳನ್ನು ಮರೆಯುತ್ತಿದ್ದೇವೆ ಎಂದು~ ತಾಲ್ಲೂಕು ಪಂಚಾಯಿತಿ ಸದಸ್ಯ ಡಾ.ಎಚ್.ಜಿ.ವಿಜಯಕುಮಾರ್ ತಿಳಿಸಿದರು.

ಅವರು ತಾಲ್ಲೂಕಿನ ವಿವೇಕಾನಂದ ನಗರದ ರಾಗಿ ಹೊಲದಲ್ಲಿ ನಡೆದ ಭೂಮಿ ತಾಯಿಯ ಬಯಕೆ ತೀರಿಸುವ `ಭೂಮಿ ಹುಣ್ಣಿಮೆ~ ಆಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.

ಕಾಲ ಕಾಲಕ್ಕೆ ಮಳೆ ಬಂದು ಸಮೃದ್ಧ ಫಸಲು ಬರಲಿ ಎಂಬ ಕಾರಣಕ್ಕೆ ಹಿರಿಯರು ಭೂಮಿ ಪೂಜೆಯನ್ನು ಆಚರಿಸುತ್ತಿದ್ದರು. ಕಾಲ ಕಳೆದಂತೆ ನಾಗರಿಕತೆಯ ಪರಿಣಾಮ ಈ ಹಬ್ಬ ಹೊಸ ಸಂಸ್ಕೃತಿಯ ಪೆಟ್ಟಿಗೆ ಒಳಗಾಯಿತು~ ಎಂದು ವಿಷಾದಿಸಿದರು.

ಹಬ್ಬದ ಆಚರಣೆ ಕುರಿತು ಮಾಹಿತಿ ನೀಡಿದ ಅವರು, `ಭೂಮಿ ಹಬ್ಬ ಶೂದ್ರ ಸಮುದಾಯಕ್ಕೆ ವಿಶಿಷ್ಟವಾದ ಹಬ್ಬ. ದೀಪಾವಳಿ ಹಬ್ಬಕ್ಕು ಮುನ್ನ ನಡೆಯುವ ಈ ಆಚರಣೆ ಕಾಲಕ್ಕೆ ಭತ್ತ, ರಾಗಿ, ಸೇರಿದಂತೆ ಮಳೆ ಆಶ್ರಯದಲ್ಲಿ ಬೆಳೆಯುವ ಎಲ್ಲಾ ಬೆಳೆಗಳು ಫಸಲು ಬರುವ ಸಮಯ ಇದು.

ಭೂಮಿತಾಯಿ ತುಂಬು ಗರ್ಭಿಣಿಯಾಗಿರುತ್ತಾಳೆ ಎನ್ನುವುದು ರೈತಾಪಿಗಳ ಸಾಮಾನ್ಯ ತಿಳುವಳಿಕೆ. ಸಾಮಾನ್ಯವಾಗಿ ಹೆಣ್ಣು ಗರ್ಭಿಣಿಯಾದ ಸಂದರ್ಭದಲ್ಲಿ ಬಯಕೆ ತೀರಿಸುವಂತೆ ಭೂಮಿತಾಯಿಯ ಗರ್ಭಧರಿಸಿದಾಗ ಅವಳ ಬಯಕೆಯನ್ನು ತೀರಿಬೇಕು ಎನ್ನುವುದೇ ಭೂಮಿ ಹುಣ್ಣಿಮೆ ಹಬ್ಬದ ವಿಶೇಷ~ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಮಹಿಳೆಯರು ರಾಗಿ ಹೊಲಕ್ಕೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಅನಿತಾಲಕ್ಷ್ಮೀ, ಬಸವರಾಜ್, ಬಿ.ವಿ. ಲೋಕೇಶ್, ಉಮಾದೇವಿ, ಗ್ರಾಮದ ಮುಖಂಡರಾದ ನಾಗರಾಜಪ್ಪ, ಶಾಂತಪ್ಪ, ಚಂದ್ರೇಗೌಡ, ಮುನೇಗೌಡ, ಶಾಂತಪ್ಪ, ಮಹೇಶ್, ಮಂಜುನಾಥ್ ಮುಂತಾದವರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.