ADVERTISEMENT

2025ಕ್ಕೆ ಕ್ಷಯಮುಕ್ತ ದೇಶಕ್ಕೆ ಪಣ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2019, 14:02 IST
Last Updated 25 ಮಾರ್ಚ್ 2019, 14:02 IST
ಕ್ಷಯರೋಗ ದಿನಾಚರಣೆ ಜಾಗೃತಿ ಜಾಥಾಗೆ ಜಿಲ್ಲಾ ಕ್ಷಯರೋಗ ನಿಯಂತ್ರಣ ಅಧಿಕಾರಿ ಡಾ.ಶಕೀಲಾ ಚಾಲನೆ ನೀಡಿದರು
ಕ್ಷಯರೋಗ ದಿನಾಚರಣೆ ಜಾಗೃತಿ ಜಾಥಾಗೆ ಜಿಲ್ಲಾ ಕ್ಷಯರೋಗ ನಿಯಂತ್ರಣ ಅಧಿಕಾರಿ ಡಾ.ಶಕೀಲಾ ಚಾಲನೆ ನೀಡಿದರು   

ದೊಡ್ಡಬಳ್ಳಾಪುರ: 2025ರ ಹೊತ್ತಿಗೆ ಕ್ಷಯಮುಕ್ತ ದೇಶವನ್ನಾಗಿಸಲು ಪಣ ತೊಡಲಾಗಿದೆ. ಆರೋಗ್ಯ ಇಲಾಖೆಯಿಂದ ಕ್ಷಯರೋಗದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸೆ ಆಂದೋಲನ ಸೇರಿದಂತೆ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕ್ಷಯರೋಗ ನಿಯಂತ್ರಣ ಅಧಿಕಾರಿ ಡಾ. ಶಕೀಲಾ ಹೇಳಿದರು.

ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯ ರೋಗ ನಿಯಂತ್ರಣ ಕೇಂದ್ರದ ವತಿಯಿಂದ ವಿಶ್ವ ಕ್ಷಯರೋಗ ದಿನಾಚರಣೆ ಅಂಗವಾಗಿ ನಡೆದ ಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿದರು.

ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಕ್ಷಯರೋಗಕ್ಕೆ ಉಚಿತವಾಗಿ ಪತ್ತೆ ಹಚ್ಚಿ ಚಿಕಿತ್ಸೆ ನೀಡಲಾಗುವುದು. ಕ್ಷಯ ರೋಗ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ಚಿಕಿತ್ಸೆ ಪಡೆಯದ ವ್ಯಕ್ತಿ ಒಂದು ವರ್ಷದಲ್ಲಿ 10 ಅಥವಾ ಹೆಚ್ಚು ಜನರಿಗೆ ಸೋಂಕು ಉಂಟು ಮಾಡಬಹುದು ಎಂದರು.

ADVERTISEMENT

ಆಂದೋಲನದಲ್ಲಿ ಕ್ಷಯ ಪ್ರಕರಣಗಳನ್ನು ಪತ್ತೆ ಹಚ್ಚಿ, ರೋಗ ಲಕ್ಷಣಗಳ ತಪಾಸಣೆ ಮಾಡಲಾಗುವುದು. ಸಂಗ್ರಹಿಸಿದ ಕಫದ ಮಾದರಿಯನ್ನು ಪರೀಕ್ಷಾ ಕೇಂದ್ರಕ್ಕೆ ಕಳುಹಿಸಲಾಗುವುದು. ಕ್ಷಯ ರೋಗ ನಿಯಂತ್ರಣ ಕುರಿತಂತೆ ಜಾಗೃತಿ ಮೂಡಬೇಕಿದೆ ಎಂದರು.

ಕೆಎಚ್‍ಪಿಟಿ ಸಂಸ್ಥೆಯ ನಿರ್ದೇಶಕ ಪ್ರಕಾಶ್ ಮಾತನಾಡಿ, ಕೇಂದ್ರ ಸರ್ಕಾರದ ನಿಕ್ಷಯ್ ಪೋಷಣ ಯೋಜನೆಯಡಿಯಲ್ಲಿ ರೋಗಿಗಳಿಗೆ ₹ 500 ನೀಡಲಾಗುವುದು. ಕ್ಷಯ ರೋಗಕ್ಕೆ ವೈದ್ಯರು ನೀಡುವ ಔಷಧಿಗಳನ್ನು ತಪ್ಪದೇ ತೆಗೆದುಕೊಳ್ಳಬೇಕಿದೆ ಎಂದರು.

ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಮಂಜುನಾಥ್, ಡಾ. ಸನತ್ ಕುಮಾರ್, ಕ್ಷಯರೋಗ ತಾಲ್ಲೂಕು ಚಿಕಿತ್ಸಾ ಮೇಲ್ವಿಚಾರಕ ಎಚ್.ಎಂ. ಆನಂದ್, ಯುವರಾಜ್ ಇದ್ದರು.

ನಗರದ ಪ್ರಮುಖ ಬೀದಿಗಳಲ್ಲಿ ನಡೆದ ಜಾಗೃತಿ ಜಾಥಾಗೆ ಆಟೋ ಚಾಲಕರು ಮತ್ತು ಮಾಲೀಕರು ಸಹಕಾರ ನೀಡಿ ಉಚಿತವಾಗಿ ಆಟೊಗಳನ್ನು ನೀಡುವ ವ್ಯವಸ್ಥೆ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.