ADVERTISEMENT

378 ರೈತರ ₹ 1.82 ಕೋಟಿ ಸಾಲ ಮನ್ನಾ

ಕುಂದಾಣ ವಿ.ಎಸ್.ಎಸ್.ಎನ್ ಶ್ರೀನಿವಾಸ್ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2019, 13:12 IST
Last Updated 22 ಏಪ್ರಿಲ್ 2019, 13:12 IST
ಅಧ್ಯಕ್ಷ ಶ್ರೀನಿವಾಸ್‌ ಅವರನ್ನು ಸಂಘದ ನಿರ್ದೇಶಕರು ಅಭಿನಂದಿಸಿದರು
ಅಧ್ಯಕ್ಷ ಶ್ರೀನಿವಾಸ್‌ ಅವರನ್ನು ಸಂಘದ ನಿರ್ದೇಶಕರು ಅಭಿನಂದಿಸಿದರು   

ದೇವನಹಳ್ಳಿ: ಇಲ್ಲಿನ ಕುಂದಾಣ ವ್ಯವಸಾಯ ಸೇವಾ ಸಹಕಾರ ಸಂಘದ (ವಿಎಸ್‌ಎಸ್‌ಎಸ್‌ಎನ್‌) ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ನರಗನಹಳ್ಳಿ ಶ್ರೀನಿವಾಸ್ ಅವಿರೋಧವಾಗಿ ಆಯ್ಕೆಗೊಂಡರು.

ಅಧ್ಯಕ್ಷ ಸ್ಥಾನಕ್ಕೆ ಏಕೈಕ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಶ್ರೀನಿವಾಸಗೆ ಸಂಘದ ನಿರ್ದೇಶಕರಾದ ಎಂ. ಲಕ್ಷಣ್ ಸೂಚಕರಾಗಿ ಆರ್.ಕೆ. ರಾಮೇಗೌಡ ಅನುಮೋದಕರಾಗಿ ಸಹಿ ಮಾಡಿದರು.

ನಾಮಪತ್ರ ಪರಿಶೀಲಿಸಿದ ಚುನಾವಣಾಧಿಕಾರಿ ಲತಾ ನಿಗದಿತ ಅವಧಿಯಲ್ಲಿ ಅಧ್ಯಕ್ಷರ ಆಯ್ಕೆ ಅಧಿಕೃತವಾಗಿ ಘೋಷಿಸಿದರು. ನಿರ್ದೇಶಕರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ನೂತನ ಅಧ್ಯಕ್ಷ ನರಗನಹಳ್ಳಿ ಶ್ರೀನಿವಾಸ್, ಕಳೆದ ಹತ್ತು ವರ್ಷಗಳಿಂದ ಸಹಕಾರ ಸಂಘದ ನಿರ್ದೇಶಕನಾಗಿ ಸಹಕಾರ ಸಂಘದ ಪ್ರತಿಯೊಂದು ವಹಿವಾಟುಗಳ ಬಗ್ಗೆ ಅರ್ಥ ಮಾಡಿಕೊಂಡಿದ್ದೇನೆ ಎಂದು ಹೇಳಿದರು.

ADVERTISEMENT

ಈ ಹಿಂದಿನ ಸರ್ಕಾರದ ಆಡಳಿತಾವಧಿಯಲ್ಲಿ ಸಂಘದಲ್ಲಿನ 378 ರೈತರ ₹ 1.82 ಕೋಟಿ ಸಾಲ ಮನ್ನಾ ಆಗಿದೆ, ಸಮ್ಮಿಶ್ರ ಸರ್ಕಾರದಲ್ಲಿ 302 ರೈತರ ಬೆಳೆ ಸಾಲ ₹ 1.62 ಕೋಟಿ ಮನ್ನಾ ಆಗಬೇಕು. ಈ ಮೊತ್ತದ ಪೈಕಿ 28 ರೈತರ ₹ 11 ಲಕ್ಷ ಸಾಲ ಮನ್ನಾ ಮೊದಲ ಹಂತದಲ್ಲಿ ಆಗಿದೆ ಎಂದು ಹೇಳಿದರು.

ಚುನಾವಣೆ ನೀತಿ ಸಂಹಿತೆಯಿಂದಾಗಿ ಎರಡನೇ ಹಂತದ ಸಾಲ ಮನ್ನಾ ವಿಳಂಬವಾಗಿದೆ, ರೈತರು ಆತಂಕಪಡುವ ಅಗತ್ಯವಿಲ್ಲ, ಈ ಹಿಂದೆ ಸಂಘದಿಂದ ಹಸು, ಕುರಿ, ಸಾಗಾಣಿಕೆಗೆ ₹ 45 ಲಕ್ಷ ಸಾಲ ನೀಡಲಾಗಿದೆ. ಪ್ರಸ್ತುತ ₹ 70 ಲಕ್ಷ ನೀಡುವ ಗುರಿ ಇದೆ. ಸ್ತ್ರೀ ಶಕ್ತಿ ಮತ್ತು ಸ್ವಸಹಾಯ ಗುಂಪುಗಳಿಗೆ ₹ 16.8 ಲಕ್ಷ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಲಾಗಿದೆ. ಈ ವರ್ಷದಲ್ಲಿ 25 ಸ್ತ್ರೀ ಶಕ್ತಿ ಸಂಘಗಳಿಗೆ ಕನಿಷ್ಠ ₹ 50 ಲಕ್ಷ ಸಾಲ ನೀಡಬೇಕು ಎಂದರು.

ಸ್ತ್ರೀ ಶಕ್ತಿ ಮತ್ತು ಸ್ವಸಹಾಯ ಗುಂಪುಗಳಿಗೆ ಸಾಲ ನೀಡಿದರೆ ಸ್ವಾವಲಂಬಿ ಜೀವನಕ್ಕೆ ಅನುಕೂಲವಾಗುವುದರ ಜತೆಗೆ ಸಕಾಲದಲ್ಲಿ ಸಾಲ ಮರುಪಾವತಿಯಾಗುತ್ತದೆ, ಹೀಗಾಗಿ ಮಹಿಳೆಯರಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಹೇಳಿದರು.

ಮಾಜಿ ಅಧ್ಯಕ್ಷರು ಹಾಲಿ ನಿರ್ದೇಶಕರ ಸಹಕಾರದಿಂದ ಸಂಘದ ಪ್ರಗತಿಗೆ ಶ್ರಮಿಸಲಾಗುವುದೆಂದರು. ಸಂಘದ ಉಪಾಧ್ಯಕ್ಷ ಪಟಾಲಪ್ಪ, ನಿರ್ದೇಶಕರಾದ ಎನ್. ಮಂಜುನಾಥ್, ಅನ್ನಪೂರ್ಣಮ್ಮ ,ವಿ. ಮುನಿರಾಜು, ವೆಂಕಟಾಚಲ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ರಮೇಶ್, ಮುಖಂಡರಾದ ಚನ್ನಕೃಷ್ಣಪ್ಪ, ಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.