ADVERTISEMENT

‘ಚಂದಾಪುರದಲ್ಲಿ ಸಂಚಾರ ಠಾಣೆ’

​ಪ್ರಜಾವಾಣಿ ವಾರ್ತೆ
Published 30 ಜನವರಿ 2018, 9:02 IST
Last Updated 30 ಜನವರಿ 2018, 9:02 IST
ನವೀಕರಣಗೊಂಡ ಹೆಬ್ಬಗೋಡಿ ಪೊಲೀಸ್ ಠಾಣೆಯ ಉದ್ಘಾಟನಾ ಸಮಾರಂಭದಲ್ಲಿ ಕಟ್ಟಡಕ್ಕೆ ಸಹಕರಿಸಿದ ದಾನಿಗಳನ್ನು ಪೊಲೀಸ್ ಇಲಾಖೆ ವತಿಯಿಂದ ಸನ್ಮಾನಿಸಲಾಯಿತು
ನವೀಕರಣಗೊಂಡ ಹೆಬ್ಬಗೋಡಿ ಪೊಲೀಸ್ ಠಾಣೆಯ ಉದ್ಘಾಟನಾ ಸಮಾರಂಭದಲ್ಲಿ ಕಟ್ಟಡಕ್ಕೆ ಸಹಕರಿಸಿದ ದಾನಿಗಳನ್ನು ಪೊಲೀಸ್ ಇಲಾಖೆ ವತಿಯಿಂದ ಸನ್ಮಾನಿಸಲಾಯಿತು   

ಆನೇಕಲ್‌: ಪೊಲೀಸ್ ಠಾಣೆಗಳು ಜನಸ್ನೇಹಿ ಠಾಣೆಗಳಾಗಿ ಪರಿವರ್ತ ನೆಯಾಗಬೇಕು. ಜನರು ಯಾವುದೇ ಭಯವಿಲ್ಲದೇ ಠಾಣೆಗಳಿಗೆ ತಮ್ಮ
ಸಮಸ್ಯೆಗಳ ಪರಿಹಾರಕ್ಕೆ ಬರುವಂತಾಗಬೇಕು ಎಂದು ಬೆಂಗಳೂರು ಗ್ರಾಮಾಂತರ ಪೊಲೀಸ್ ಎಸ್ಪಿ ಅಮಿತ್‌ ಸಿಂಗ್ ತಿಳಿಸಿದರು.

ತಾಲ್ಲೂಕಿನ ಹೆಬ್ಬಗೋಡಿಯಲ್ಲಿ ನವೀಕರಣಗೊಂಡ ಪೊಲೀಸ್ ಠಾಣೆಯ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ಸಂಚಾರ ಸಮಸ್ಯೆ ನಿವಾರಣೆಗಾಗಿ ಚಂದಾಪುರದಲ್ಲಿ ಸಂಚಾರ ಪೊಲೀಸ್ ಠಾಣೆಯನ್ನು ತೆರೆಯಲು ಪ್ರಸ್ತಾವನೆ ಸಲ್ಲಿಸಲಾಗಿದ್ದು ಇನ್ನೆರಡು ತಿಂಗಳಲ್ಲಿ ಠಾಣೆಯ ಸೌಲಭ್ಯ ದೊರೆಯಲಿದೆ ಎಂದರು.

ಯಾವುದೇ ಸಮಸ್ಯೆಗಳಿದ್ದಲ್ಲಿ ಜನರು ಪೊಲೀಸರನ್ನು ಸಂಪರ್ಕಿಸಲು ಮುಕ್ತ ವಾತಾವರಣವನ್ನು ಪೊಲೀಸ್ ಠಾಣೆಗಳಲ್ಲಿ ಕಲ್ಪಿಸಲಾಗಿದೆ. ಹೆಬ್ಬಗೋಡಿ ಪೊಲೀಸ್ ಠಾಣೆ ನವೀಕರಣಗೊಂಡಿದ್ದು ಆಧುನಿಕ ಸೌಲಭ್ಯಗಳು ಠಾಣೆಯಲ್ಲಿ ದೊರೆಯುವಂತಾಗಿದೆ. ಆನೇಕಲ್ ತಾಲ್ಲೂಕಿನಲ್ಲಿ ಐದು ಕೈಗಾರಿಕಾ ಪ್ರದೇಶಗಳಿರುವುದರಿಂದ ಜನಸಂದಣಿ ಹೆಚ್ಚಾಗಿದೆ. ಹಾಗಾಗಿ ಸಂಚಾರ ಸಮಸ್ಯೆ ಉಂಟಾಗುತ್ತಿದೆ ಎಂದರು.

ADVERTISEMENT

ಡಿವೈಎಸ್ಪಿ ಎಸ್.ಕೆ.ಉಮೇಶ್‌ ಮಾತನಾಡಿ, ಪೊಲೀಸರು ಕೇವಲ ಅಪರಾಧಿಗಳ ಜೊತೆಗೆ ಮಾತ್ರವಲ್ಲದೇ ಸಾರ್ವಜನಿಕರ ಜೊತೆಗೂ ವ್ಯವಹರಿಸಬೇಕಾಗಿದೆ. ಸಾರ್ವಜನಿಕರ ಭಾವನೆಗಳ ಜೊತೆ ನಾವು ಕೆಲಸ ಮಾಡಬೇಕಾಗಿದೆ. ಹಾಗಾಗಿ ಅವರ ಭಾವನೆಗಳಿಗೆ ಧಕ್ಕೆಯಾಗದಂತೆ ಹಾಗೂ ಅವರ ಹಕ್ಕುಗಳಿಗೆ ಚ್ಯುತಿ ಬರದಂತೆ ಕರ್ತವ್ಯ ನಿರ್ವಹಿಸುವುದು ಪೊಲೀಸರ ಜವಾಬ್ದಾರಿಯಾಗಿದೆ ಎಂದರು.

ನೂತನವಾಗಿ ಪ್ರಾರಂಭಿಸಲಾದ ಆನೇಕಲ್ ಪೊಲೀಸ್ ಉಪವಿಭಾಗದ ಕಚೇರಿಯ ನಿರ್ಮಾಣವು ಇನ್ಫೊಸಿಸ್‌ ಹಾಗೂ ಸನ್‌ಸೇರಾ ಕಾರ್ಖಾನೆಗಳ ಸಹಕಾರದಿಂದ ನೆರವೇರಿದ್ದು ವಿಭಾಗದಲ್ಲಿಯೇ ಅತ್ಯುತ್ತಮ ಕಚೇರಿಯಾಗಿ ಕಾರ್ಪೊರೇಟ್‌ ಕಚೇರಿಯಂತೆ ನಿರ್ಮಾಣವಾಗಿದೆ. ಕಚೇರಿಯಲ್ಲಿ ಕುಡಿಯುವ ನೀರು, ಶೌಚಾಲಯ, ವಿಶ್ರಾಂತಿ ಸ್ಥಳ, ಪೊಲೀಸರಿಗೆ ಕಂಪ್ಯೂಟರ್ ಸೌಲಭ್ಯ, ಸಿಸಿ ಟಿ.ವಿ. ಸೇರಿದಂತೆ ಆಧುನಿಕ ಸೌಲಭ್ಯಗಳುಳ್ಳ ಕಚೇರಿ
ಯನ್ನು ಉದ್ಘಾಟಿಸಲಾಗಿದೆ ಎಂದರು.

ಸನ್‌ಸೇರಾ ಕಾರ್ಖಾನೆಯ ಸಿಎಸ್‌ಆರ್‌ (ಕಾರ್ಪೋರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ) ವಿಭಾಗದ ಮುಖ್ಯಸ್ಥ ಆನಂದ್‌ ಮಾತನಾಡಿ, ಪೊಲೀಸ್ ಮತ್ತು ಸೈನಿಕರು ಈ ದೇಶದ ರಕ್ಷಕರು ದೇಶದ ಗಡಿಯಲ್ಲಿ ಸೈನಿಕರು ರಕ್ಷಣೆ ಮಾಡುತ್ತಾರೆ ಎಂದರು.

ದೇಶದೊಳಗಡೆ ಜನರ ರಕ್ಷಣೆ ಪೊಲೀಸರ ಕೈಯಲ್ಲಿದೆ. ಹಾಗಾಗಿ ಪೊಲೀಸ್ ಠಾಣೆಗೆ ಕಾರ್ಖಾನೆಯ ಸಿಎಸ್‌ಆರ್ ಅನುದಾನದಡಿಯಲ್ಲಿ ಹೆಚ್ಚಿನ ನೆರವು ನೀಡಿ ನಿರ್ಮಾಣ ಮಾಡಲಾಗಿದೆ. ಆನೇಕಲ್ ತಾಲ್ಲೂಕಿನಲ್ಲಿ ಹಲವಾರು ಕೈಗಾರಿಕೆಗಳಿದ್ದು ಅವುಗಳ ಸಿಎಸ್‌ಆರ್ ನಿಧಿಯನ್ನು ಒಗ್ಗೂಡಿಸಿ ಈ ಭಾಗದ ಸಾಮಾಜಿಕ ಹಾಗೂ ಸೇವಾ ಚಟುವಟಿಕೆಗಳಿಗೆ ಸರ್ಕಾರದ ಜೊತೆಗೆ ಕೆಲಸ ಮಾಡಬೇಕು ಎಂದರು.

ಬೊಮ್ಮಸಂದ್ರ ಕೈಗಾರಿಕಾ ಮಾಲೀಕರ ಸಂಘದ ಅಧ್ಯಕ್ಷ ಪ್ರಸಾದ್ ಮಾತನಾಡಿ, ಸಂಘದ ವತಿಯಿಂದ ಹೆಬ್ಬಗೋಡಿ ಪೊಲೀಸ್ ಠಾಣೆಗೆ ಬೊಲೆರೋ ವಾಹನವನ್ನು ಕೊಡುಗೆಯಾಗಿ ನೀಡಲಾಗುವುದು. ಈ ಭಾಗದ ಗಸ್ತಿಗೆ ವಾಹನವನ್ನು ಬಳಸಿಕೊಳ್ಳಬೇಕು. ವಾಹನದನಿರ್ವಹಣೆಯನ್ನು ಸಂಘ ಮಾಡುವುದಾಗಿ ತಿಳಿಸಿದರು.ಡಿವೈಎಸ್ಪಿ ಎಸ್.ಕೆ.ಉಮೇಶ್ ಅವರುಈ ಭಾಗದ ಉಸ್ತುವಾರಿ ವಹಿಸಿಕೊಂಡ ನಂತರ ಹಲವಾರು ಸಮಸ್ಯೆಗಳು ಪರಿಹಾರವಾಗಿವೆ ಎಂದರು.

ಹೆಚ್ಚುವರಿ ಎಸ್ಪಿ ಮಲ್ಲಿಕಾರ್ಜುನ್ ಬಾಲದಂಡಿ, ಹೆಬ್ಬಗೋಡಿ ಸರ್ಕಲ್‌  ಇನ್‌ಸ್ಪೆಕ್ಟರ್‌ ಜಗದೀಶ್, ಆನೇಕಲ್ ಸಿಪಿಐ ಮಾಲತೇಶ್, ಅತ್ತಿಬೆಲೆ ಸಿಪಿಐ ಎಲ್.ವೈ.ರಾಜೇಶ್, ಜಿಗಣಿ ಪೊಲೀಸ್ ಸರ್ಕಲ್‌  ಸಿದ್ದೇಗೌಡ, ಸಬ್‌ ಇನ್‌ಸ್ಪೆಕ್ಟರ್‌ಗಳಾದ ನವೀನ್‌ಕುಮಾರ್, ಆರ್.ನವೀನ್, ಆರ್.ಜಗದೀಶ್, ಶಂಕರ್‌ ಹಾಜರಿದ್ದರು.

ಪೊಲೀಸರು ಹಗಲು ರಾತ್ರಿ ಜನರಿಗಾಗಿ ಸೇವೆ ಸಲ್ಲಿಸಬೇಕಾಗಿದೆ. ಹಾಗಾಗಿ ಅವರಿಗೆ ಪೊಲೀಸ್ ಠಾಣೆ ಸಮೀಪ ವಸತಿ ಗೃಹ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮಾಂತರ ಎಸ್ಪಿ ತಿಳಿಸಿದರು.

ಆನೇಕಲ್‌, ಅತ್ತಿಬೆಲೆ, ಸರ್ಜಾಪುರದಲ್ಲಿ ನೂತನ ವಸತಿಗೃಹಗಳು ನಿರ್ಮಾಣ ಪ್ರಗತಿಯಲ್ಲಿದೆ. ಹೆಬ್ಬಗೋಡಿಯಲ್ಲಿ ಸ್ಥಳ ಗುರುತಿಸಿ ಕಾರ್ಯಾರಂಭ ಮಾಡಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.