ADVERTISEMENT

ಕೊಂಗಾಡಿಯಪ್ಪ ಸೇವೆ ಅವಿಸ್ಮರಣೀಯ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2018, 8:36 IST
Last Updated 23 ಫೆಬ್ರುವರಿ 2018, 8:36 IST

ದೊಡ್ಡಬಳ್ಳಾಪುರ: ನಗರದ ಅಭಿವೃದ್ಧಿಯಲ್ಲಿ ಲೋಕ ಸೇವಾನಿರತ ಡಿ.ಕೊಂಗಾಡಿಯಪ್ಪನವರ ಸೇವೆ ಸ್ಮರಣೀಯ. ಅವರ ನಿಸ್ವಾರ್ಥ ಸೇವಾ ಗುಣ ಮೈಗೂಡಿಸಿಕೊಂಡರೆ, ಪ್ರತಿಯೊಬ್ಬರು ಸಮಾಜ ನೋಡುವ ದೃಷ್ಟಿಕೋನ ಬದಲಾಗಲಿದೆ ಎಂದು ನಗರಸಭೆ ಅಧ್ಯಕ್ಷ ತ.ನ.ಪ್ರಭುದೇವ್ ಹೇಳಿದರು.

ನಗರದ ಸಂಜಯನಗರದಲ್ಲಿನ ಕೊಂಗಾಡಿಯಪ್ಪನವರ ಸಮಾಧಿ ಸ್ಥಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಗರಸಭೆ ವತಿಯಿಂದ ನಮನ ಸಲ್ಲಿಸಿ ಅವರು ಮಾತನಾಡಿದರು.

ದೊಡ್ಡಬಳ್ಳಾಪುರಕ್ಕೆ ವಿದ್ಯುತ್, ಕೊಳವೆ ಬಾವಿ, ಪ್ರೌಢ ಶಾಲೆ, ಆಸ್ಪತ್ರೆ, ಪಶು ವೈದ್ಯಶಾಲೆ, ಕೈಮಗ್ಗ ಮತ್ತು ಗೃಹ ಕೈಗಾರಿಕಾ ತರಬೇತಿ ಶಾಲೆಯನ್ನು ಮಂಜೂರು ಮಾಡಿಸಿದ ಹೆಗ್ಗಳಿಗೆ ಅವರಿಗೆ ಸಲ್ಲುತ್ತದೆ ಎಂದರು.

ADVERTISEMENT

ಊರಿನ ಯಾವುದೇ ಸಮಸ್ಯೆ ಬಗೆಹರಿಸುವಂತೆ ದುಡಿಯುತ್ತಿದ್ದರು. ಹಣ, ಅಧಿಕಾರವಿದ್ದರೂ ಕೆಲಸ ಪೂರ್ಣಗೊಳ್ಳಲು ವಿಳಂಬವಾಗುತ್ತಿದೆ. ಯಾವುದೇ ಹಣ ಬಲವಿಲ್ಲದೇ ಶಿಕ್ಷಕರಾಗಿದ್ದುಕೊಂಡು ಅವರು ದುಡಿದಿದ್ದರು. ಊರಿಗೆ ನೀರು, ವಿದ್ಯುತ್‌, ಮೂಲ ಸೌಲಭ್ಯ ತರಲು ಶ್ರಮಿಸಿದ ಮಹಾ ಆದರ್ಶ ಪುರುಷ ಎಂದು ಸ್ಮರಿಸಿದರು.

ದೇವರಾಜ್ ಅರಸು ವ್ಯವಹಾರ ನಿರ್ವಹಣಾ ಕಾಲೇಜಿನ ಪ್ರಾಂಶುಪಾಲ ಕೆ.ಆರ್.ರವಿಕಿರಣ್ ಮಾತನಾಡಿ, ಕೊಂಗಾಡಿಯಪ್ಪ ರಂತಹ ಮಹಾಮಹಿಮರನ್ನು ಒಂದು ಪಂಗಡಕ್ಕೆ ಸೀಮಿತಗೊಳಿಸುವುದು ವಿಷಾದ ಸಂಗತಿ ಎಂದು ತಿಳಿಸಿದರು.

ದೇಶದಲ್ಲಿ ಬಡತನ, ದಾರಿದ್ರ್ಯತೊಲಗಿಸಬೇಕು ಎನ್ನುವ ಮಹಾತ್ಮ ಗಾಂಧಿಜೀ ಅವರ ಮಾತನ್ನು ಕೊಂಗಾಡಿಯಪ್ಪರವರು ಪಾಲಿಸಿ ವಿಶ್ವಮಾನವರಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಎಸ್.ಶಿವಶಂಕರ್, ನಗರಸಭೆ ಸದಸ್ಯರಾದ ಕೆ.ಬಿ.ಮುದ್ದಪ್ಪ, ಸುಶೀಲಾ ಮೋಹನ್‌ ಕುಮಾರ್, ಮಂಜುಳಾ ಆಂಜನೇಯ, ವಿ.ಎಸ್.ರವಿಕುಮಾರ್, ಕೆಂಪರಾಜ್, ಯಶೋಧಮ್ಮ, ಭಾಗ್ಯ ಚೌಡರಾಜ್, ಕನ್ನಡ ಸಾಹಿತ್ಯ ಪರಿಷತ್‌ ತಾಲ್ಲೂಕು ಅಧ್ಯಕ್ಷೆ ಪ್ರಮೀಳಾ ಮಹಾದೇವ್, ಕನ್ನಡ ಪಕ್ಷದ ಅಧ್ಯಕ್ಷ ಸಂಜೀವ್‌ ನಾಯಕ್, ದೇವಾಂಗ ಮಂಡಳಿ ಅಧ್ಯಕ್ಷ ವಿ.ತಿಮ್ಮಶೆಟ್ಟಪ್ಪ, ಸಹ ಕಾರ್ಯದರ್ಶಿ ನಟರಾಜ, ನಗರಸಭೆಯ ಆರೋಗ್ಯ ಇಲಾಖೆ ಅಧಿಕಾರಿಗಳು ಇದ್ದರು.

ದೇವಾಂಗ ಮಂಡಲಿಯಿಂದ ಜನ್ಮ ದಿನಾಚರಣೆ

ನಗರದ ದೇವಾಂಗ ಮಂಡಳಿ ವತಿಯಿಂದ ಕೊಂಗಾಡಿಯಪ್ಪ ಅವರ ಜನ್ಮ ದಿನಾಚರಣೆ ಅಂಗವಾಗಿ ಮುಖ್ಯರಸ್ತೆ ಮಾರುಕಟ್ಟೆ ಶಾಲೆ ಮುಂಭಾಗದ ಕೊಂಗಾಡಿಯಪ್ಪ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಜನ್ಮದಿನಾಚರಣೆ ಆಚರಿಸಲಾಯಿತು.

ದೇವಾಂಗ ಮಂಡಳಿ ಅಧ್ಯಕ್ಷ ವಿ.ತಿಮ್ಮಶೆಟ್ಟಪ್ಪ, ಕಾರ್ಯದರ್ಶಿ ಎ.ಎಸ್.ಕೇಶವ ಮಾತನಾಡಿ, ‘ಪ್ರಾದೇಶಿಕ ಅಭಿವೃದ್ದಿಗೆ ಶ್ರಮಿಸಿದ ಮಹನೀಯರನ್ನು ಸ್ಮರಿಸಬೇಕಿದೆ’ ಎಂದು ಅಭಿಪ್ರಾಯಪಟ್ಟರು.

ಪ್ರತಿ ವಿಚಾರದಲ್ಲಿಯೂ ಸ್ವಾರ್ಥ ಮನೋಭಾವ ತುಂಬಿರುವ ಇಂದಿನ ದಿನಗಳಲ್ಲಿ ಲೋಕ ಸೇವಾನಿರತ ಡಿ.ಕೊಂಗಾಡಿಯಪ್ಪ ಅವರ ನಿಸ್ವಾರ್ಥ ಸೇವಾಗುಣ ಮೈಗೂಡಿಸಿಕೊಳ್ಳಬೇಕಿದೆ ಎಂದರು.

ನಗರಸಭೆ ಅಧ್ಯಕ್ಷ ತ.ನ.ಪ್ರಭುದೇವ್, ದೇವಾಂಗ ಮಂಡಳಿ ಉಪಾಧ್ಯಕ್ಷ ಕೆ.ಜಿ.ದಿನೇಶ್, ನಗರಸಭೆ ಉಪಾಧ್ಯಕ್ಷೆ ಜಯಲಕ್ಷ್ಮಿ ನಟರಾಜ್, ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಎಸ್.ಶಿವಶಂಕರ್, ದೇವಾಂಗ ಮಂಡಳಿ ಉಪಾಧ್ಯಕ್ಷ ಕೆ.ಜಿ.ದಿನೇಶ್, ಎನ್.ಎಸ್.ಚಿಕ್ಕಣ್ಣ, ಸಹ ಕಾರ್ಯದರ್ಶಿ ಯೋಗ ನಟರಾಜ ಖಜಾಂಚಿ ಕೆ.ಎಸ್.ಸನಾತನಮೂರ್ತಿ ಹಾಗೂ ಮಂಡಳಿ ನಿರ್ದೇಶಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.