ವಿಜಯಪುರ: ‘ಬೆಳೆಯುವ ಮಕ್ಕಳ ಪೌಷ್ಟಿಕಾಂಶ ಹೀರಿ ಬೆಳೆಯುವ ಜಂತುಹುಳುಗಳ ನಿವಾರಣೆಗಾಗಿ ಅಲ್ಬೆಂಡಝೋಲ್ ಮಾತ್ರೆ ಸೇವಿಸುವಂತೆ ಪ್ರತಿಯೊಬ್ಬ ಪಾಲಕರು ಗಮನಹರಿಸಿ ಮಕ್ಕಳಿಗೆ ನೀಡಬೇಕು’ ಎಂದು ಮುಖ್ಯಶಿಕ್ಷಕ ಚಂದ್ರಶೇಖರ ಹಡಪದ್ ಹೇಳಿದರು.
ಹೋಬಳಿಯ ನಾರಾಯಣಪುರ ಸರ್ಕಾರಿ ಶಾಲೆಯಲ್ಲಿ ರಾಷ್ಟ್ರೀಯ ಜಂತುಹುಳ ನಿವಾರಣೆ ದಿನಾಚರಣೆಯ ಅಂಗವಾಗಿ ಮಕ್ಕಳಿಗೆ ಜಂತುಹುಳು ವಿತರಿಸಿ ಅವರು ಮಾತನಾಡಿದರು.
‘ಬಯಲು ಶೌಚದಿಂದಾಗಿ, ಬರಿಗಾಲಿನಲ್ಲಿ ನಡೆದಾಗ ಹಾಗೂ ಕಲುಷಿತ ಕೈಗಳಿಂದ ಆಹಾರ ಸೇವನೆ ಮಾಡುವಾಗ ದೇಹದೊಳಗೆ ಜಂತುಹುಳುಗಳು ಪ್ರವೇಶಿಸಿ ಕರುಳಿನಲ್ಲಿ ವಾಸಿಸುವ ಪರಾವಲಂಬಿ ಜೀವಿಗಳಾಗಿ ಬೆಳೆಯುತ್ತವೆ. ಇವುಗಳು ಮಕ್ಕಳಲ್ಲಿನ ಪೌಷ್ಟಿಕಾಂಶ ಹೀರುವುದರಿಂದ ರಕ್ತಹೀನತೆ ಉಂಟು ಮಾಡಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತವೆ. ಶಾಲೆಯ ಮಕ್ಕಳಲ್ಲಿನ ಕಲಿಕಾ ಸಾಮರ್ಥ್ಯ ಹಾಗೂ ಆರೋಗ್ಯ ಸುಧಾರಿಸುವ ನಿಟ್ಟಿನಲ್ಲಿ ಜಂತುಹುಳುಗಳು ದೇಹವನ್ನು ಪ್ರವೇಶಿಸದಂತೆ ಮುನ್ನೆಚ್ಚರಿಕೆ ವಹಿಸಬೇಕು. ಪರಿಸರ ಸ್ವಚ್ಛವಾಗಿಟ್ಟುಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಶಿಕ್ಷಕ ನಾಗೇಶ್ ಮಾತನಾಡಿ, ‘ಜಂತುಹುಳುವಿನ ಬಾಧೆಯು ಮಕ್ಕಳ ಆರೋಗ್ಯ ಮೇಲೆ ದುಷ್ಪರಿಣಾಮ ಬೀರುತ್ತದೆ. ಮಗುವಿನ ಆರೋಗ್ಯ ಮತ್ತು ಶಿಕ್ಷಣಕ್ಕೂ ನಿಕಟ ಸಂಬಂಧವಿದ್ದು, ಮಗುವು ಒಳ್ಳೆಯ ಶಿಕ್ಷಣ ಪಡೆಯಬೇಕಾದರೆ ಸದೃಢ ಆರೋಗ್ಯ ಹೊಂದುವುದು ಅವಶ್ಯಕವಾಗಿದೆ. ಮನೆಯಲ್ಲಿ ಅಥವಾ ಶಾಲೆಯಲ್ಲಿ ಊಟಕ್ಕೆ ಮುಂಚೆ ಕೈತೊಳೆದುಕೊಳ್ಳಬೇಕು. ಜಂತುಹುಳುಗಳಿಂದ ಮಗುವಿನಲ್ಲಿ ರಕ್ತಹೀನತೆ, ಪೌಷ್ಟಿಕಾಂಶದ ಕೊರತೆ, ಹಸಿವೆಯಾಗದಿರುವುದು, ತೂಕ ಕಡಿಮೆಯಾಗುವುದು ಸಂಭವಿಸುತ್ತದೆ. ಅಲ್ಬಂಡೆಜೋಲ್ ಮಾತ್ರೆಯನ್ನು ತಪ್ಪದೇ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು. ಆರೋಗ್ಯ ಇಲಾಖೆಯ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಸುಧಾರಾಣಿ, ಸಹಾಯಕಿ ಶಿಕ್ಷಕ ಹನುಮಂತರಾಜು, ರವಿಚಂದ್ರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.