ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲಾ ಬಾಲಭವನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಗ್ರಾಮೀಣಾಭಿವದ್ಧಿ ಸೇವಾ ಸಂಸ್ಥೆ ಸಹಯೋಗದಲ್ಲಿ ಜಿಲ್ಲಾ ಮಟ್ಟದ ಕಲಾಶ್ರೀ ಆಯ್ಕೆ ಶಿಬಿರ ನಡೆಯಿತು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಗ್ರಾಮೀಣ ಅಭ್ಯುದಯ ಸೇವಾ ಸಂಸ್ಥೆ ಕಾರ್ಯದರ್ಶಿ ಅಮಲಿನಾಯಕ್, ‘ಕಲಾಶ್ರೀ ಸಾಂಸ್ಕೃತಿಕ ಕಾರ್ಯಕ್ರಮ ಮಕ್ಕಳ ಪ್ರತಿಭೆ ಅನಾವರಣಕ್ಕೆ ಸಹಕಾರಿ. ವಿದ್ಯಾರ್ಥಿಗಳು ಪಠ್ಯ ವಿಷಯಕ್ಕೆ ನೀಡುವ ಮಹತ್ವವನ್ನು ಪಠ್ಯೇತರ ಚಟುವಟಿಕೆಗಳಿಗೂ ನೀಡಬೇಕು. ಸ್ಪರ್ಧಾತ್ಮಕ ಜಗತ್ತಿನಲ್ಲಿ ಪ್ರತಿಭೆಗೆ ಮನ್ನಣೆ ದೊರೆಯುತ್ತದೆ. ಸತತ ಅಭ್ಯಾಸ, ಏಕಾಗ್ರತೆ, ಶಿಸ್ತುಬದ್ದ ಜೀವನ ಶೈಲಿಯಿಂದ ಸಾಧಕರಾಗಲು ಸಾಧ್ಯ’ ಎಂದರು.
ಬಾಲಭವನದ ಸಂಯೋಜಕಿ ಶ್ವೇತಾ ಮಾತನಾಡಿ, ‘ಮಕ್ಕಳ ಸುಪ್ತ ಪ್ರತಿಭೆ ಹೊರತರಲು ಕಲಾಶ್ರೀ ಕಾರ್ಯಕ್ರಮ ಇಂಬು ನೀಡಲಿದ್ದು, ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದವರು ರಾಜ್ಯಮಟ್ಟದಲ್ಲಿ ಭಾಗವಹಿಸಬಹುದು’ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ತಾಲ್ಲೂಕು ಅಧಿಕಾರಿ ಅನಿತಾ ಲಕ್ಷ್ಮೀ, ಸಹಾಯಕ ಅಧಿಕಾರಿ ಸೀನಮ್ಮ, ಶಿಕ್ಷಣ ಸಂಯೋಜಕ ಶಿವಕುಮಾರ್ ಇದ್ದರು.
ಬಹುಮಾನ ವಿಜೇತರು: ಸೃಜನಾತ್ಮಕ ಕಲೆ: ಎಸ್.ಎಚ್.ಲಿಖಿತ, ರಾಹುಲ್ ಕುಮಾರ್ (ದೊಡ್ಡಬಳ್ಳಾಪುರ), ಸೃಜನಾತ್ಮಕ ಬರವಣಿಗೆ: ಎಸ್.ಪಿ.ನಂದೀಶ್ (ನೆಲಮಂಗಲ), ಎಂ.ಶ್ರಾವಣಿ (ಹೊಸಕೋಟೆ), ಸೃಜನಾತ್ಮಕ ಪ್ರದರ್ಶನ ಕಲೆ: ಎಚ್.ಸ್ನೇಹ (ದೊಡ್ಡಬಳ್ಳಾಪುರ), ಕುಶಾಲ್ (ನೆಲಮಂಗಲ), ವಿಜ್ಞಾನ ನೂತನ ಆವಿಷ್ಕಾರ: ಪಿ.ಪ್ರಜ್ವಲ್ (ನೆಲಮಂಗಲ), ಟಿ.ಎನ್.ನಿಖಿಲ್ (ದೊಡ್ಡಬಳ್ಳಾಪುರ).
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.