ದೇವನಹಳ್ಳಿ: ಕಳೆದ ಮೂವತ್ತೈದು ವರ್ಷಗಳ ಹಿಂದೆ ನಿರ್ಮಾಣವಾಗಿರುವ ಸರ್ಕಾರಿ ಸಮುದಾಯ ಆಸ್ಪತ್ರೆ ಕಟ್ಟಡದ ಮೇಲೊಂದು ಕಟ್ಟಡ ನಿರ್ಮಾಣವಾಗುತ್ತಿರುವುದು ಅಪಾಯಕಾರಿ ಬೆಳವಣಿಗೆ ಎಂದು ಸಾರ್ವಜನಿಕರು ದೂರಿದ್ದಾರೆ.
ಶಿಥಿಲಗೊಂಡು ಬಿರುಕು ಬಿಟ್ಟಿರುವ ಆಸ್ಪತ್ರೆ ಗೋಡೆಗಳಿಂದ ಇಟ್ಟಿಗೆ ಪುಡಿಯಾಗಿ ಉದುರುತ್ತಿದೆ. ಕೊಠಡಿಗಳ ಕೆಲ ಭಾಗದಲ್ಲಿ ಬಿರುಕು ಬಿಟ್ಟಿದೆ. ಇಂತಹ ಕಟ್ಟಡದ ಮೇಲೊಂದು ಕಟ್ಟಡ ನಿರ್ಮಾಣಕ್ಕೆ ಮುಂದಾಗಿರುವುದು ಭವಿಷ್ಯದ ದುರಂತಕ್ಕೆ ಕಾರಣವಾಗಲಿದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.
1983 ರಲ್ಲಿ ನಗರದಲ್ಲಿದ್ದ ಸರ್ಕಾರಿ ಆಸ್ಪತ್ರೆಯನ್ನು ಹೊರ ವಲಯ ವಿಜಯಪುರ ರಸ್ತೆಯಲ್ಲಿ ಇರುವ ನೂತನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು. ಕಟ್ಟಡದ ಮೇಲ್ಚಾವಣಿ ಮೇಲೆ ಮಳೆ ನೀರು ಸರಾಗವಾಗಿ ಹರಿಯದೆ ಹುಲ್ಲು ಇತರೆ ಗಿಡಗಂಟಿಗಳು ಬೆಳೆದು ನಿಂತಿವೆ. ಅಲ್ಲದೆ, ಕಟ್ಟಡ ಕೂಡ ಶಿಥಿಲಗೊಂಡಿದೆ. ಕಟ್ಟಡಕ್ಕೆ ಅಳವಡಿಸಿರುವ ಪಿಲ್ಲರ್ ಸಡಿಲಗೊಂಡಿದೆ. ಶಿಥಿಲಗೊಂಡಿರುವ ಕಟ್ಟಡದ ಮೇಲೆ ನೂತನ ಕಟ್ಟಡಕ್ಕೆ ಮುಂದಾಗಿರುವುದು ಅಪಾಯಕ್ಕೆ ಆಹ್ವಾನ ನೀಡಿದಂತೆ. ಮುಂದೆ ಎದುರಾಗುವ ತೊಂದರೆಗೆ ಅಧಿಕಾರಿಗಳೇ ನೇರೆ ಹೊಣೆ ಎಂದು ಆರ್.ಟಿ.ಇ ಕಾರ್ಯಕರ್ತ ಎಂ.ಆಂಜಿನಪ್ಪ ಆರೋಪಿಸಿದ್ದಾರೆ.
ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಲು ಸರ್ಕಾರ ಕರ್ನಾಟಕ ಹೆಲ್ತ್ ಸಿಸ್ವಂ ರಿಫಾರ್ಮ್ ಡೆವೆಲಪ್ಮೆಂಟ್ ಪ್ರಾಜೆಕ್ಟ್ (ಕೆ.ಎಸ್.ಎಸ್.ಆರ್.ಡಿ.ಪಿ) ಯೊಜನೆಯಡಿ ₹9 ಕೋಟಿ ಅನುದಾನ ಬಿಡುಗಡೆಯಾಗಿದೆ. ಈ ಯೋಜನೆಯಡಿ ಟೆಂಡರ್ ಇಲ್ಲದೆ ಕಾಮಗಾರಿಗೆ ನಡೆಸಲಾಗುತ್ತಿದೆ. ಜನಪ್ರತಿನಿಧಿಗಳು ಗುಣಮಟ್ಟದ ಕಾಮಗಾರಿಗೆ ಆಸಕ್ತಿಯೇ ವಹಿಸಿಲ್ಲ ಎಂದು ಪಿ.ವಿ.ಬಿ.ಎಸ್ ರಾಜ್ಯ ಸಂಸ್ಥಾಪಕ ಅಧ್ಯಕ್ಷ ಬಿಜ್ಜವಾರ ನಾಗರಾಜ್ ದೂರಿದ್ದಾರೆ.
ಬಡವರು, ಕೂಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾರೆ. ಆಸ್ಪತ್ರೆಯಲ್ಲಿ ದಿನವೊಂದಕ್ಕೆ ಸರಾಸರಿ 220ಕ್ಕೂ ಹೆಚ್ಚು ಹೊರ ರೋಗಿಗಳು, 25ಕ್ಕೂ ಹೆಚ್ಚು ಒಳ ರೋಗಿಗಳು ಚಿಕಿತ್ಸೆ ಪಡೆಯುತ್ತಾರೆ. ಕೊಟ್ಯಂತರ ಅನುದಾನ ಬಳಕೆಯನ್ನು ಶಿಥಿಲಗೊಂಡಿರುವ ಕಟ್ಟಡದ ಮೇಲೆ ನಿರ್ಮಿಸುವ ಅವಶ್ಯಕತೆಯಾದರೂ ಏನು. ಆಸ್ಪತ್ರೆ ಆವರಣದಲ್ಲಿ ಹತ್ತಾರು ಎಕರೆ ಜಾಗವಿದ್ದರೂ ಕಟ್ಟಡ ಮೇಲ್ಭಾಗದಲ್ಲಿ ನಿರ್ಮಾಣದ ಔಚಿತ್ಯವೇನು ಎಂದು ಅವರು ಪ್ರಶ್ನಿಸುತ್ತಾರೆ.
ಹಳೆ ಕಟ್ಟಡದ ಮೇಲೆ ಮತ್ತೊಂದು ನೂತನ ಕಟ್ಟಡ ನಿರ್ಮಾಣಕ್ಕೆ ಸರ್ಕಾರದ ಕೆಲವೊಂದು ಮಾನದಂಡಗಳಿವೆ. ಗುಣಮಟ್ಟ ಕಳೆದುಕೊಂಡ ಗೋಡೆಯನ್ನು ಸಂಪೂರ್ಣ ತೆರವುಗೊಳಿಸಬೇಕು. ಗುತ್ತಿಗೆದಾರರು ಕೆಲ ನಿಯಮಗಳನ್ನು ಪಾಲಿಸಬೇಕಿದೆ ಎನ್ನುತ್ತಾರೆ ಸ್ಥಳೀಯ ನಿವಾಸಿ ರಾಮಣ್ಣ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.