ADVERTISEMENT

ಬರಗಾಲ ನಿರ್ವಹಣೆಗಾಗಿ ತ್ವರಿತ ಕ್ರಮಕ್ಕೆ ಸೂಚನೆ

ದೇವನಹಳ್ಳಿ ತಾಲ್ಲೂಕಿಗೆ ಬರ ಪರಿಹಾರ ಶೀಘ್ರ ಬಿಡುಗಡೆಗೆ ಶಾಸಕ ಒತ್ತಾಯ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2018, 13:28 IST
Last Updated 16 ಅಕ್ಟೋಬರ್ 2018, 13:28 IST
ವಿಜಯಪುರ ಹೋಬಳಿ ಗೊಡ್ಲುಮುದ್ದೇನಹಳ್ಳಿಯ ಬಳಿ ರೈತರು ಬಿತ್ತನೆ ಮಾಡಿದ್ದ ಹೊಲದಲ್ಲಿ ಮಳೆಯಿಲ್ಲದೆ ರಾಗಿ ಪೈರು ಒಣಗುತ್ತಿರುವುದು
ವಿಜಯಪುರ ಹೋಬಳಿ ಗೊಡ್ಲುಮುದ್ದೇನಹಳ್ಳಿಯ ಬಳಿ ರೈತರು ಬಿತ್ತನೆ ಮಾಡಿದ್ದ ಹೊಲದಲ್ಲಿ ಮಳೆಯಿಲ್ಲದೆ ರಾಗಿ ಪೈರು ಒಣಗುತ್ತಿರುವುದು   

ವಿಜಯಪುರ:ಮುಖ್ಯಮಂತ್ರಿ ಜತೆಚರ್ಚೆ ಮಾಡಿ, ದೇವನಹಳ್ಳಿ ತಾಲ್ಲೂಕಿನ ಚಿತ್ರಣ ನೀಡಿ ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆ ಮಾಡಲಾಗಿದೆ ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ತಿಳಿಸಿದರು.

ಸ್ಥಳೀಯವಾಗಿ ಇರುವ ನೈಜತೆಯ ವರದಿಯನ್ನು ಸಿದ್ಧಪಡಿಸುವಲ್ಲಿ ಅಧಿಕಾರಿಗಳು ಸಹಕಾರ ನೀಡಿದ್ದಾರೆ. ಬರಗಾಲ ಪೀಡಿತ ಪ್ರದೇಶವೆಂದು ಸರ್ಕಾರ ಘೋಷಣೆ ಮಾಡಿದೆ. ತಾಲ್ಲೂಕಿನಲ್ಲಿ 20ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದಿದೆ ಎಂದರು.

ತಕ್ಷಣ ಟಾಸ್ಕ್‌ ಫೋರ್ಸ್‌ ಸಿದ್ಧಪಡಿಸಿ ಕೊಳವೆಬಾವಿ ಕೊರೆಯಲು ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ಬರಗಾಲ ಪರಿಹಾರ ಕಾಮಗಾರಿಗಳಿಗೆ ಕ್ರೀಯಾಯೋಜನೆ ಸಿದ್ಧಪಡಿಸಿಕೊಳ್ಳುವಂತೆ ತಿಳಿಸಲಾಗುವುದು ಎಂದರು.

ADVERTISEMENT

ಬೆಳೆ ನಷ್ಟದ ಕುರಿತು ಪ್ರತಿಯೊಬ್ಬ ರೈತರ ಮಾಹಿತಿ ಶೇಖರಣೆ ಮಾಡಿಟ್ಟುಕೊಳ್ಳುವಂತೆ ಕಂದಾಯ ಹಾಗೂ ಕೃಷಿ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಬಂದಿರುವ ಚೆಕ್ಕುಗಳನ್ನು ಸಂಬಂಧಿಸಿದ ಫಲಾನುಭವಿಗಳಿಗೆ ತಲುಪಿಸುವಂತೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.

ರೈತ ಮುಖಂಡ ಸೊಣ್ಣೇಗೌಡ ಮಾತನಾಡಿ, ರಾಜ್ಯದ ಮೈತ್ರಿ ಸರ್ಕಾರ, ದೇವನಹಳ್ಳಿಯನ್ನು ಬರಗಾಲಪೀಡಿತ ಪ್ರದೇಶವೆಂದು ಘೋಷಣೆ ಮಾಡಿರುವುದರಿಂದ ರೈತರು ನಿಟ್ಟುಸಿರುವ ಬಿಡುವಂತಾಗಿದೆ ಎಂದರು.

‘ಜಿಲ್ಲಾ ಉಸ್ತುವಾರಿ ಸಚಿವರು, ಸೇರಿದಂತೆ ಜಿಲ್ಲಾಧಿಕಾರಿಗಳಿಗೆ ಮನವಿಗಳನ್ನು ಸಲ್ಲಿಸಿದ್ದೆವು. ಈಗಾಗಲೇ ಬೆಳೆದು ನಿಂತಿರುವ ಪೈರುಗಳಿಗೆ ಮಳೆಯಿಲ್ಲದೆ ಮಳೆಯಿಲ್ಲದೆ ಒಣಗಿಹೋಗುತ್ತಿವೆ. ಬರಪರಿಹಾರ ಕಾಮಗಾರಿಗಳನ್ನು ತ್ವರಿತವಾಗಿ ಕೈಗೊಂಡರೆ ಉತ್ತಮ’ ಎಂದರು.

ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳು ಕೂಡಲೇ ಜಾನುವಾರುಗಳಿಗೆ ಮೇವು ವಿತರಿಸುವ ಕಾರ್ಯಕ್ಕೆ ಮುಂದಾಗಬೇಕು. ಗ್ರಾಮೀಣ ಪ್ರದೇಶಗಳಲ್ಲಿನ ಜನರಿಗೆ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಜಾಗೃತಿ ವಹಿಸಬೇಕು ಎಂದರು.

ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಜುಳಾ ಮಾತನಾಡಿ, ಈ ವರ್ಷದಲ್ಲಿ ರಾಗಿ ಬಿತ್ತನೆ ಕಾರ್ಯ 6,960 ಹೆಕ್ಟೇರ್ ಗುರಿಯನ್ನು ಇಟ್ಟುಕೊಂಡಿದ್ದೆವು. 6,673 ಹೆಕ್ಟೇರ್ ಬಿತ್ತನೆಯಾಗಿತ್ತು. ಮುಸುಕಿನ ಜೋಳ 605 ಕ್ಕೆ 205 ಹೆಕ್ಟೇರ್, ಮೇವಿನ ಜೋಳ 55 ಕ್ಕೆ 223 ಹೆಕ್ಟೇರ್ (ಹೆಚ್ಚಿನ ಬಿತ್ತನೆಯಾಗಿದೆ) ತೊಗರಿ 400 ಕ್ಕೆ 110, ಅವರೆ 600 ಕ್ಕೆ 18, ನೆಲೆಗಡಲೆ 75 ಕ್ಕೆ 20 ಹೆಕ್ಟೇರ್ ಪ್ರದೇಶಗಳಲ್ಲಿ ಮಾತ್ರ ಬಿತ್ತನೆಯಾಗಿದೆ ಎಂದರು.

ಸರ್ಕಾರಕ್ಕೆ ಸಲ್ಲಿಸಿದ ವರದಿಯಂತೆ ಅಂದಾಜು 2019 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿ ಸಂಭವವಿದೆ ಎಂದು ನೀಡಿದ್ದೆವು. ಬೆಳೆ ನಷ್ಟದ ಕುರಿತು ಸಮೀಕ್ಷೆಯಲ್ಲಷ್ಟೇ ನಿಖರವಾದ ಅಂಕಿ ಅಂಶಗಳು ಸಿಗಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.