ಆನೇಕಲ್: ‘ಸಾವಿರಾರು ಮಹಿಳೆಯರಿಗೆ ಶಿಕ್ಷಣ ನೀಡಿದ ಸಾವಿತ್ರಿಬಾ ಫುಲೆ ಅವರ ತತ್ವ ಸಿದ್ಧಾಂತ ಎಲ್ಲರಿಗೂ ಆದರ್ಶವಾಗಿದೆ’ ಎಂದು ಪ್ರಜಾ ವಿಮೋಚನಾ ಚಳವಳಿ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಆನೇಕಲ್ ಕೃಷ್ಣಪ್ಪ ತಿಳಿಸಿದರು.
ತಾಲ್ಲೂಕಿನ ಆಡೆಸಸೊನ್ನಹಟ್ಟಿ ಗ್ರಾಮದಲ್ಲಿ ಸಾವಿತ್ರಿಬಾ ಫುಲೆ ಅವರ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿಅವರು ಮಾತನಾಡಿದರು.
‘ಶೋಷಿತರಿಗೆ ಶಿಕ್ಷಣ ಕೊಡಲು ಶಾಲೆ ಸ್ಥಾಪಿಸಿದ ಮೊಟ್ಟ ಮೊದಲ ಬೆಳಕು ಜ್ಯೋತಿಬಾ ಫುಲೆ. ಅವರಿಗೆ ಕೈಜೋಡಿಸಿ ನಿಂತಿವರು ಸಾವಿತ್ರಿಬಾ ಫುಲೆ. ಅವರ ಜನ್ಮ ದಿನವನ್ನು ಶೋಷಿತರ ಬೆಳಕಿನ ದಿನವನ್ನಾಗಿ ಆಚರಿಸಿದರೆ ಅರ್ಥ ಪೂರ್ಣವಾಗಲಿದೆ. ಅಸ್ಪೃಶ್ಯತೆಯನ್ನು ಸಮಾಜದಿಂದ ತೊಲಗಿಸಲು ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಅರಿತಿದ್ದ ಇವರು ಎಲ್ಲರಿಗೂ ಶಿಕ್ಷಣವನ್ನು ನೀಡಲು ಶ್ರಮಿಸಿದ್ದರು’ ಎಂದರು.
‘ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಕಲಿಕೆ ಪ್ರಾರಂಭಿಸಲು ಹೊರಟಿರುವ ಸರ್ಕಾರದ ಉದ್ದೇಶ ಸ್ವಾಗತಾರ್ಹ. ಗ್ರಾಮೀಣ ವಿದ್ಯಾರ್ಥಿಗಳಿಗೂ ಎಲ್ಲ ಸೌಲಭ್ಯಗಳನ್ನು ನೀಡುವ ಅಗತ್ಯವಿದೆ. ಗ್ರಾಮಾಂತರ ಪ್ರದೇಶದ ಮಕ್ಕಳು ಇಂಗ್ಲಿಷ್ ಕಲಿಯಲು ಸರ್ಕಾರಿ ಶಾಲೆಯಲ್ಲಿ ಆಂಗ್ಲ ಭಾಷೆಯನ್ನು ಕಲಿಸುವ ಅಗತ್ಯವಿದೆ’ ಎಂದರು.
ಸಂಘಟನೆಯ ಬೆಂಗಳೂರು ವಿಭಾಗೀಯ ಅಧ್ಯಕ್ಷ ಯಡವನಹಳ್ಳಿ ಕೃಷ್ಣಪ್ಪ ಮಾತನಾಡಿ, ‘ಬಡವರು ಹಕ್ಕುಗಳನ್ನು ಪಡೆಯಲು ಹೋರಾಟ ನಡೆಸಬೇಕಾದ ಅಗತ್ಯವಿದೆ. ಸಂಘಟನೆ, ಹೋರಾಟ, ಶಿಕ್ಷಣ ಎಂಬ ಮೂಲ ಮಂತ್ರಗಳನ್ನು ಯುವ ಸಮುದಾಯ ಅಳವಡಿಸಿಕೊಳ್ಳಬೇಕು’ ಎಂದು ತಿಳಿಸಿದರು.
‘ಪ್ರಜಾ ವಿಮೋಚನಾ ಚಳವಳಿ ಎಲ್ಲ ವರ್ಗದ ಸಮುದಾಯಗಳನ್ನು ಒಟ್ಟುಗೂಡಿಸಿ ಸಮಸಮಾಜದ ನಿರ್ಮಾಣಕ್ಕೆ ಮುಂದಾಗಿದೆ. ಸಮಾಜದಲ್ಲಿನ ಎಲ್ಲರೂ ಶಿಕ್ಷಣ ಪಡೆದಾಗ ಮಾತ್ರ ಸಮಸಮಾಜ ನಿರ್ಮಿಸಲು ಸಾಧ್ಯ. ಹಾಗಾಗಿ ಯಾರೂ ಶಿಕ್ಷಣದಿಂದ ವಂಚಿತರಾಗದೇ ಸ್ವಸ್ಥ್ಯ ಸಮಾಜ ನಿರ್ಮಿಸಬೇಕು’ ಎಂದರು.
ಸಂಘಟನೆಯ ತಾಲ್ಲೂಕು ಅಧ್ಯಕ್ಷ ಹುಲಿಮಂಗಲ ರವಿಕುಮಾರ್, ಕಾರ್ಯದರ್ಶಿ ಸಬ್ಮಂಗಲ ರವಿ, ಮುಖಂಡರಾದ ಎ.ಲವ, ವಜ್ರಪ್ಪ, ನಾಗರಾಜು, ದೇವರಾಜು, ರಮೇಶ್, ಪಾರ್ವತಮ್ಮ, ರಾಜಪ್ಪ, ಜೆರ್ಸಿ ಅಮಲಮೇರಿ, ಗೀತಾ ಸುರೇಶ್, ಆರತಿ, ಜಯಲಕ್ಷ್ಮೀ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.