ಹೊಸಕೋಟೆ: ‘ನಿವೃತ್ತಿ ನಂತರ ಎಲ್ಲರೂ ಸಮಾನರು. ಇದರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದವರು ಎಂಬ ತಾರತಮ್ಯ ಸಲ್ಲದು. ಎಲ್ಲರಿಗೂ ಸಮಾನ ನಿವೃತ್ತಿ ವೇತನ ಕಲ್ಪಿಸಬೇಕು’ ಎಂದು ರಾಜ್ಯ ಸರ್ಕಾರಿ ನಿವೃತ್ತ ನೌಕರರ ಕೇಂದ್ರ ಸಂಘದ ಅಧ್ಯಕ್ಷ ಡಿ.ಎನ್.ಸಂಪತ್ ಒತ್ತಾಯಿಸಿದರು.
ಸರ್ಕಾರಿ ನಿವೃತ್ತ ನೌಕರರ ಸಂಘದ ತಾಲ್ಲೂಕು ಘಟಕದ ಸಭೆಯಲ್ಲಿ ಭಾನುವಾರ ಅವರು ಮಾತನಾಡಿದರು.
ರಾಜ್ಯ ಸರ್ಕಾರಿ ನೌಕರರಿಗೆ ಈ ವರ್ಷದ ಜನವರಿ ಒಂದರಿಂದ ಕೊಡುತ್ತಿರುವ ತುಟ್ಟಿಭತ್ಯೆಯಲ್ಲಿನ ವ್ಯತ್ಯಾಸ ಸರಿಪಡಿಸುವಂತೆ, ಪೌರಾಡಳಿತ ಇಲಾಖೆ ನೌಕರರಿಗೂ ವೇತನ ಆಯೋಗದ ಪರಿಷ್ಕೃತ ವೇತನ ಕೊಡುವಂತೆ ಆಗ್ರಹಿಸಿದರು.
‘ನಿವೃತ್ತರೆಲ್ಲರೂ ತಪ್ಪದೇ ಸಂಘದ ಸದಸ್ಯರಾಗುವಂತೆ, ಕೇಂದ್ರ ಸಂಘವನ್ನು ಬಲಪಡಿಸುವಂತೆ ಮನವಿ ಮಾಡಿದರು. ಸದ್ಯದಲ್ಲೇ ಕೇಂದ್ರ ಸಂಘದ ಅಮೃತ ಮಹೋತ್ಸವ ನಡೆಸಲು ಉದ್ದೇಶಿಸಲಾಗಿದೆ’ ಎಂದು ತಿಳಿಸಿದರು.
ತಾಲ್ಲೂಕು ಘಟಕದ ಅಧ್ಯಕ್ಷ ಕೆ.ನಾರಾಯಣಸ್ವಾಮಿ ಇದ್ದರು. ಹಿರಿಯ ನಿವೃತ್ತ ನೌಕರರನ್ನು ಸನ್ಮಾನಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.