ವಿಜಯಪುರ: ಜಾನುವಾರುಗಳಿಗೆ ಮೇವು ವಿತರಣೆ ಮಾಡುವ ಮೂಲಕ ಮೇವು ಕೊರತೆ ನೀಗಿಸಲು ಜಿಲ್ಲಾಧಿಕಾರಿ ಆದೇಶದ ಮೇರೆಗೆ 3 ಲಾರಿ ಲೋಡುಗಳಷ್ಟು ಹಸಿರು ಮೇವು ಗೋ ಶಾಲೆಗೆ ವಿತರಣೆ ಮಾಡಲಾಗಿದೆ ಎಂದು ಪ್ರಭಾರ ತಹಶೀಲ್ದಾರ್ ಬಾಲಕೃಷ್ಣ ಹೇಳಿದರು.
‘ಇಲ್ಲಿನ ಪದ್ಮಾವತಿ ಗೋಶಾಲೆಯಲ್ಲಿನ 206 ರಾಸುಗಳಿಗೆ 3 ಲೋಡು ಜೋಳದ ಕಡ್ಡಿಗಳ ಮೇವು ಇಲ್ಲಿಗೆ ತಂದಿದ್ದೇವೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕಂದಾಯ ಇಲಾಖೆ, ಪಶುಪಾಲನಾ ಇಲಾಖೆಯ ಸಹಯೋಗದಲ್ಲಿ ತೀವ್ರ ಮಳೆಯ ಕೊರತೆಯಿಂದ ಮೇವಿಲ್ಲದೆ ಪರದಾಡುತ್ತಿರುವ ರಾಸುಗಳಿಗೆ ಬಳ್ಳಾರಿ ಮತ್ತು ಆಂಧ್ರಪ್ರದೇಶದಿಂದ ಮೇವು ತರಿಸಿದ್ದೇವೆ. ಜಾನುವಾರುಗಳಿಗೆ ಪೌಷ್ಟಿಕ ಆಹಾರವನ್ನು ವಿತರಣೆ ಮಾಡುತ್ತಿದ್ದೇವೆ. ಮೇವು ನಿಧಿಯಲ್ಲಿ ಒಣಹುಲ್ಲು ಮಂಡಿಬೆಲೆ, ಆಲೂರು ದುದ್ದನಹಳ್ಳಿಗೆ ಬೇಡಿಕೆಗೆ ಅನುಗುಣವಾಗಿ ಕಳುಹಿಸಿಕೊಡಲಾಗಿದೆ’ ಎಂದು ಅವರು ಹೇಳಿದರು.
ರಾಸುಗಳ ಸಾಕಾಣಿಕೆಗೆ ಕಷ್ಟವಾಗಿರುವವರು, ನೇರವಾಗಿ ನಮ್ಮ ಗಮನಕ್ಕೆ ತಂದರೆ ದಿನಕ್ಕೆ 18 ಕೆ.ಜಿ. ಹಸಿಮೇವು, 1 ಕೆ.ಜಿ.ಪೌಷ್ಟಿಕ ಆಹಾರ ವಿತರಣೆ ಮಾಡುತ್ತಿದ್ದೇವೆ ಎಂದರು.
ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ರಮೇಶ್ ಮಾತನಾಡಿ, ‘14 ನೀರಿನ ಬ್ಯಾಂಕ್ಗಳನ್ನು ತೆರೆದಿದ್ದೇವೆ. 194 ಟನ್ ಮೇವು ವಿತರಣೆ ಮಾಡಿದ್ದೇವೆ. ಜಿಲ್ಲಾಡಳಿತದ ಆದೇಶದಲ್ಲಿ ಗೋ ಶಾಲೆಗಳನ್ನು ತೆರೆಯುವಂತೆ ಸೂಚಿಸಿದ್ದಾರೆ. ಇಲ್ಲಿ ತೆರೆದಿದ್ದೇವೆ. ರೈತರು ಸಾಕಲಿಕ್ಕೆ ಕಷ್ಟವಾದರೆ ಇಲ್ಲಿಗೆ ಕರೆದುಕೊಂದು ಬಂದರೆ 18 ಕೆ.ಜಿ.ಹಸಿಮೇವು. 6 ಕೆ.ಜಿ.ಒಣ ಮೇವು, 1 ಕೆ.ಜಿ.ಪಶು ಆಹಾರ ವಿತರಣೆ ಮಾಡುತ್ತೇವೆ ಎಂದರು.
ಜಿಲ್ಲಾಧಿಕಾರಿ ಕಚೇರಿಯ ಡಾ.ವಿನುತಾ, ಡಾ.ಮಧುಸೂದನ್, ಉಪತಹಶೀಲ್ದಾರ್ ನಿಸಾರ್ ಅಹಮದ್, ರಾಜಸ್ವ ನಿರೀಕ್ಷಕ ಪ್ರಕಾಶ್, ಗ್ರಾಮಲೆಕ್ಕಾಧಿಕಾರಿ ಕುಮಾರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.