ವಿಜಯಪುರ: ನಲ್ಲೂರು ಕೋಟೆ ಗಂಗಾದೇವಿಯ ಜಾತ್ರಾ ಮಹೋತ್ಸವಕ್ಕೆ ಬುಧವಾರ ಚಾಲನೆ ನೀಡಲಾಯಿತು. ಚೋಳರ ಕಾಲದಲ್ಲಿ ನಿರ್ಮಾಣಗೊಂಡಿದೆ ಎನ್ನಲಾಗುವ ಈ ದೇವಾಲಯದ ಆವರಣದಲ್ಲಿ ಪ್ರತಿವರ್ಷ ನಡೆಯುವ ಜಾತ್ರೆಗೆ ಸುತ್ತಲಿನ 14 ಗ್ರಾಮದವರು ತಂಬಿಟ್ಟಿನ ದೀಪಗಳೊಂದಿಗೆ ಸೇರುವುದು ವಾಡಿಕೆ. ದೇವಾಲಯ ಸ್ಥಾಪನೆಯಾದ ವರ್ಷದಿಂದಲೂ ಜಾತ್ರೆ ವಿಜೃಂಭಣೆಯಿಂದ ನಡೆಯುತ್ತಿದೆ.
ಗ್ರಾಮದೇವತೆಗೆ ಪಲ್ಲಕ್ಕಿ ಉತ್ಸವ ಹಾಗೂ ದೀಪೋತ್ಸದ ಮೂಲಕ ಜನರು ಹರಕೆ ತೀರಿಸುತ್ತಾರೆ. ಬುಧವಾರ ರಾತ್ರಿಯಿಂದ ಗುರುವಾರ ಬೆಳಗಿನ ಜಾವದ ತನಕ ಸುತ್ತಲಿನಿಂದ ದೀಪಗಳನ್ನು ಹೊತ್ತುಕೊಂಡು ಬರುವ ಭಕ್ತರು ದೇವಾಲಯದ ಮುಂಭಾಗದಲ್ಲಿ ಅಗ್ನಿಕುಂಡಕ್ಕೆ ಇಳಿದು ನಡೆಯುವ ಮೂಲಕ ಹರಕೆ ತೀರಿsidruy.
ಶುಕ್ರವಾರ ದೇವಾಲಯದ ಆವರಣದಲ್ಲಿ ಜಾತ್ರೆ ಹಾಗೂ ಅನ್ನ ಸಂತರ್ಪಣೆ ಏರ್ಪಡಿಸಲಾಗುತ್ತದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಲಕ್ಷ್ಮೀನಾರಾಯಣಪ್ಪ ತಿಳಿಸಿದ್ದಾರೆ.
ಮೊದಲು ವರ್ಷಕ್ಕೊಮ್ಮೆ ಜಾತ್ರೆ ನಡೆಯುತ್ತಿತ್ತು. ಈಗ 3 ವರ್ಷಕ್ಕೊಮ್ಮೆ ಜಾತ್ರೆ ನಡೆಸುವ ಪದ್ಧತಿ ರೂಢಿಯಲ್ಲಿದೆ.
ಸುತ್ತಲಿನ ಗ್ರಾಮಗಳಾದ ನಲ್ಲೂರು, ಹೊಸನಲ್ಲೂರು, ದೇವನಾಯಕನಹಳ್ಳಿ, ಜೊನ್ನಹಳ್ಳಿ, ರೆಡ್ಡಿಹಳ್ಳಿ, ಬಿದಲಪುರ, ಬಾಲೇಪುರ, ಅರಿಶಿನಕುಂಟೆ, ನಲ್ಲಪ್ಪನಹಳ್ಳಿ, ದೊಡ್ಡಹೊಸಹಳ್ಳಿ, ಚಿಕ್ಕಹೊಸಹಳ್ಳಿ ಗ್ರಾಮಗಳಲ್ಲಿನ ಬೀದಿಗಳಲ್ಲಿ ಈಗಾಗಲೇ ವಿದ್ಯುತ್ ದೀಪಾಲಂಕಾರಗಳನ್ನು ಮಾಡಲಾಗಿದೆ. ನಲ್ಲೂರು ಮುಖ್ಯ ರಸ್ತೆಯಿಂದ ಗಂಗಾದೇವಿ ದೇವಾಲಯದವರೆಗೂ ವಿದ್ಯುತ್ ದೀಪಾಲಂಕಾರವಿರುವ ದೇವರ ಮೂರ್ತಿಯನ್ನು ಕಾಣಬಹುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.