ADVERTISEMENT

ದೇವನಹಳ್ಳಿ: ಮದ್ಯವರ್ಜನ ನವಜೀವನಕ್ಕೆ ನಾಂದಿ

ಮದ್ಯವರ್ಜನ ಶಿಬಿರಾರ್ಥಿಗಳಿಗೆ ವಿವಿಧ ಫಲ ವಿತರಣೆ

​ಪ್ರಜಾವಾಣಿ ವಾರ್ತೆ
Published 9 ಜನವರಿ 2020, 13:41 IST
Last Updated 9 ಜನವರಿ 2020, 13:41 IST
ಹಣ್ಣು ವಿತರಣಾ ಕಾರ್ಯಕ್ರಮದಲ್ಲಿ ಧರ್ಮಸ್ಥಳ ಸಂಸ್ಥೆ ವಿವಿಧ ಘಟಕದ ಅಧಿಕಾರಿಗಳು.
ಹಣ್ಣು ವಿತರಣಾ ಕಾರ್ಯಕ್ರಮದಲ್ಲಿ ಧರ್ಮಸ್ಥಳ ಸಂಸ್ಥೆ ವಿವಿಧ ಘಟಕದ ಅಧಿಕಾರಿಗಳು.   

ದೇವನಹಳ್ಳಿ: ವಿವಿಧ ಕಾರಣಗಳಿಂದ ಕುಡಿತದ ಚಟಗಳಿಗೆ ಒಳಗಾಗುವುದು ಸಹಜವಾದರೂ ಅದನ್ನು ವರ್ಜಿಸಿದರೆ ನವಜೀವನಕ್ಕೆ ನಾಂದಿಯಾಗಲಿದೆ ಎಂದು ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಸಂಸ್ಥೆ ಜಿಲ್ಲಾ ಯೋಜನಾ ನಿರ್ದೇಶಕ ಸತೀಶ್ ನಾಯ್ಕ ಹೇಳಿದರು.

ಇಲ್ಲಿನ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಅಂಗ ಸಂಸ್ಥೆಯಾದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ವತಿಯಿಂದ ಮದ್ಯವರ್ಜನ ಶಿಬಿರಾರ್ಥಿಗಳಿಗೆ ನವಜೀವನದ ಸಂಭ್ರಮಕ್ಕಾಗಿ ವಿವಿಧ ಫಲಗಳನ್ನು ವಿತರಿಸಿ ಮಾತನಾಡಿದರು.

ಶ್ರೀ ಕ್ಷೇತ್ರ ಧರ್ಮಸ್ಥಳದ ಅಂಗ ಸಂಸ್ಥೆಯಾದ ಜನ ಜಾಗೃತಿ ವೇದಿಕೆ ಇಲ್ಲಿನವರೆಗೆ ರಾಜ್ಯದಲ್ಲಿ 1,456 ಮಧ್ಯವರ್ಜನ ಶಿಬಿರಗಳನ್ನು ನಡೆಸಿ 1.23 ಲಕ್ಷ ಜನರನ್ನು ಮದ್ಯಸೇವನೆ ಮುಕ್ತರನ್ನಾಗಿ ಮಾಡಿದೆ. ಗ್ರಾಮಾಂತರ ಜಿಲ್ಲೆಯಲ್ಲಿ 19 ಮದ್ಯವರ್ಜನ ಶಿಬಿರಗಳನ್ನು ನಡೆಸಿ 1,150 ಜನರನ್ನು ಕುಡಿತದ ಚಟದಿಂದ ಹೊರಗೆ ತಂದು ನವಜೀವನ ಆರಂಭಿಸಲು ಅಪ್ತ ಸಮಾಲೋಚನೆ ನಡೆಸಲಾಗಿದೆ ಎಂದು ಹೇಳಿದರು.

ADVERTISEMENT

ಯಾವುದೇ ದುಶ್ಟಟಗಳಿಗೆ ಒಳಗಾಗುವ ಮೊದಲ ಜೀವನದ ಮೌಲ್ಯವನ್ನು ಆರ್ಥ ಮಾಡಿಕೊಳ್ಳಬೇಕು. ದುಡಿದ ಬೆವರಿನ ಹಣ ಕೆಟ್ಟ ಚಟಗಳಿಗೆ ಬಳಕೆ ಮಾಡಬಾರದು. ಅಕಾಲಿಕ ಸಾವನ್ನಪ್ಪಿ ಇಡೀ ಕುಟುಂಬವನ್ನು ಸಂಕಷ್ಟಕ್ಕೆ ದೂಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಅಖಲ ಕರ್ನಾಟಕ ಜನ ಜಾಗೃತಿ ವೇದಿಕೆ ಜಿಲ್ಲಾ ಘಟಕ ಉಪಾಧ್ಯಕ್ಷ ಬಿ.ಕೆ.ನಾರಾಯಣ ಸ್ವಾಮಿ ಮಾತನಾಡಿ, ದುಶ್ಶಟಕ್ಕೆ ಯುವಸಮುದಾಯ ಮತ್ತು ಮಧ್ಯವಯಸ್ಸಿನವರೇ ಹೆಚ್ಚು ಬಲಿಯಾಗುತ್ತಿದ್ದಾರೆ. ಕುಡಿತ ಮಾತ್ರವಲ್ಲ ಗಾಂಜಾ, ಚರಸ್, ತಂಬಾಕು ಉತ್ಪನ್ನಗಳು ಕೆಟ್ಟ ಮಾರಕ ಚಟಗಳು ಎಂಬುದನ್ನು ಪ್ರತಿಯೊಬ್ಬರು ಆರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

ಪೌರಕಾರ್ಮಿಕರು, ಕೃಷಿಕಾರ್ಮಿಕರು, ಕಟ್ಟಡ ಕೆಲಸಗಾರರು ಅತಿಹೆಚ್ಚು ಮಧ್ಯ ವ್ಯಸನಿಗಳಾಗಿದ್ದಾರೆ. ವಿಪರೀತ ಮದ್ಯ ಸೇವಿಸಿ ಬೀದಿಗಳಲ್ಲಿ ಹೊರಳಾಡುವುದು, ವಾಹನ ಚಾಲನೆ ಮಾಡುವುದು ಅಪಾಯಕಾರಿ. ಮದ್ಯಸೇವನೆ, ಗ್ರಾಮಗಳಲ್ಲಿನ ಶಾಂತಿ ಸುವ್ಯವಸ್ಥೆಯನ್ನು ಕದಡುತ್ತಿದೆ ಎಂದು ತಿಳಿಸಿದರು.

ಅಬ್ಕಾರಿ ಇಲಾಖೆ ಗ್ರಾಮಗಳಲ್ಲಿ ಚಿಲ್ಲರೆ ಮದ್ಯ ಮಾರಾಟ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ತಾಲ್ಲೂಕು ಯೋಜನಾಧಿಕಾರಿ ಅಕ್ಷತಾ ರೈ ಮಾತನಾಡಿ, ಮದ್ಯವರ್ಜಿಸಿ ನವಜೀವನಕ್ಕೆ ಬಂದಿರುವವರಿಗೆ ಸಂಸ್ಥೆ ವತಿಯಿಂದ ಸಾಲ ನೀಡಲಾಗುತ್ತದೆ. ಹೈನುಗಾರಿಕೆ, ಕುರಿ, ಕೋಳಿ ಸಾಕಾಣಿಕೆ, ವ್ಯಾಪಾರ ವಹಿವಾಟು, ಕರಕುಶಲ ತಯಾರಿಕೆ, ಮನೆಯಲ್ಲೇ ದಿನಬಳಕೆ ವಸ್ತು ತಯಾರಿಕೆ, ವಿನ್ಯಾಸ ಭರಿತ ಬಿದರಿನ ಬುಟ್ಟಿ ತಯಾರಿಕೆ ಮೊದಲಾದವುಗಳಿಗೆ ಸಾಲ ನೀಡಿ ಸಮಾಜದ ಮುಖ್ಯವಾಹಿನಿಗೆ ತರಲು ಪ್ರಯತ್ನಿಸಲಾಗುವುದೆಂದು ಹೇಳಿದರು.

ಸಂಸ್ಥೆಯ ಪ್ರಾದೇಶಿಕ ಆಧಿಕಾರಿ ಗಣೇಶ ಆಚಾರ್ಯ, ಮೇಲ್ವಿಚಾರಕ ವಿಶ್ವನಾಥ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.